ಕೆಎಂಎಫ್ : ಸದಾನಂದಗೌಡ ರಾಜೀನಾಮೆ ?
ಬಲ್ಲ ಮೂಲಗಳ ಪ್ರಕಾರ ಸದಾನಂದಗೌಡ ಅವರು ತಮ್ಮ ಆಪ್ತರೊಂದಿಗೆ ಈ ವಿಷಯವನ್ನು ಹಂಚಿಕೊಂಡಿದ್ದು, ಕೆಎಂಎಫ್ ಅಧ್ಯಕ್ಷ ಸ್ಥಾನ ದೊರೆಯದಿದ್ದರೆ ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಸದಾನಂದಗೌಡ ಅವರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಅಧಿಕಾರ ಅವಧಿ ಇದೇ ಡಿಸೆಂಬರ್ ಗೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಮಾತು ಕೊಟ್ಟಿದ್ದರು. ಆದರೆ, ಬಳ್ಳಾರಿಯ ಸೋಮಶೇಖರರೆಡ್ಡಿ ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿಸಿದ್ದು, ಗೌಡರ ಮುನಿಸಿಗೆ ಕಾರಣವಾಗಿದೆ. ಜೊತೆಗೆ ಯಡಿಯೂಪ್ಪ ಅವರ ಆಪ್ತ ಸಹಾಯಕ ವಿ ಪಿ ಬಳಿಗಾರ್ ಮತ್ತು ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ನೀಡಿರುವ ಪ್ರಾಮುಖ್ಯತೆ ಸದಾನಂದಗೌಡರ ಕಣ್ಣು ಕೆಂಪಗಾಗಿಸಿದೆ.
ರೆಡ್ಡಿಗಳು ಎಬ್ಬಿಸಿರುವ ಧೂಳಿಗೆ ಬಿಜೆಪಿ ಕಾದಕೆಂಡದಂತಾಗಿದ್ದು, ಸದಾನಂದಗೌಡ ಅವರ ಈ ನಿಲುವು ಯಡಿಯೂರಪ್ಪ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಯಂತೂ ತಳ್ಳಿಹಾಕುವಂತಿಲ್ಲ. ರೆಡ್ಡಿಗಳು ನಾಯಕತ್ವ ಬದಲಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
(ದಟ್ಸ್ ಕನ್ನಡ ವಾರ್ತೆ)