ಶುದ್ಧಗಾಳಿಗೆ ಬೆನ್ನು ಹತ್ತಿದ ವಿಶ್ವಮಾನವ
ಶನಿವಾರ ಬೆಳಗ್ಗೆ ಕಬ್ಬನ್ ಪಾರ್ಕಿನಿಂದ ಸೈಕಲ್ ರ್ಯಾಲಿ ಶುರುವಾಗುತ್ತದೆ. ಎಂಟು ಕಿಲೋಮೀಟರ್ ಉದ್ದದ ಈ ಯಾತ್ರೆ ನಗರದ ಪ್ರಮುಖ ಸ್ಥಳಗಳಾದ ಟ್ರಿನಿಟಿ ವೃತ್ತ, ಹಲಸೂರು ಕೆರೆ, ಕಮರ್ಷಿಯಲ್ ರಸ್ತೆ, ಇಂಡಿಯನ್ ಎಕ್ಸಪ್ರೆಸ್ ಕಟ್ಟಡ ಮತ್ತು ವಿಧಾನಸಭೆ ಹಾದಿಗುಂಟ ಸಾಗಿ ಮರಳಿ ಕಬ್ಬನ್ ಉದ್ಯಾನವನದಲ್ಲಿ ಕೊನೆಗೊಳ್ಳುತ್ತದೆ. ವಾತಾವರಣ ಬದಲಾವಣೆಗೆ ಕೈಜೋಡಿಸಿರುವ ನೀವೂ ಕೂಡ ನಾಳೆ ಸೈಕಲ್ ತುಳಿಯಬಹುದು.
ವಾತಾವರಣ ಬದಲಾವಣೆಗೆ ಜಾಗತಿಕ ಮಟ್ಟದಲ್ಲಿ ಜನಜಾಗೃತಿ ಉಂಟುಮಾಡುವುದೇ ಸೈಕಲ್ ಯಾತ್ರೆಯ ಉದ್ದೇಶ. 152 ದೇಶಗಳಲ್ಲಿ ಅಕ್ಟೋಬರ್ 24ರಂದು ಕ್ಲೈಮೆಟ್ ಆಕ್ಷನ್ ಕಾರ್ಯಕ್ರಮಗಳು ಏರ್ಪಾಟಾಗಿವೆ. ವಿಶ್ವ ಮಟ್ಟದಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಿ ವಾತಾವರಣ ಪುನಃಶ್ಚೇತನಗೊಳಿಸುವ ಈ ಯಜ್ಞಕ್ಕೆ 350.org ಎಂದು ಹೆಸರು.
ವಾಹನಗಳಿಂದ ಹೊರಸೂಸುವ ಸಾರಜನಕ ಪ್ರಮಾಣ ಅಪಾಯಕಾರಿ ಮಟ್ಟ ತಲುಪುತ್ತಿದ್ದು ಅದನ್ನು ಮಟ್ಟಹಾಕುವುದಕ್ಕೆ ವಿಶ್ವ ಪ್ರಜೆಗಳು ಶತಪ್ರಯತ್ನ ಮಾಡಬೇಕಾಗಿದೆ. ಕಲುಷಿತ ಹೊಗೆ ಬಿಡದ ಸೈಕಲ್ ಸವಾರಿ ಸಾರಜನಕ ವಿರೋಧಿ ಚಳವಳಿಗೆ ದ್ಯೋತಕವಾಗಿ ನಿಂತಿದೆ. ನಾಳಿನ ಬೈಸಿಕಲ್ ಯಾತ್ರೆಗೆ 350.org ಸಂಘಟಕರು ಸುಮಾರು 1,000 ಸೈಕಲ್ ಸರದಾರರನ್ನು ನಿರೀಕ್ಷಿಸಿದ್ದಾರೆ. ನೀವೂ ಪಾಲ್ಗೊಂಡರೆ ಸಂಖ್ಯೆ 1,001ಕ್ಕೆ ಏರುತ್ತದೆ.
(ದಟ್ಸ್ ಕನ್ನಡ ವಾರ್ತೆ)