ಶುಕ್ರವಾರ ಸರಕಾರಿ ರಜೆ, ಯಾಕೆ ಬೇಕಿತ್ತು?
ಮುಖ್ಯಮಂತ್ರಿ ಯಡಿಯೂರಪ್ಪ ಚೀನಾ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಸಂಪುಟ ಸಭೆಯ ನೇತೃತ್ವ ವಹಿಸಿದ್ದ ಸಚಿವ ಆಚಾರ್ಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸೆಫ್ಟೆಂಬರ್ 4 ರಂದು ಸರಕಾರಿ ಕಚೇರಿ, ಶಾಲಾ ಕಾಲೇಜ್ ಗಳು ರಜೆ ಘೋಷಣೆ ಮಾಡಿರುವ ಸಂಗತಿ ತಿಳಿಸಿದರು. ವೈಎಸ್ಆರ್ ಅಂತ್ಯಕ್ರಿಯೆಗೆ ಸಚಿವರ ನಿಯೋಗ ಇಂದು ಹೈದರಾಬಾದ್ ಗೆ ತೆರಳುತ್ತಿದ್ದು, ನಿಯೋಗದಲ್ಲಿ ಸಚಿವರಾದ ವಿ ಎಸ್ ಆಚಾರ್ಯ, ಆರ್ ಅಶೋಕ್, ರಾಮಚಂದ್ರೇಗೌಡ, ಜಿ ಜನಾರ್ದನರೆಡ್ಡಿ ಇರಲಿದ್ದಾರೆ.
ಪಕ್ಕದ ರಾಜ್ಯದ ಒಬ್ಬ ಹಿರಿಯ ನಾಯಕ ದುರ್ಘಟನೆಯಲ್ಲಿ ಅಸುನೀಗಿದುದಕ್ಕೆ ಶೋಕವ್ಯಕ್ತಪಡಿಸುವುದು ಮಾನವೀಯ ಗುಣ. ಆದರೆ, ಆ ರಾಜ್ಯ ಮುಖ್ಯಮಂತ್ರಿ ತೀರಿಕೊಂಡರೆ ಕರ್ನಾಟಕದಲ್ಲಿ ರಜೆ ಘೋಷಿಸುವ ಪ್ರಮೇಯ ಇರಲಿಲ್ಲ. ಹಂದಿಜ್ವರದ ಹಿನ್ನೆಲೆಯಲ್ಲಿ ಶಾಲಾಕಾಲೇಜುಗಳು ರಜೆ ಕೊಟ್ಟಿದ್ದವು. ಪಾಠ ಪ್ರವಚನಗಳು ನಿಯಮಿತವಾಗಿ ನಡೆಯದೆ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದೆ.
ಅಲ್ಲದೆ, ಆರ್ಥಿಕ ಹಿಂಜರಿಕೆ ಈ ದಿನಗಳಲ್ಲಿ ಉತ್ಪಾದನೆಯನ್ನು ಕುಂಠಿತ ಮಾಡುವ ರಜೆ ಬೇಕಿರಲಿಲ್ಲ. ಕರ್ನಾಟಕದ ಸರಕಾರಿ ದೊರೆಗಳು ರಜೆ ಘೋಷಿಸುವ ಮೂಲಕ ಕೆಟ್ಟ ಪರಿಪಾಠವನ್ನು ಜಾರಿಗೆ ತಂದಿದ್ದಾರೆ. ಪ್ರಧಾನಿ, ರಾಷ್ಟ್ರಪತಿಗಳು ತೀರಿದಾಗ ರಜೆ ಕೊಡಬೇಕೆ ಬೇಡವೇ ಎಂಬ ಚರ್ಚೆಗಳು ನಡೆದಿರುವಾಗ ಸೆಪ್ಟಂಬರ್ 4ರ ಶುಕ್ರವಾರದ ರಜೆ ನಮ್ಮ ಪ್ರಕಾರ ಅಸಿಂಧು.
ತಮಿಳು ನಾಡಿನಲ್ಲೂ ಶುಕ್ರವಾರ ರಜೆ ಘೋಷಿಸಲಾಗಿದೆ. ಈ ಘೋಷಣೆ ಬೆಳಗ್ಗೆಯೇ ಹೊರಬಿತ್ತು. ಪೆರಿಯಣ್ಣ ರಜೆ ಕೊಟ್ಟರೆಂದು ಚಿನ್ನ ತಂಬಿ ಯಡಿಯೂರಪ್ಪ ರಜೆ ಪ್ರಕಟಿಸಿದ್ದಾರೆಂಬ ವಿಮರ್ಶೆ ಕುಹಕವಾಗುವುದಿಲ್ಲ.
(ದಟ್ಸ್ ಕನ್ನಡ ವಾರ್ತೆ)