ಸೆ.28ಕ್ಕೆ ವೈದ್ಯರ ಸಾಮೂಹಿಕ ರಾಜೀನಾಮೆ !

ಈ ಸಂಬಂಧ ಅಗಸ್ಟ್ 11 ರಂದು ಸರಕಾರಕ್ಕೆ ಮನವಿ ಸಲ್ಲಿಸಿರುವ ವೈದ್ಯಾಧಿಕಾರಿಗಳ ಸಂಘ, ರಾಷ್ಟ್ರೀಯ ಕಾರ್ಯಕ್ರಮಗಳ ಅನುಷ್ಠಾನ ವರದಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿರುವುದಾಗಿ ತಿಳಿಸಿದೆ. ಜಿಲ್ಲಾ ಆರೋಗ್ಯ ಸಭೆ ಮತ್ತು ಜಿಲ್ಲಾ ಆರೋಗ್ಯ ಮಿಷನ್ ಸೇರಿದಂತೆ ಆರೋಗ್ಯ ಇಲಾಖೆ ಕರೆಯುವ ಯಾವುದೇ ಸಭೆಯಲ್ಲೂ ಪಾಲ್ಗೊಳ್ಳುವುದಿಲ್ಲ ಎಂದು ಸಂಘದ ಅಧ್ಯಕ್ಷ ಡಾ ಎಚ್ ಎನ್ ರವೀಂದ್ರ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ್ದಾರೆ.
ತಹಸೀಲ್ದಾರ್ ಗೆ ಸಮಾನದ ವೈದ್ಯಾಧಿಕಾರಿ ಹುದ್ದೆಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಕ್ಲಿಷ್ಟಕರ ಸನ್ನಿವೇಶದಲ್ಲಿ ಕೆಲಸ ಮಾಡುವ ವೈದ್ಯರಿಗೆ ಸರಕಾರ ಸವಲತ್ತು ಕೊಡುವುದಿಲ್ಲ. ಇತ್ತ ಸೇವೆ ಕಾಯಂಗೊಳಿಸುವುದಿಲ್ಲ. ನ್ಯಾಯಯುತವಾಗಿ ನೀಡಬೇಕಾದ ವೇತನ ಭತ್ಯೆಯಲ್ಲೂ ತಾರತಮ್ಯ ಅನುಸರಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಸರಕಾರಿ ಕೆಲಸ ಬಿಡಲು ಸಿದ್ದರಿದ್ದು, ಎಲ್ಲರೂ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದೇವೆ. ಈಗಾಗಲೇ 2500 ವೈದ್ಯರು ರಾಜೀನಾಮೆ ಪತ್ರ ನೀಡಿದ್ದು, ಅವೆಲ್ಲವನ್ನೂ ಸಂಘದ ಕಚೇರಿಯಲ್ಲಿ ಸಂಗ್ರಹಿಸಿಡಲಾಗಿದೆ. ಸರಕಾರ ಬೇಡಿಕೆ ಈಡೇರಿಸದಿದ್ದರೆ, ಸಾಮೂಹಿಕ ರಾಜೀನಾಮೆ ನೀಡುವುದು ವೈದ್ಯರ ಇಚ್ಛೆಗೆ ಬಿಟ್ಟ ವಿಚಾರ ಯಾರ ಮೇಲೂ ಒತ್ತಡ ಹಾಕಿಲ್ಲ ಎಂದು ರವೀಂದ್ರ ಹೇಳಿದರು. ರಾಜ್ಯಾದ್ಯಂತ 4100 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.
ಬೇಡಿಕೆಗಳು
* ಗುತ್ತಿಗೆ ವೈದ್ಯರ ಕಾಯಂಗೊಳಿಸುವುದು.
* ವೇತನ ಭತ್ಯೆ ನೀಡಿಕೆ
* ಗುತ್ತಿಗೆ ಅವಧಿ ಉನ್ನತ ಶಿಕ್ಷಣಕ್ಕೆ ಪರಿಗಣನೆ
* ಕಾಲಮಿತ ಬಡ್ತಿ
* ವೈದ್ಯಾಧಿಕಾರಿ ಹುದ್ದೆ ಬಡ್ತಿ
* ಮೂಲಸೌಕರ್ಯ ನೀಡುವುದು
ರಾಜ್ಯದಲ್ಲಿ ಹಂದಿಜ್ವರ ಮೀತಿಮೀರಿದೆ. ಸತ್ತವರ ಸಂಖ್ಯೆ ಪುಣೆಯನ್ನೂ ಮೀರಿಸಿದೆ. ಇದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಚಿಕೂನ್ ಗುನ್ಯಾ, ಡೆಂಘೀ ಜ್ವರ ಜನರ ಪ್ರಾಣವನ್ನು ನಿತ್ಯ ತಿಂದು ಹಾಕುತ್ತಿವೆ. ಈ ಸಮಯದಲ್ಲಿ ವೈದ್ಯರು ಮುಷ್ಕರ ಇಲ್ಲವೇ ರಾಜೀನಾಮೆ ನೀಡುವಂಥ ಪರಿಸ್ಥಿತಿ ಉದ್ಬವಿಸಿದರೆ, ಜನರನ್ನು ರಕ್ಷಿಸುವವರು ಯಾರು ? ಮುಖ್ಯಮಂತ್ರಿಗಳು ಚೀನಾ ಪ್ರವಾಸದಲ್ಲಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಹೈದರಾಬಾದ್ ನ ಬೇಗಂಪೇಟೆಯಲ್ಲಿರುವ ದಿವಂಗತ ಮುಖ್ಯಮಂತ್ರಿ ರಾಜಶೇಖರರೆಡ್ಡಿ ಅವರ ಮನೆಯಲ್ಲಿ ಇದ್ದಾರೆ. ಆರೋಗ್ಯ ಇಲಾಖೆ ಕಾರ್ಯದರ್ಶಿ ಎ ಆರ್ ಪೆರುಮಾಳ್ ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಿದ್ದಾರೆ. ಜನರನ್ನು ಆ ಭಗವಂತನೇ ಕಾಪಾಡಬೇಕು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications