ಸೆ.16 ರಂದು ಸರಕಾರಿ ನೌಕರರ ಪ್ರತಿಭಟನೆ
ಬೆಂಗಳೂರು, ಸೆ. 11 : ರಾಷ್ಟ್ರೀಯ ಏಕರೂಪ ಜೀವನಾವಶ್ಯಕ ವೇತನ ನೀತಿ ರೂಪಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟವು ಸೆಪ್ಟೆಂಬರ್ 16 ರಂದು ನಗರದಲ್ಲಿ ಪ್ರತಿಭಟನೆಯನ್ನು ಆಯೋಜಿಸಿದೆ.
ಒಕ್ಕೂಟದ ಕೇಂದ್ರ ಕಚೇರಿ ಆವರಣದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನೆ ನಡೆಸಿದ ನಂತರ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಡಿ ನರಸಿಂಹಯ್ಯ ತಿಳಿಸಿದ್ದಾರೆ. ಬೆಲೆ ಏರಿಕೆಯಿಂದಾಗಿ ಜೀವನ ದುಸ್ತರವಾಗಿದೆ. ಕೇಂದ್ರ ಸರಕಾರ ಸರಕಾರಿ ನೌಕರರು ಸಮಾಜಿಕ ಅಭದ್ರತೆಯ ವಾತಾವರಣದಲ್ಲಿ ದುಡಿಯಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ರಾಜ್ಯ ಸರಕಾರ 1996ರ ಕೇಂದ್ರದ 5ನೇ ಹಾಗೂ 2006ರ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತಂದಿಲ್ಲ. ಇದರಿಂದಾಗಿ ನೌಕರರು ಮಾಸಿಕ ಒಂದು ಸಾವಿರದಿಂದ 30 ಸಾವಿರ ರುಪಾಯಿ ವರೆಗೆ ಕಡಿಮೆ ವೇತನ ಪಡೆಯುತ್ತಿದ್ದಾರೆ. ಆದ್ದರಿಂದ ಸರಕಾರದ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನರಸಿಂಹಯ್ಯ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)