ಪ್ರೇಮ ಪ್ರಸಂಗ ಅಪ್ರಾಪ್ತೆಯೊಂದಿಗೆ ಪಾದ್ರಿ ಪರಾರಿ
ಬೆಂಗಳೂರು, ಸೆ. 16 : ಸಂಗೀತ ಕಲಿಸುತ್ತಿದ್ದ ಪಾದ್ರಿಯೊಬ್ಬ ಅಪ್ರಾಪ್ತ ಶಿಷ್ಯೆಯೊಂದಿಗೆ ಪರಾರಿಯಾದ ಘಟನೆ ಹೈಕೋರ್ಟ್ ನಲ್ಲಿ ಬೆಳಕಿಗೆ ಬಂದಿದೆ. ನಾಪತ್ತೆಯಾದ ಗುರು-ಶಿಷ್ಯೆಯನ್ನು ನಾಲ್ಕೈದು ರಾಜ್ಯದಲ್ಲಿ ಹುಡುಕಿದರೂ ಪತ್ತೆಯಾಗದೆ, ಪೊಲೀಸರು ಪರದಾಡುವಂತಾಗಿದೆ.
ಬೆಂಗಳೂರಿನ ವ್ಯಾಪಾರಿ ಸಮುದಾಯದ ಶ್ರೀಮಂತ ತಂದೆ ಹದಿನಾರು ವರ್ಷದ ಮಗಳಲ್ಲಿದ್ದ ಸಂಗೀತಾಸಕ್ತಿ ಗಮನಿಸಿ, ಕಲಿಕೆಗೆ ಕಳುಹಿಸುತ್ತಾರೆ. ಹದಿಹರೆಯದ ಹುಡುಗಿ ಮನೆಗೆ ಬಂದರೆ ಸಂಗೀತ ಮೇಷ್ಟ್ರ ಕುರಿತೇ ಮಾತು. ಚೆನ್ನಾಗಿ ಕಲಿಸುತ್ತಾರೆ. ಗಿಳಿಗೆ ಹೇಳಿದಂತೆ ಕಲಿಸುತ್ತಾರೆ ಎಂದು ಗುರುವಿನ ಗುಣಗಾನ. ಪೊಷಕರಿಗೆ ಯಾವುದೇ ಅನುಮಾನ ಬರಲಿಲ್ಲ. ಮಗಳು ಚೆನ್ನಾಗಿ ಕಲಿಯಲಿ ಎಂದು ಉತ್ತೇಜಿಸುತ್ತಿದ್ದರು. ಆದರೆ, ಮಗಳು ಒಂದು ದಿನ ಏಕಾಏಕಿ ನಾಪತ್ತೆ. ಅದೂ ಸಂಗೀತ ಕಲಿಸುವ ಗುರುವಿನೊಂದಿಗೆ!
ಅಪ್ರಾಪ್ತ ವಯಸ್ಸಿನ ಮಗಳ ಮನಸ್ಸು ಕೆಡಿಸಿ ಪಾದ್ರಿ ಅಪಹರಿಸಿದ್ದಾರೆ. ಆಕೆಯನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಕ್ರಮಬದ್ದವಾಗಿ ತನಿಖೆ ನಡೆಸುತ್ತಿಲ್ಲ ಎಂದು ಪೊಷಕರು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಇಬ್ಬರನ್ನೂ ಹುಡುಕಿ ತರುವಂತೆ ಪೊಲೀಸರಿಗೆ ಈ ಹಿಂದೆ ಆದೇಶಿಸಿತ್ತು.
ಮಂಗಳವಾರ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಹಾಗೂ ನ್ಯಾಯಮೂರ್ತಿ ಜವ್ವಾದ್ ರಹೀಂ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಹುಡುಕಲಾಗಿದೆ. ಚರ್ಚ್ ಆಡಳಿತಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ. ನಾಪತ್ತೆಯಾದ ಪಾದ್ರಿಗೆ ದೀಕ್ಷೆ ನೀಡಿದ ಗುರುಗಳನ್ನೂ ವಿಚಾರಿಸಲಾಗಿದೆ. ದೀಕ್ಷೆ ನೀಡಿದ್ದು ನಿಜ. ಆದರೆ, ಆತನ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ ಎಂದಿದ್ದಾರೆ ಎಂಬ ವರದಿಯನ್ನು ಪೊಲೀಸರು ಪೀಠಕ್ಕೆ ಸಲ್ಲಿಸಿದರು. ವಿಚಾರಣೆ ಬಳಿಕ ಪಾದ್ರಿಯ ಸಂಬಂಧಿಕರನ್ನು ಕರೆ ತರಲು ಪೀಠ ಆದೇಶಿಸಿದೆ.
(ದಟ್ಸ್ ಕನ್ನಡ ವಾರ್ತೆ)