ಜೈಲಿನಲ್ಲಿ ಪ್ರತಿಮೆಗಳಾದ ಕನ್ನಡ ಹುಡುಗರು

ಹಿನ್ನೆಲೆ ಏನೆಂದರೆ, ಪ್ರತಿಮೆ ಅನಾವರಣದ ಮುನ್ನಾದಿನ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಾರೆಂಬ ಗುಮಾನಿಯಿಂದ ನಗರದ ಪೊಲೀಸರು ಸುಮಾರು 200 ಮಂದಿಯನ್ನು ಬಂಧಿಸಿ ಸೆರೆಮನೆಯಲ್ಲಿ ಇಟ್ಟಿದ್ದರು. ಎಲ್ಲರನ್ನೂ ಪರಪ್ಪನ ಅಗ್ರಹಾರ ಸೆರೆಮನೆಗೆ ಕೊಂಡೊಯ್ಯಲಾಗಿತ್ತಾದರೂ ಅಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ವಿವಿಧ ಪೊಲೀಸ್ ಠಾಣೆಯಲ್ಲೇ ಇಡಲಾಗಿತ್ತು. ಆನಂತರ ಕ್ರಮೇಣ ಒಬ್ಬೊಬ್ಬರನ್ನಾಗಿ ಬಿಡುಗಡೆ ಮಾಡಲಾಯಿತು. ಆದರೆ, ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುತ್ತಾರೆಂಬ ಅನುಮಾನ, ಆರೋಪದ ಮೇಲೆ ಬಂಧಿಸಲಾಗಿದ್ದ ಜಂಬೂಸವಾರಿ ದಿಣ್ಣೆಯ ಆರು ಮಂದಿ ಕೂಲಿ ಕಾರ್ಮಿಕರು ಮಾತ್ರ ಇನ್ನೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.
ಸೆರೆಮನೆಯಲ್ಲಿರುವ ಆರು ಮಂದಿ ಕನ್ನಡ ಅಭಿಮಾನಿಗಳು ಆದರೆ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗದ ಜನ. ಅವರೆಲ್ಲ ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಪೊಲೀಸರು ಆ ಸಂದರ್ಭದಲ್ಲಿ ಸಿಕ್ಕಸಿಕ್ಕವರನ್ನು ಹಿಡಿದೆಳೆದು ಜೀಪಿಗೆ ತುಂಬಿಕೊಂಡು ಹೋಗಿದ್ದರು. ಹೀಗೆ ಪೊಲೀಸರ ( ಹುಳಿಮಾವು ಪೊಲೀಸ್ ಠಾಣೆ) ವಕ್ರದೃಷ್ಟಿಗೆ ಬಿದ್ದು ಜೈಲುವಾಸಿಗಳಾಗಿರುವ ಈ ಆರು ಮಂದಿ ಅಮಾಯಕರನ್ನು ಬಿಡುಗಡೆ ಮಾಡಲು ಪೊಲೀಸರು ಇನ್ನೂ ಮುಂದಾಗಿಲ್ಲ. ಅವರು ವಿರುದ್ಧ ಇಲ್ಲಸಲ್ಲದ ಕೇಸುಗಳನ್ನು ಹಾಕಿ ಹೆಣಗಾಡುವಂತೆ ಮಾಡುತ್ತಿದ್ದಾರೆ ಎಂದು ಕನ್ನಡ ರಕ್ಷಣಾ ವೇದಿಕೆಯ ಬಿಟಿಎಂ ಲೇಔಟ್ ವಿಭಾಗದ ಅಧ್ಯಕ್ಷ ರಾಜಣ್ಣ ಮಂಗಳವಾರ ದಟ್ಸ್ ಕನ್ನಡಕ್ಕೆ ತಿಳಿಸಿದರು.
ಜೈಲಿನಲ್ಲಿ ಕೊಳೆಯುತ್ತಿರುವ ಬಡಹುಡುಗರನ್ನು ಬಿಡುಗಡೆ ಮಾಡಬೇಕೆಂದು ಪ್ರಯತ್ನಿಸುತ್ತಿರುವ ಕರವೇ ಮುಂದಾಳುಗಳಿಗೆ ಇದುವರೆಗೆ ಯಶಸ್ಸು ಸಿಕ್ಕಿಲ್ಲ. ಕೇಸುಗಳು ಇತ್ಯರ್ಥವಾಗುವ ತನಕ ತಾವೇನೂ ಮಾಡಲು ಸಾಧ್ಯವಿಲ್ಲ ಎಂದು ಬೆಂಗಳೂರು ಪೂರ್ವ ಡಿಸಿಪಿ ಹೇಳಿದ್ದಾರಂತೆ. ಯಡಿಯೂರಪ್ಪ ಅವರ ಸೂಚನೆ ಮತ್ತು ಪೊಲೀಸ್ ಕಮಿಷನರ್ ಅವರ ಆದೇಶದ ಮೇಲೆ ಶಾಂತಿ ಕದಡುತ್ತಿದ್ದವರನ್ನು ಪೊಲಿಸರು ಬಂಧಿಸಿದ್ದಾರೆ. ಮುಂದಿನ ವಿಚಾರಗಳು ಕಾನೂನಿಗೆ ಬಿಟ್ಟ ವಿಚಾರ ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದೂ ರಾಜಣ್ಣ ಹೇಳಿದರು. ನಿರಪರಾಧಿಗಳ ಸೆರೆಮನೆ ವಾಸ ತಪ್ಪಿಸಲು ಕರವೇ ಶತಪ್ರಯತ್ನ ಮಾಡುತ್ತಿರುವಾಗಿಯೂ ಈ ಉದ್ದೇಶಕ್ಕೆ ವಕೀಲ ದೊರೆರಾಜ್ ಅವರನ್ನು ನೇಮಿಸಿರುವುದಾಗಿಯೂ ರಾಜಣ್ಣ ತಿಳಿಸಿದರು.
ಅಗಸ್ಟ್ 9 ರಂದು ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣ ಕಾರ್ಯಕ್ರಮವನ್ನು ಸರಕಾರ ಆಯೋಜಿಸಿತ್ತು. ಇದಕ್ಕೆ ವಿರೋಧಿಸಿದ್ದ ವಾಟಾಳ್ ನಾಗರಾಜ್, ಟಿಎ ನಾರಾಯಣಗೌಡ, ಶಿವರಾಮೇಗೌಡ, ಪ್ರವೀಣ ಶೆಟ್ಟಿ ಸೇರಿದಂತೆ ನೂರಾರು ಕನ್ನಡ ಪರ ಕಾರ್ಯಕರ್ತರನ್ನು ಸರಕಾರ ಜೈಲಿಗೆ ಹಾಕಿತ್ತು. ಆನಂತರ ಅವರೆಲ್ಲರೂ ಬಿಡುಗಡೆಗೊಂಡಿದ್ದಾರೆ. ಆದರೆ, ಬಾಯಿಯಿಲ್ಲದ ಬಡಪಾಯಿಗಳು ಜೈಲಿನಲ್ಲಿರುವುದು ಎಷ್ಟು ಸರಿ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications