ಕನ್ನಡಿಗರ ಜೊತೆ ಪೋಲೀಸರ ಡಬಲ್ ಗೇಮ್
ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿರುವ ಮರಾಠಾ ಮಹಾ ಮೇಳಾವ್ಗೆ ಬೆಳಗಾವಿ ಜಿಲ್ಲಾ ಆಡಳಿತ ಅನುಮತಿ ನೀಡಿಲ್ಲವೆಂದು ಸ್ಪಷ್ಟಪಡಿಸಿದ್ದರೂ ಎಂಇಎಸ್ ಗುಂಡಾಗಳು ಮೇಳಾವ್ ನಡೆಸಲು ನಗರದ ಲೆಲೆ ಮೈದಾನದಲ್ಲಿ ಶಾಮಿಯಾನಾ ಹಾಕುತ್ತಿದ್ದಾರೆ. ಭಿತ್ತಿಪತ್ರಗಳನ್ನು ಹಂಚುತ್ತಿದ್ದಾರೆ.
ನಗರದಲ್ಲಿಂದು ಎಂಇಎಸ್ ಪುಂಡಾಡಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ ಕ.ರ.ವೇ ಕಾರ್ಯಕರ್ತರು ಸರಕಾರದ ಅನುಮತಿ ಪಡೆಯದೇ ಮರಾಠಿ ಮೇಳಾವ್ಗೆ ಸಿದ್ಧತೆ ನಡೆಸುತ್ತಿರುವ ಝಾಲಾಸ್ ಪಾಹಿಜೆಗಳನ್ನು ತಕ್ಷಣ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕ ವಿಜಯಕುಮಾರ ತೊರಗಲ್ಲ ಅವರಿಗೆ ಮನವಿ ಅರ್ಪಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ 'ಮುಖ್ಯಮಂತ್ರಿ' ಚಂದ್ರು ಅವರು ಸರಕಾರ ಮರಾಠಿ ಮೇಳಾವ್ಗೆ ಅನುಮತಿ ನೀಡಿಲ್ಲವೆಂದು ಬೆಂಗಳೂರಿನಲ್ಲಿ ಕುಳಿತುಕೊಂಡು ಹೇಳಿಕೆ ಕೊಡುತ್ತಿದ್ದಾರೆ. ಆದರೆ ಬೆಳಗಾವಿಯಲ್ಲಿ ಎಂಈಎಸ್ನವರು ಮೇಳಾವ್ಗೆ ಭರದ ಸಿದ್ಧತೆ ನಡೆಸಿದ್ದಾರೆ. ಸರಕಾರದ ಅನುಮತಿ ಇಲ್ಲದೇ ಈ ರಾಜ್ಯದಲ್ಲಿ ಯಾರು ಏನು ಬೇಕಾದರೂ ಮಾಡಿದರೂ ಪೋಲೀಸರು ಅವರ ವಿರುದ್ಧ ಯಾವದೇ ಕ್ರಮ ಜರುಗಿಸುವದಿಲ್ಲ. ಕನ್ನಡ ಪರ ಹೋರಾಟಗಾರರು ನಾಡಿನ ಪರ ಧ್ವನಿ ಎತ್ತಿದರೆ ಸಾಕು ಅವರನ್ನು ಬಂಧಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸರಕಾರ ನಿಜವಾಗಿಯೂ ಬೆಳಗಾವಿ ಕನ್ನಡಿಗರ ಪರವಾಗಿದ್ದರೆ ತಕ್ಷಣ ಎಚ್ಚೆತ್ತುಕೊಂಡು ಮೇಳಾವ್ ಪೆಂಡಾಲ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡು ಸಿದ್ಧತೆಗಳನ್ನು ತಡೆದು ಎಂಈಎಸ್ ಮುಖಂಡರನ್ನು ಬಂಧಿಸದಿದ್ದರೆ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಟೋಪಣ್ಣವರ ಎಚ್ಚರಿಕೆ ನೀಡಿದರು.
ಕ.ರ.ವೇ ಜಿಲ್ಲಾ ಸಂಚಾಲಕ ರಾಜು ನಾಶೀಪುಡಿ, ದೀಪಕ ಗುಡಗನಟ್ಟಿ, ಶಿವಪ್ಪಾ ಕೋರವಾರ, ಶಾಂತಾ ಟಿ.ಸಿ. ಸುರೇಶ ಗವನ್ನವರ, ಬಾಳು ಜಡಗಿ ಸೇರಿದಂತೆ ನೂರಾರು ಕಾರ್ಯ ಕರ್ತರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)