ಮಳೆ : 20 ಸಾವಿರ ಕೋಟಿ ರುಪಾಯಿ ನಷ್ಟ
ಬೆಂಗಳೂರು, ಅ. 5 : ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮುನಿಸಿಕೊಂಡ ಮಳೆರಾಯನ ಹೊಡೆತಕ್ಕೆ ಸುಮಾರು 20 ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ. ಇದನ್ನು ಸ್ಪಷ್ಟಪಡಿಸಿದವರು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ಕಂಡೂ ಕೇಳರಿಯದ ಅತಿವೃಷ್ಟಿಗೆ ರಾಜ್ಯದ ಜನತೆ ತತ್ತರಿಸಿದೆ. ಕೂಡಲೇ ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಕಳುಹಿಸಬೇಕು ಎಂದು ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಗೃಹ ಸಚಿವ ಪಿ ಚಿದಂಬರಂ ಅವರಿಗೆ ಪತ್ರ ಬರೆದಿರುವ ಯಡಿಯೂರಪ್ಪ, ರಾಜ್ಯದಲ್ಲಿ ರಾಷ್ಟ್ರೀಯ ದುರಂತ ಸಂಭವಿಸಿದ್ದು, ರಾಷ್ಟ್ರೀಯ ಪರಿಹಾರ ನಿಧಿಯಿಂದ ರಾಜ್ಯಕ್ಕೆ 20 ಸಾವಿರ ಕೋಟಿ ರುಪಾಯಿಗಳ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಉತ್ತರ ಕರ್ನಾಟಕದ ಸುಮಾರು 15 ಜಿಲ್ಲೆಗಳ 2 ಲಕ್ಷ ಮಂದಿ ವಸತಿ ಹೀನರಾಗಿದ್ದಾರೆ. ಮನೆ ಮಠಗಳೆಲ್ಲವೂ ಸಂಪೂರ್ಣ ನಾಶವಾಗಿವೆ. ಸಂತ್ರಸ್ಥರ ಬದುಕು ಚಿಂತಾಜನಕವಾಗಿವೆ. ಈಗಾಗಲೇ ಅನೇಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಪರಿಹಾರ ಕಾರ್ಯ ಮುಂದುವರಿದೆ ಎಂದು ಯಡಿಯೂರಪ್ಪ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯ ಸರಕಾರ ಆರಂಭಿಕ ಪರಿಹಾರ ಕಾರ್ಯಕ್ಕೆ 205 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ಅಲ್ಪ ಹಣದಿಂದ ನಿರಾಶ್ರಿತರಿಗೆ ಸೂಕ್ತ ಸೂರು ಸೇರಿ ಮೂಲಸೌಕರ್ಯಗಳನ್ನು ಕಲ್ಪಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೇಂದ್ರ ಸರಕಾರ ಜನರ ಸಂಕಷ್ಟ ಅರಿತು ಕೂಡಲೇ ಪರಿಹಾರ ಹಣವನ್ನು ನೀಡಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)