ಸಿದ್ದು ನನ್ನ ವಯಸ್ಸಿಗೂ ಬೆಲೆ ಕೊಡುತ್ತಿಲ್ಲ : ದೇವೇಗೌಡ

ಜೆಡಿಎಸ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಮಾತನಾಡುವಾಗ ತಾಳ್ಮೆ ಕಳೆದುಕೊಳ್ಳಬಾರದು. ಜವಾಬ್ದಾರಿಯುತ ಪ್ರತಿಪಕ್ಷದ ನಾಯಕರ ಆರೋಪವನ್ನು ಜನರು ಕೇಳಿಸಿಕೊಳ್ಳುತ್ತಾರೆ ಎಂಬ ಪ್ರಜ್ಞೆ ಇರಬೇಕು. ಅವರು ಈಗ ರಾಜ್ಯಕ್ಕೇ ನಾಯಕರು ಎಂಬುದನ್ನು ತಿಳಿದುಕೊಳ್ಳಬೇಕು' ಎಂದು ಲೇವಡಿ ಮಾಡಿದರು.
ನನ್ನ ವಿರುದ್ಧ ಟೀಕೆಗೆ ಎಂದೂ ಉತ್ತರಿಸಿಲ್ಲ. ಆದರೆ, ಸಿದ್ದರಾಮಯ್ಯ ಅವರ ಪೊಳ್ಳು ಮಾತುಗಳನ್ನು ಕಾಂಗ್ರೆಸ್ ಹೈಕಮಾಂಡ್ ಒಪ್ಪದು. ಹೈಕಮಾಂಡ್
ಈ ಬಗ್ಗೆ ಗಮನ ಹರಿಸುವುದೆಂದು ಭಾವಿಸುತ್ತೇನೆ' ಎಂದು ಅಭಿಪ್ರಾಯಪಟ್ಟರು. 'ದೇವರಾಜ ಅರಸು ಕಾಲದಲ್ಲಿ ಟವೆಲ್ ಸುತ್ತಿಕೊಂಡು ಹಾಗೂ ಗುಂಡೂರಾವ್ ಅವಧಿಯಲ್ಲಿ ಬಂಡಿ ಓಡಿಸಿಕೊಂಡು ಅವರ ಮನೆಗೆ ಹೋಗಿದ್ದೆನೆಂದು ನಮ್ಮ ನಾಯಕರು (ಸಿದ್ದು) ಹೇಳುತ್ತಾರೆ. ಅವರಿಗಿಂತ 20 ವರ್ಷ ಮೊದಲು ನಾನು ವಿಧಾನಸಭೆ ಪ್ರವೇಶಿಸಿದ್ದೇನೆ. ನಾನು ಹೆಚ್ಚು ಓದಿದವನಲ್ಲ. ಸರ್ವಜ್ಞಮೂರ್ತಿಗಳಾದ ಅವರು ವಕೀಲರು. ಹೀಗಾಗಿ, ನಾನು ಪ್ರತಿಪಕ್ಷದ ನಾಯಕನಾಗಿದ್ದಾಗಿನ 5 ವರ್ಷದ ವಿಧಾನಸಭೆ ಕಲಾಪದ ವರದಿ ತರಿಸಿಕೊಂಡು ಕಿಂಚಿತ್ತಾದರೂ ಓದಲಿ' ಎಂದು ಕಿವಿಮಾತು ಹೇಳಿದರು.
ಒಂದಂತೂ ಸತ್ಯ. ನಾನು ಬಂಡಿ ಹೊಡೆದಿದ್ದು ನಿಜ. ರಾವಂದೂರು ಬಸಪ್ಪ ಶೆಟ್ಟರಿಗೆ ಹೊಗೆಸೊಪ್ಪು ಮಾರಲು ಬಂಡಿಯಲ್ಲಿ ಹೋಗುತ್ತಿದ್ದೆ. ಗುಂಡೂರಾವ್ ಮನೆಗೆ ಬಂಡಿ ಗಾಡಿಯಲ್ಲಿ ತೆರಳಲಿಲ್ಲ' ಎಂದೂ ಚಟಾಕಿ ಹಾರಿಸಿದರು. ರಾಜ್ಯಕ್ಕೆ ನಾನೇನು ಮಾಡಿದ್ದೇನೆ ಎಂಬುದು ಸೆಕೆಂಡರಿ. ಆದರೆ, ಸಿದ್ದರಾಮಯ್ಯ ಆರೋಪ ಮಾಡುವಾಗ ನನ್ನ ವಯಸ್ಸನ್ನಾದರೂ ನೋಡಬೇಕು. ಈ ಟೀಕೆಯಿಂದಲೇ ಅವರ ನಾಯಕತ್ವದ ಬೆಳವಣಿಗೆ ಆಗುತ್ತದೆ ಎಂದಾದರೆ ಆಗಲಿ' ಎಂದು ವ್ಯಂಗ್ಯವಾಡಿದರು.
ಗೌಡರೇ ಸರಿಯಾಗಿರುವಾಗ ನಾನೇಕೆ ಕಳೆದುಕೊಳ್ಳಲಿ
ಮಾನಸಿಕವಾಗಿ ದೇವೇಗೌಡರೇ ಸ್ತಿಮಿತ ಕಳೆದುಕೊಂಡಿಲ್ಲ. ನಾನೇಕೆ ಕಳೆದುಕೊಳ್ಳಬೇಕು ? ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ದೇವೇಗೌಡರಿಗೆ 77 ವರ್ಷ ವಯಸ್ಸಾಗಿದೆ. ಮಾನಸಿಕವಾಗಿ ಅವರೇ ಸರಿಯಾಗಿ ಇರುವಾಗ 61 ವರ್ಷ ವಯಸ್ಸಿನ ನಾನು ಸ್ತಿಮಿತ ಕಳೆದುಕೊಳ್ಳಲು ಸಾಧ್ಯವೇ ? ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಕೇಳಿದರು. ನನ್ನ ವಯಸ್ಸಿಗಾದರೂ ಸಿದ್ದರಾಮಯ್ಯ ಬೆಲೆ ಕೊಡಬೇಡವೇ ? ಎಂದು ಗೌಡರು ಹೇಳಿದ್ದಾರೆ. ಗೌಡರು ಮಾತ್ರವಲ್ಲ ವಯಸ್ಸಾದ ಎಲ್ಲರನ್ನೂ ನಾನು ಗೌರವಿಸುತ್ತೇನೆ. ಹಾಗೆಯೇ ಗೌಡರಿಗೂ ಗೌರವ ಕೊಡುತ್ತೇನೆ. ಆದರೆ, ಅವರು ಹೇಳಿದ ಮಾತುಗಳನ್ನು ಸುಮ್ಮನೆ ಸ್ವೀಕರಿಸುವುದಿಲ್ಲ' ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications