700 ಮೆವ್ಯಾ ತದಡಿ ವಿದ್ಯುತ್ ಸ್ಥಾವರಕ್ಕೆ ಅಸ್ತು
ಶಿವಮೊಗ್ಗ, ಸೆ. 3 : ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ 700 ಮೆಗಾ ವ್ಯಾಟ್ ಸಾಮರ್ಥ್ಯದ ಮೂರು ಅನಿಲ ಉತ್ಪಾದನೆ ಕೇಂದ್ರಗಳನ್ನು ಉದ್ದೇಶಿತ ಉತ್ತರ ಕನ್ನಡ ಜಿಲ್ಲೆಯ ತದಡಿ ವಿದ್ಯುತ್ ಸ್ಥಾವರದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಇದರೊಂದಿಗೆ ಇದೇ ಸ್ಥಳದಲ್ಲಿ 4000 ಮೆಗಾ ವ್ಯಾಟ್ ಅಲ್ಟ್ರಾ ಫವರ್ ವಿದ್ಯುತ್ ಕೇಂದ್ರ ಸ್ಥಾಪಿಸಲಾಗುವುದು ಎಂದರು. ಉಷ್ಣ ಸ್ಥಾವರ ಸ್ಥಾಪನೆಯಿಂದ ಪರಿಸರ ನಾಶವಾಗಲಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಾವರ ಸ್ಥಾಪನೆಗೆ ಪರಸರವಾದಿಗಳು, ರೈತರು, ಧಾರ್ಮಿಕ ಮುಖಂಡರು ವಿರೋಧ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಅನಿಲ ಸಂಬಂಧಿತ ಸ್ಥಾವರ ಸ್ಥಾಪಿಸಲು ಮುಂದಾಗಿರುವುದಾಗಿ ಹೇಳಿದರು.
ಮುಂದಿನ ವರ್ಷ ಸ್ಥಾವರಕ್ಕೆ ಚಾಲನೆ ನೀಡಲಾಗುವುದು. ಇದರ ವೆಚ್ಚಕ್ಕೆ ಮೊದಲೇ ಹಂತದಲ್ಲಿ 400 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಲಾಗುವುದು. ವಿದ್ಯುತ್ ಸ್ಥಾವರಕ್ಕೆ ಬೇಕಿರುವ ಅಗತ್ಯ ಕ್ರಮಗಳನ್ನು ಈಗಾಗಲೇ ಕೆಪಿಟಿಸಿಎಲ್ ಆರಂಭಿಸಿದೆ. ಇದರ ಟೆಂಡರ್ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಈಶ್ವರಪ್ಪ ಹೇಳಿದರು.
ಯೋಜನೆಗೆ ಸಂಬಂಧಿಸಿದಂತೆ ಸುಮಾರು 1800 ಎಕರೆ ಪ್ರದೇಶವನ್ನು ವಶಪಡಿಸಿಕೊಳ್ಳಲಾಗಿದೆ. 300 ಎಕರೆ ಪ್ರದೇಶದಲ್ಲಿ ಸ್ಥಾವರ ನಿರ್ಮಾಣ ಮಾಡಲಾಗುವುದು. ನಂತರ ಎರಡನೇ ಹಂತದಲ್ಲಿ 700 ಮೆಗಾವ್ಯಾಟ್ ಅನಿಲ ಉತ್ಪಾದನೆಯ ಮೂರು ಸ್ಥಾವರಗಳು ಕಾಮಗಾರಿ ಆರಂಭಿಸಲಾಗುವುದು ಎಂದು ಈಶ್ವರಪ್ಪ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications