ವಿಷಮಯ ಉಪ್ಪಿಟ್ಟು ಸೇವಿಸಿದ ಮಕ್ಕಳು ಅಸ್ವಸ್ಥ

ಆಲ್ಕೊಳದ ರಿಮ್ಯಾಂಡ್ ಹೋಂನಲ್ಲಿ 34 ಜನ ಮಕ್ಕಳಿಗೆ ಇಂದು ಬೆಳಿಗ್ಗೆ ತಿಂಡಿರೂಪದಲ್ಲಿ ಉಪ್ಪಿಟ್ಟನ್ನು ನೀಡಲಾಯಿತು. ಉಪ್ಪಿಟ್ಟನ್ನು ಸೇವಿಸಿದ ತಕ್ಷಣವೇ ಮೂವರು ಮಕ್ಕಳು ವಾಂತಿ ಮಾಡಿಕೊಂಡರು. ನಂತರದಲ್ಲಿ ಉಳಿದ ಮಕ್ಕಳೂ ಸಹ ವಾಂತಿ ಮಾಡಕೊಳ್ಳತೊಡಗಿದರು. ಉಪ್ಪಿಟ್ಟನ್ನು ಸೇವಿಸಿ ಸಮೀಪದಲ್ಲಿರುವ ಗಾಡಿಕೊಪ್ಪ ಸರ್ಕಾರಿ ಶಾಲೆಗೆ ವಿದ್ಯಾಭ್ಯಾಸಕ್ಕೆಂದು ಹೊರಟಿದ್ದ ಸಂದರ್ಭದಲ್ಲಿ ಈ ಪ್ರಕರಣ ನಡೆದಿದೆ.
ಆಹಾರ ವಿಷಮಯವಾಗಿದ್ದಿದ್ದರಿಂದ ಮಕ್ಕಳು ವಾಂತಿ ಮಾಡಿಕೊಂಡರೆಂದು ತಿಳಿದುಬಂದಿದೆ. ತೀವ್ರವಾಗಿ ಅಸ್ವಸ್ಥಗೊಂಡ 10 ಮಕ್ಕಳೂ ಸೇರಿದಂತೆ ರಿಮ್ಯಾಂಡ್ ಹೋಂನ ಅಷ್ಟೂ ಮಕ್ಕಳಿಗೂ ಚಿಕಿತ್ಸೆಗೊಳಪಡಿಸಲಾಗಿದೆ. ಮಕ್ಕಳು ಅಪಾಯದಿಂದ ಪಾರಾಗಿದ್ದು, ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇಡೀ ಪ್ರಕರಣದಲ್ಲಿ ರಿಮ್ಯಾಂಡ್ ಹೋಂನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಮೊದಲೇ ಸಮಾಜದಿಂದ ನಿರ್ಲಕ್ಷ್ಯಿತರಾಗಿರುವ ರಿಮ್ಯಾಂಡ್ ಹೋಂನಲ್ಲಿರುವ ಮಕ್ಕಳು ಅಧಿಕಾರಿಗಳ ನಿರ್ಲಕ್ಷ್ಯಕ್ಕೂ ಒಳಗಾಗಿದ್ದಾರೆ ಎಂಬುದಕ್ಕೆ ಈ ವಿಷಸೇರಿದ ಉಪ್ಪಿಟ್ಟೇ ಸಾಕ್ಷಿ ಒದಗಿಸುವಂತಿದೆ.











Click it and Unblock the Notifications