ಬನವಾಸಿ ಬಳಗದ ನೌಕರಿ ಡಾಟ್ಕಾಂ

ನಿರುದ್ಯೋಗ ಹೆಚ್ಚಿದಷ್ಟೂ ನಾಡಿನ ಏಳ್ಗೆ ಕುಂಠಿತವಾಗುತ್ತದೆ. ಕುಟುಂಬ ನಿರ್ವಹಣೆ ಕಷ್ಟಕ್ಕೆ ಬೀಳುತ್ತದೆ. ಈ ನಿಟ್ಟಿನಲ್ಲಿ, ನಮ್ಮ, ಕನ್ನಡ ನಾಡಿನ ಏಳಿಗೆಯೂ ಸಹ. ಕನ್ನಡಿಗರ ಶ್ರಮ, ದುಡಿಮೆ, ತಲಾದಾಯ ಹೆಚ್ಚಿದಷ್ಟೂ ಅನುಕೂಲ. ಆದರೆ ನೌಕರಿ ಎಲ್ಲಿ ಸಿಗುತ್ತದೆ? ಉದ್ಯೋಗ ಕರೆದು ಕೊಡುವವರಾರು? ಒಬ್ಬ ನಿರುದ್ಯೋಗಿ ಯುವಕ, ಯುವತಿಯನ್ನು ಈ ಪ್ರಶ್ನೆಗಳನ್ನು ಕಾಡುವುದು ಸಹಜ. ಇಂದು ನಮ್ಮ ನಾಡಿನಲ್ಲಿರುವ ನಿರುದ್ಯೋಗ ಸಮಸ್ಯೆಯಾಗಲೀ, ಉದ್ಯೋಗಾವಕಾಶಗಳ ಕೊರತೆ ಸಮಸ್ಯೆ ಮೇಲುನೋಟಕ್ಕೆ ಇದೆಯಷ್ಟೆ. ನಿಜವಾದ ಸಮಸ್ಯೆಗಳ ಸ್ವರೂಪ ಹೀಗಿದೆ:
* ಸರಿಯಾದ ಕೌಶಲ್ಯವಿರುವ, ಅರ್ಹ ಅಭ್ಯರ್ಥಿಗಳಿಗೆ ಅವರಿಗೆ ತಕ್ಕುದಾದ ಉದ್ಯೋಗಾವಕಾಶಗಳು ಸಕಾಲದಲ್ಲಿ ದೊರೆಯದಿರುವುದು.
* ಉತ್ತಮ ಅವಕಾಶಗಳೊಡನೆ ಕೆಲಸ ಕೊಡುವವರು ಸಿದ್ಧವಿದ್ದಾಗ, ಅರ್ಹ ಅಭ್ಯರ್ಥಿಗಳು ಅವರಿಗೆ ಸಿಗದಿರುವುದು. ಒಟ್ಟಾರೆ, ಕೆಲಸ ಬೇಕಿರುವ ಮತ್ತು ಕೆಲಸ ಕೊಡುವವರ ನಡುವೆ ಇರುವ ಕಂದಕ.
* ಅನಿಯಂತ್ರಿತ ವಲಸೆಯಿಂದ, ನಮ್ಮ ನಾಡಿನಲ್ಲಿ ಇರುವ/ಬರುವ ಎಷ್ಟೋ ಒಳ್ಳೆಯ ಕೆಲಸದ ಅವಕಾಶಗಳು ಅನ್ಯರ ಪಾಲಾಗುತ್ತಿರುವುದು.
ಈ ಮೇಲಿನ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಸಿಗಬೇಕಾದರೆ, ಒಂದು ನಾಡಿನ ಸರ್ಕಾರ, ಅಲ್ಲಿನ ಜನರು, ಚಿಂತಕರು, ಉದ್ಯಮಿಗಳು, ಒಟ್ಟಾರೆ ಇಡೀ ನಾಡಿನ ಜನರು ಈ ಕೆಳಗಿನ ವಿಚಾರಗಳ ಬಗ್ಗೆ ಆಮೂಲಾಗ್ರ ಚಿಂತನೆ ನಡೆಸುವಂತಾಗಬೇಕು. ಯೋಜನೆಗಳನ್ನು ನಿರ್ಮಿಸಿ, ಅವುಗಳ ಅನುಷ್ಠಾನದ ಬಗ್ಗೆ ಶ್ರಮಿಸಬೇಕು:
1. ಕೆಲಸ "ಬೇಕಿರುವವರು" ಮತ್ತು ಕೆಲಸ "ಕೊಡುವವರ" ನಡುವೆ ಪರಿಣಾಮಕಾರಿ ಉದ್ಯೋಗ ವಿನಿಮಯ ಆಗುವಂತಹ ವ್ಯವಸ್ಥೆಯ ರಚನೆ.
2. ಕೆಲಸ ಅರಸುತ್ತಿರುವ ಅಭ್ಯರ್ಥಿಗಳ ಕೌಶಲ್ಯಗಳು, ಸಾಮರ್ಥ್ಯಗಳು, ಕುಂದು-ಕೊರತೆಗಳ ಬಗ್ಗೆ ಅಧ್ಯಯನ.
3. ಅಭ್ಯರ್ಥಿಗಳ ಗುಣಮಟ್ಟದ ಬಗ್ಗೆ ತಯಾರಿ/ತರಬೇತಿ ನೀಡುವ ಸಂಸ್ಥೆಗಳು, ವ್ಯಕ್ತಿಗಳು, ಮತ್ತು ಅರ್ಹ ಅಭ್ಯರ್ಥಿಗಳನ್ನು ಒಂದೆಡೆ ಸೇರಿಸುವ, ವಿಚಾರ ವಿನಿಮಯ ಮಾಡಿಸುವ ವ್ಯವಸ್ಥೆಯ ನಿರ್ಮಾಣ.
ಈ ಚಿಂತನೆಯೆ ಬನವಾಸಿ ಬಳಗದ ಮಂತ್ರವೂ ಹೌದು. ಈ ನಿಟ್ಟಿನಲ್ಲಿ ಬಳಗವು ಹಲವು ಯೋಜನೆಗಳೊಡನೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಈ ಕೆಲಸಕ್ಕೆ, ಬನವಾಸಿ ಬಳಗದೊಡನೆ ಕೈ ಜೋಡಿಸಿ ದುಡಿಯುವ, ಯೋಜನೆಗಳನ್ನು ಪ್ರಾಯೋಜಿಸುವ, ಚಿಂತನೆ/ಅಧ್ಯಯನ ನಡೆಸುವ, ವಿಷಯತಜ್ಞರೊಡನೆ ಸಂಪರ್ಕ ಮಾಡಿಸುವ, ಹೀಗೇ ಹತ್ತು ಹಲವು ರೀತಿಗಳಲ್ಲಿ ಬೆಂಬಲ ನೀಡಬಯಸುವ, ನಾಡಿನ ವೃತ್ತಿಪರರೆಲ್ಲರಿಗೂ ಬನವಾಸಿ ಬಳಗವು ಈ ಮೂಲಕ ಸ್ವಾಗತ ಬಯಸುತ್ತದೆ.
ಈ ಕುರಿತು ಹೆಚ್ಚಿನ ಮಾಹಿತಿ/ವಿಚಾರ ವಿನಿಮಯಕ್ಕಾಗಿ [email protected] ವಿಳಾಸಕ್ಕೆ ಮಿಂಚಿನಿಂದ ಮಿಂಚಂಚೆ ರವಾನಿಸಿ.












Click it and Unblock the Notifications