ಬೆಂಗಳೂರು-ಮಂಗಳೂರು ರೈಲಿಗೆ ಚಾಲನೆ
ಮಂಗಳೂರು, ಆ. 29 : ಕಳೆದ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು-ಮಂಗಳೂರು ಹಗಲು ರೈಲಿಗೆ ಇಂದು ಅಧಿಕೃತ ಹಸಿರು ನಿಶಾನೆ ದೊರೆತಿದ್ದು, ಮಂಗಳೂರಿಗರ ಕನಸು ನನಸಾಗಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ ಎಚ್ ಮುನಿಯಪ್ಪ ಇಂದು ಮಂಗಳೂರಿನಲ್ಲಿ ಬೆಂಗಳೂರು-ಮಂಗಳೂರು ನೂತನ ರೈಲಿಗೆ ಚಾಲನೆ ನೀಡಿದರು.
ವಾರದಲ್ಲಿ ಮೂರು ದಿನ ಸಂಚರಿಸುವ ಈ ರೈಲು ಗಾಡಿಯು ರೈಲು ಗಾಡಿ ಸಂಖ್ಯೆ 6515 ಯಶವಂತಪುರ- ಮಂಗಳೂರು ಎಕ್ಸ್ ಪ್ರೆಸ್ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಯಶವಂತಪುರದಿಂದ ಬೆಳಿಗ್ಗೆ 7.30ಕ್ಕೆ ಹೊರಟು ಮಂಗಳೂರಿಗೆ ಸಂಜೆ 6.55ಕ್ಕೆ ಸೇರಲಿದೆ. ಗಾಡಿ ಸಂಖ್ಯೆ 6516 ಮಂಗಳೂರು-ಯಶವಂತಪುರ ಎಕ್ಸ್ಪ್ರೆಸ್ ಮಂಗಳವಾರ, ಗುರುವಾರ ಮತ್ತು ಶನಿವಾರಗಳಂದು ಮಂಗಳೂರಿನಿಂದ ಬೆಳಿಗ್ಗೆ 8.40ಕ್ಕೆ ಹೊರಟು ಯಶವಂತಪುರ ರೈಲುನಿಲ್ದಾಣವನ್ನು ರಾತ್ರಿ 7 ಗಂಟೆಗೆ ಸೇರಲಿದೆ. ಈ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್ ,ಕಬಕಪುತ್ತೂರು, ಬಂಟ್ವಾಳ ರೈಲು ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಂ ವೀರಪ್ಪ ಮೊಯ್ಲಿ, ದಶಕಗಳಿಂದ ಮಂಗಳೂರಿಗರು ಹಗಲು ರೈಲು ಬೇಕು ಎಂದು ಕಾಣುತ್ತಿದ್ದ ಕನಸು ಇಂದು ಕೇಂದ್ರ ಸರಕಾರ ಈಡೇರಿಸಿದೆ. ಕನಸು ಕಾಣುವ ಸಮಯ ಮುಗಿದಿದ್ದು, ಪ್ರಯಾಣಿಸುವ ಕಾಲ ಬಂದಿದೆ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ, ಮಾಜಿ ಸಚಿವ ರಮಾನಾಥ್ ರೈ, ಶಾಸಕ ಯು ಟಿ ಖಾದರ್, ಬಿ ನಾಗರಾಜ್ ಶೆಟ್ಟಿ ಮತ್ತು ಮಂಗಳೂರು ಮೇಯರ್ ಶಂಕರ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications