ನೇರ ದಿಟ್ಟ ನಿರಂತರ ಶೋಭಾ ಕರಂದ್ಲಾಜೆ
ಮಂಗಳೂರು ಬೆಂಗಳೂರು ಶೈಲಿ ಕಸಿಮಾಡಿದ ಕನ್ನಡ. ಉಚ್ಛಾರಣೆ ಸ್ಪಷ್ಟ. ಧ್ವನಿಯ ಏರಿಳಿತ ಸರಾಗ. ಕಂಚಿನ ಕಂಠ. ದಿಟ್ಟ ನಿರಂತರ ವಾಹಿನಿಯಲ್ಲಿ ನೇರ ಪ್ರಶ್ನೆಗೆ ನೇರ ಉತ್ತರ, ಜಾರಿಕೆ ಹಾರಿಕೆಯ ಉತ್ತರಗಳು ಕಡಿಮೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಪಳಗಿದ ಲಕ್ಷಣಗಳು ಢಾಳವಾಗಿ ಗೋಚರ. ಮಾತನಾಡುವಾಗ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ, ವಿ ಎಸ್ ಆಚಾರ್ಯ ಮುಂತಾದವರಂತೆ ತಡವರಿಸುವುದು ಆ ಊ ಏ ಓ ಎನ್ನುವ ಶಬ್ದಗಳಿಲ್ಲ.
ಕನ್ನಡ ನಾಡಿನ ರಾಜಕೀಯ ಅಂಗಳದಲ್ಲಿ ಅನೇಕ ಮಹಿಳಾಮಣಿಯರು ರಂಗೋಲಿ ಹಾಕಿ ಹೋಗಿದ್ದಾರೆ. ಆದರೆ, ಶೋಭಾ ವಾಗ್ಝರಿಗೆ ಅವರ್ಯಾರೂ ಸಾಟಿಯಿಲ್ಲ. ನಾಗರತ್ನಮ್ಮ, ತೇಜಸ್ವಿನಿ, ಪ್ರಮೀಳಾ ನೇಸರ್ಗಿ, ರಾಣಿ ಸತೀಶ್, ನಾಗಮ್ಮ ಕೇಶವಮೂರ್ತಿ, ಮೋಟಮ್ಮ, ಬಿಟಿ ಲಲಿತಾನಾಯಕ್, ವಿಮಲಗೌಡ ಇವರೆಲ್ಲರಿಗಿಂತ ಮುಂದೆ..ಶೋಭಾ ಮುಂದೆ. ಕಳೆದ 17 ತಿಂಗಳಲ್ಲಿ ಶೋಭಾ ಓರ್ವ ಸಚಿವೆಯಾಗಿ ಅನೇಕ ಸಂದರ್ಭಗಳಲ್ಲಿ ಮಾತು, ಭಾಷಣ ಮಾಡಿದ್ದಾರೆ ನಿಜ. ಆದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ 17 ಗಂಟೆಗಳ ತರುವಾಯ ನಾವು ನೋಡಿದ, ಕೇಳಿದ ಅವರ ಸಂದರ್ಶನದಲ್ಲಿ ರಾಜ್ಯದ, ಭಾಜಪದ ರಾಜಕೀಯ ಸ್ಥಿತಿಗತಿಗಳ ಬಗೆಗೆ ಅವರ ವ್ಯಾಖ್ಯಾನಗಳ ವರಸೆ ಏಕ್ ದಂ ಸಖತ್.
ಒಟ್ಟಾರೆ ಕರ್ನಾಟಕ ಭಾಜಪ ಕೋಟೆಯ ಕಟ್ಟಾಳು. ರಾಜಕೀಯ ಕ್ಷೇತ್ರದಲ್ಲಿ ತಾವು ಯಾರಿಗೂ ಕಮ್ಮಿಯಿಲ್ಲ ಎಂದು ವಾದಿಸಿ, ಸಾಧಿಸಿ ತೋರಿಸುವ ಸ್ತ್ರೀಶಕ್ತಿ. ಓದಿ. ಸುವರ್ಣ ಚಾನಲ್ ಸಂದರ್ಶನದ ಆಯ್ದ ಭಾಗಗಳು.
(ದಟ್ಸ್ ಕನ್ನಡ ವಾರ್ತೆ)