ಸಿಎಂ ವಿರುದ್ಧ ರೆಡ್ಡಿಗಳ ಬಂಡಾಯ

ಗದಗ ಜಿಲ್ಲಾಧಿಕಾರಿ ಎನ್ ವಿ ಪ್ರಸಾದ್ ಎತ್ತಂಗಡಿ, ಕಬ್ಬಿಣ ಅದಿರು ಲಾರಿಗಳ ಮೇಲೆ ವಿಧಿಸಿರುವ ತೆರಿಗೆ ಹಾಗೂ ನೆರೆ ಸಂತ್ರಸ್ಥರಿಗಾಗಿ ರೂಪಿಸಿರುವ ಆಸರೆ ಯೋಜನೆ ಉಸ್ತುವಾರಿಯನ್ನು ಸಂಸದ ರಾಜೀವ್ ಚಂದ್ರಶೇಖರ್ ಅವರಿಗೆ ವಹಿಸಿರುವ ಮುಖ್ಯಮಂತ್ರಿ ಕ್ರಮವನ್ನು ಜನಾರ್ದನರೆಡ್ಡಿ ವಿರೋಧಿಸಿದ್ದಾರೆ. ಪ್ರಮುಖವಾದ ಈ ಮೂರು ತೀರ್ಮಾನಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡ ಬಗ್ಗೆ ಹಾಗೂ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಕುರಿತು ಕಿಡಿಕಾರಿದ್ದಾರೆ.
ಕಂದಾಯ ಖಾತೆ ಕರುಣಾಕರರೆಡ್ಡಿ, ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಆದರೂ ಕೂಡಾ ಇಬ್ಬರ ಖಾತೆಗಳಲ್ಲಿ ಅಗತ್ಯ ಸವಾರಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕಬ್ಬಿಣ ಅದಿರು ಲಾರಿಗಳ ಮೇಲೆ ಸಾವಿರಾರು ರುಪಾಯಿ ಸುಂಕ ವಿಧಿಸಿರುವುದಕ್ಕೆ ಗಣಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರಕ್ಕೆ ಪ್ರತಿ 150 ಟನ್ ಗೆ ರುಪಾಯಿ ಎಸ್ ಟಿಎಫ್ ಸುಂಕ ಈಗಾಗಲೇ ಪಾವತಿಸಲಾಗುತ್ತಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಪುನರ್ವಸತಿ ಕಾರ್ಯಕ್ಕೆ ಗಣಿ ಉದ್ಯಮಿಗಳು 400 ರಿಂದ 500 ಕೋಟಿ ರುಪಾಯಿ ನೀಡುತ್ತಿದ್ದಾರೆ. ಇಷ್ಟಾದರೂ ಸುಂಕ ವಿಧಿಸುವುದು ಸರಿಯಲ್ಲ ಎಂದು ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications