ಐದು ಪುತ್ಥಳಿಗಳಿಗೆ ಶೆಟ್ಟರ್ ಮಾಲಾರ್ಪಣೆ
ಸಚಿವರಾಗಿ ಅಧಿಕಾರವಹಿಸಿಕೊಂಡ ನಂತರ ಮಹಾನಗರಕ್ಕೆ ಶುಕ್ರವಾರ ಬಂದಿದ್ದ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗ್ರಾಮೀಣ ಅಭಿವೃದ್ಧಿಯಂತಹ ಮಹತ್ವದ ಇಲಾಖೆಯ ಹೊಣೆಯಿಂದಾಗಿ ಗುರುತರ ಜವಾಬ್ದಾರಿ ತಮ್ಮ ಮೇಲಿರುವುದಾಗಿ ತಿಳಿಸಿದ ಸಚಿವರು, ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಹಾಗೂ ಉದ್ಯೋಗ ಮತ್ತು ಸರ್ಕಾರದ ವಿವಿಧ ಯೋಜನೆಗಳನ್ನು ಗ್ರಾಮಗಳಿಗೆ ಕೊಂಡೊಯ್ಯುವ ಮೂಲಕ ಹಳ್ಳಿಗರ ಜೀವನ ಮಟ್ಟ ಸುಧಾರಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.
ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ನಿನ್ನೆಯಷ್ಟೇ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದ್ದು, ಪ್ರತಿಯೊಂದು ಯೋಜನೆಯ ಅನುಷ್ಠಾನದ ಬಗ್ಗೆ ವೈಯಕ್ತಿಕ ಆಸಕ್ತಿ ವಹಿಸಿ, ಅವುಗಳನ್ನು ಉದ್ದೇಶಿತ ಜನಸಮುದಾಯಕ್ಕೆ ತಲುಪಿಸಲು ಕ್ರಮಕೈಕೊಳ್ಳುವುದಾಗಿ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ನೆರೆ ಪರಿಹಾರ ಕಾರ್ಯಗಳು ಹಿಂದೆಂದಿಗಿಂತಲೂ ಚುರುಕಾಗಿ ಸಾಗಿವೆ. ಪರಿಹಾರ ವಿತರಣೆಯಲ್ಲಿ ಹಿಂದೆ ಇಂತಹ ತೀವ್ರತೆ ಇರಲಿಲ್ಲ ಎಂದು ಅವರು ನುಡಿದರು. ಗ್ರಾಮಗಳ ಸ್ಥಳಾಂತರದಂತಹ ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಸನ್ನದ್ಧವಾಗಿರುವುದನ್ನು ಕೂಡ ಅವರು ಪ್ರಸ್ತಾಪಿಸಿದರು. ಅನೇಕ ಸಂಘ ಸಂಸ್ಥೆ ಹಾಗೂ ಮಠ ಮಾನ್ಯಗಳು ಗ್ರಾಮಗಳ ನವ ನಿರ್ಮಾಣಕ್ಕೆ ಕೈಜೋಡಿಸಿರುವುದರಿಂದ ಮನೆ ಕಟ್ಟುವ ಕೆಲಸಕ್ಕೆ ಈಗಾಗಲೇ ಎಲ್ಲೆಡೆ ಚಾಲನೆ ದೊರೆತಿದೆ ಎಂದರು.
ನೆರೆ ಸಂತ್ರಸ್ತ ಪ್ರದೇಶಗಳಿಗೆ ತಾವು ಭೇಟಿ ನೀಡಿ ಪರಿಶೀಲನೆ ನಡೆಸುವುದಲ್ಲದೇ ಗ್ರಾಮೀಣ ಅಭಿವೃದ್ಧಿ,ಗ್ರಾಮ ಸಡಕ್ ಹಾಗೂ ಉದ್ಯೋಗ ಖಾತ್ರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳುವದಾಗಿ ಶೆಟ್ಟರ್ ಭರವಸೆ ನೀಡಿದರು. ತಮಗೆ ಈ ಸಚಿವ ಸ್ಥಾನ ತೃಪ್ತಿ ತಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು,ಇದರಿಂದಾಗಿ ಈ ಭಾಗದ ಜನರ ಕನಸು ಸಾಕಾರಗೊಂಡಿರುವುದಾಗಿ ತಿಳಿಸಿದರು.
ಸಚಿವರಾದ ನಂತರ ಪ್ರಥಮ ಬಾರಿಗೆ ಶುಕ್ರವಾರ ಬೆಳಿಗ್ಗೆ ಹುಬ್ಬಳ್ಳಿಗೆ ಆಗಮಿಸಿದ ಜಗದೀಶ ಶೆಟ್ಟರ ಅವರಿಗೆ ಅಭಿಮಾನಿಗಳಿಂದ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಸಚಿವರು ನಗರದಲ್ಲಿರುವ ಬಸವೇಶ್ವರ ಮೂರ್ತಿ, ಕಿತ್ತೂರ ಚೆನ್ನಮ್ಮ ಮೂರ್ತಿ, ಡಾ|| ಬಿ. ಆರ್.ಅಂಬೇಡ್ಕರ್ ಮೂರ್ತಿ, ಸದಾಶಿವ ಶೆಟ್ಟರ್ ಅವರ ಪುತ್ಥಳಿ ಹಾಗೂ ಕೇಶ್ವಾಪುರದಲ್ಲಿರುವ ಅಶ್ವಾರೂಢ ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ನಾಗಶೆಟ್ಟಿಕೊಪ್ಪದ ಮಾರುತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
(ದಟ್ಸ್ ಕನ್ನಡ ವಾರ್ತೆ)