ನೆರೆಪೀಡಿತ ಪ್ರದೇಶಗಳಿಗೆ ಲೋಕಾಯುಕ್ತ ತಂಡ ರವಾನೆ
ಗುಲ್ಬರ್ಗಾ, ಅ. 23 : ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಅತೀವೃಷ್ಟಿ ಮತ್ತು ನೆರೆಹಾವಳಿಯಿಂದ ಉಂಟಾದ ಸಾವು-ನೋವು ಮತ್ತು ನಷ್ಟ ಪರಿಹಾರ ಕಾರ್ಯಗಳಿಗೆ ಸಂಬಂಧಿಸಿದಂತೆ ಸರ್ಕಾರದ ಪರಿಹಾರ ಹಣ ಸಂತ್ರಸ್ತರಿಗೆ ತಲುಪಿರುವ ಹಾಗೂ ಹಣ ಸಮರ್ಪಕವಾಗಿ ಖರ್ಚಾಗಿರುವ ಬಗ್ಗೆ ನಿಗಾ ಇಡಲು ಕರ್ನಾಟಕ ಲೋಕಾಯುಕ್ತ ಇಲಾಖೆ ನಾಲ್ಕು ತಂಡಗಳನ್ನು ರಚಿಸಿ ಅತೀವೃಷ್ಟಿ ಮತ್ತು ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸಲು ಯೋಜಿಸಿದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಎನ್. ಹೆಗಡೆ ಅವರು ಹೇಳಿದರು.
ಗುಲ್ಬರ್ಗಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಉಪಲೋಕಾಯುಕ್ತರು, ರಾಜಿಸ್ಟ್ರಾರ್ ಮತ್ತು ಕರ್ನಾಟಕ ಲೋಕಾಯುಕ್ತದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಈ ತಂಡಗಳು ಭೇಟಿ ನೀಡುವ ಖಚಿತ ಸ್ಥಳ, ದಿನಾಂಕ ಮತ್ತು ತಂಡದಲ್ಲಿರುವ ಅಧಿಕಾರಿಗಳ ಹೆಸರು, ಮೊಬೈಲ್ ಸಂಖ್ಯೆಗಳನ್ನು ಸಹ ಒದಗಿಸಲಾಗುವುದು. ಸರ್ಕಾರ ಕೈಗೊಳ್ಳುವ ವಿವಿಧ ಪರಿಹಾರ ಕಾರ್ಯಗಳಲ್ಲಿ ಮಧ್ಯೆ ಬರುವುದು ನಮ್ಮ ಉದ್ದೇಶವಲ್ಲ. ಆದರೆ ಸರ್ಕಾರದ ಸೌಲಭ್ಯಗಳು ನೆರೆ ಸಂತ್ರಸ್ತರಿಗೆ ಸಮರ್ಪಕವಾಗಿ ತಲುಪಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವುದಾಗಿದೆ. ಪರಿಹಾರ ಸರಿಯಾಗಿ ಸಿಗದಿರುವ ಬಗ್ಗೆ ದೂರುಗಳೇನಾದರೂ ಬಂದರೆ ಅವುಗಳ ವಿಚಾರಣೆ ಸಹ ನಡೆಸಲಾಗುವುದು ಎಂದು ಹೇಳಿದರು.
ತಾವು ಕರ್ನಾಟಕ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಆಗಸ್ಟ್ 2006 ರಿಂದ ಒಟ್ಟು 1047 ಲೋಕಾಯುಕ್ತ ದಾಳಿಗಳನ್ನು ನಡೆಸಲಾಗಿದ್ದು, ಈ ಪ್ರಕರಣಗಳಲ್ಲಿ ಯಾವುದೇ ಒಂದು ಪ್ರಕರಣವೂ ವಿಚಾರಣೆ ಹಂತಕ್ಕೆ ಬಂದಿಲ್ಲ. ಅದೇರೀತಿ 2008-09ರಲ್ಲಿ 262 ಹಾಗೂ ಈ ವರ್ಷ ಈವರೆಗೆ 240 ಲೋಕಾಯುಕ್ತ ದಾಳಿಗಳನ್ನು ನಡೆಸಿದ್ದು, ಈ ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ತರಲು ಸರ್ಕಾರದ ಅನುಮತಿ ಬೇಕು. ಕರ್ನಾಟಕ ಲೋಕಾಯುಕ್ತವು ಸ್ವಯಂ ವಿಚಾರಣೆ ಮಾಡುವ ಅಧಿಕಾರ ಉಪಲೋಕಾಯುಕ್ತರಿಗೆ ಇರುವಂತೆ ಲೋಕಾಯುಕ್ತರಿಗೂ ಒದಗಿಸುವ ಹಾಗೂ ಸರ್ಕಾರದ ಅನುಮತಿಯಿಲ್ಲದೆ ನೇರವಾಗಿ ಕೋರ್ಟು ವಿಚಾರಣೆಗೆ ಕಳುಹಿಸುವ ಹೆಚ್ಚಿನ ಅಧಿಕಾರ ಮಾತ್ರ ಸರ್ಕಾರಕ್ಕೆ ಕೇಳುತ್ತಿದ್ದು, ಪರಮಾಧಿಕಾರ ಕೇಳುತ್ತಿಲ್ಲ ಎಂದು ಸಂತೋಷ ಎನ್ ಹೆಗಡೆ ಬೇಸರ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications