Get Updates
Get notified of breaking news, exclusive insights, and must-see stories!

ಸೋಮಣ್ಣ ಸೋಲು ಸಿಎಂಗೆ ಪೀಕಲಾಟ

V Somanna
ಬೆಂಗಳೂರು, ಆ. 21 : ಕೊನೆಗೂ ರಾಜ್ಯದ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹಿನ್ನೆಡೆ ಅನುಭವಿಸಿದೆ. ಈ ವಿದ್ಯಮಾನ ಕಾಂಗ್ರೆಸ್ಸಗೇನು ಹೊಸತಲ್ಲ. ಬಿಜೆಪಿಯ ಆಪರೇಷನ್ ಕಮಲ ಕೈಕೊಟ್ಟಿದೆ. ಮಾಡಿದ ಎಲ್ಲ ಶಸ್ತ್ರ ಚಿಕಿತ್ಸೆಗಳೂ ಯಶಸ್ವಿಯಾಗುವುದಿಲ್ಲ, ಕೆಲವು ಅಸಫಲವಾಗಿ ರೋಗಿ ಬಲಿಯಾಗುತ್ತಾನೆ ಎಂಬ ನೀತಿಯನ್ನು ಸಾರಿಹೇಳುತ್ತಿದೆ. ಜೊತೆಗೆ ಗೋವಿಂದರಾಜ ನಗರ ಕ್ಷೇತ್ರದಲ್ಲಿ ಅನಿರೀಕ್ಷಿತ ಫಲಿತಾಂಶ ಹೊರಬರುವ ಮೂಲಕ ಬಿಜೆಪಿ ಹಾಗೂ ಸರಕಾರಕ್ಕೆ ಮುಖಭಂಗವಾಗಿದೆ. ಮೈಸೂರು ಕರ್ನಾಟಕ ಪ್ರಾಂತ್ಯದಲ್ಲಿ ಜೆಡಿಎಸ್ ತನ್ನ ಪಾರುಪತ್ಯವನ್ನು ಮುಂದುವರೆಸಿದ್ದು, ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಅರ್ಹ ಜಯ ದಾಖಲಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆದಿದೆ.

ಕಳೆದ ವಿಧಾನಸಭೆ, ಉಪಚುನಾವಣೆ ಮತ್ತು ಇಂದಿನ ಉಪಚುನಾವಣೆಗಳನ್ನು ತಾಳೆ ಹಾಕಿದ್ದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹಿನ್ನೆಡೆ ಕಾಣುತ್ತಲೇ ಇದೆ. ಚಿತ್ತಾಪುರ, ಕೊಳ್ಳೇಗಾಲ, ಚನ್ನಪಟ್ಟಣ ಮತ್ತು ಗೋವಿಂದರಾಜ ನಗರ ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿ ಇದ್ದವು. ಜೆಡಿಎಸ್ ಬೆಂಬಲದ ಮೂಲಕ ಗೋವಿಂದರಾಜನಗರದಲ್ಲಿ ಗೆಲುವು ಸಾಧಿಸಿದ್ದನ್ನು ಬಿಟ್ಟರೆ, ಉಳಿದ ಕ್ಷೇತ್ರಗಳಲ್ಲಿ ಕೈ ಕೈಂಕರ್ಯ ಕೆಲಸ ಮಾಡಿಲ್ಲ. ಕೇಂದ್ರದ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ ಖರ್ಗೆ ಅವರನ್ನೇ ಜನ ಸೋಲಿಸಿದ್ದಾರೆ ಎಂದರೆ ಕಾಂಗ್ರೆಸ್ ಪಕ್ಷದ ನಾಯಕರು ಅತ್ಮಲೋಕನ ಮಾಡಿಕೊಳ್ಳಲು ಸಕಾಲ. ಜೆಡಿಎಸ್ ಮತ್ತೆ ಈ ಚುನಾವಣೆಯಲ್ಲಿ ತನ್ನ ಶಕ್ತಿ ತೋರಿಸಿದೆ. ನಿರೀಕ್ಷೆಯಂತೆ ರಾಮನಗರದಲ್ಲಿ ಗೆದ್ದಿದ್ದರೆ, ಚನ್ನಪಟ್ಟಣ ಬೋನಸ್ ಜಯಭೇರಿ. ಮತಹಾಕಿ ಗೆಲ್ಲಿಸಿರಿ ಎಂದು ಕಣ್ಣೀರಿಟ್ಟಿದ್ದ ಕುಮಾರಸ್ವಾಮಿಗೆ ಅಲ್ಲಿನ ಮತದಾರ ಕೈಹಿಡಿದು ಮಾನ ಕಾಪಾಡಿದ್ದಾನೆ.

ರಾಜ್ಯದ ಗಮನ ಸೆಳೆದಿದ್ದ ಗೋವಿಂದರಾಜ ನಗರದ ಕ್ಷೇತ್ರದಲ್ಲಿ ಯಾರೂ ನಿರೀಕ್ಷಿಸಿರದ ಫಲಿತಾಂಶ ಪ್ರಕಟಗೊಂಡಿದ್ದು, ಮುಜರಾಯಿ ಮತ್ತು ವಸತಿ ಖಾತೆ ಸಚಿವ ವಿ ಸೋಮಣ್ಣ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ವಿರುದ್ದ ಸೋಲನುಭಿಸಿದ್ದಾರೆ. ಗೋವಿಂದರಾಜ ನಗರದಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು. ಈ ಮೂಲಕ ಸೋಮಣ್ಣ ಅವರ ಸೊಕ್ಕಡಗಿಸಬೇಕು ಎಂದು ಪದ್ಮನಾಭನಗರದಲ್ಲಿ ಕುಳಿತುಕೊಂಡು ಜೆಡಿಎಸ್ ನಾಯಕರ ಹಾಕಿದ ಸ್ಕೇಚ್ ಫಲಕೊಟ್ಟಿದೆ. ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಪಕ್ಷಕ್ಕೆ ನೀಡಿದ ಬೆಂಬಲ ಸೋಮಣ್ಣ ಸೋಲಿಗೆ ಮುಖ್ಯ ಕಾರಣ ಎನ್ನುವುದು ಮೆಲ್ನೋಟಕ್ಕೆ ಕಂಡು ಬರುವ ಸತ್ಯ. ಅಲ್ಲದೇ ಸೋಮಣ್ಣ ಅಕ್ರಮಣಕಾರಿ ವ್ಯಕ್ತಿತ್ವದ ಮನುಷ್ಯ. ಕಾರಣ ಕಳೆದ ಕೆಲ ದಿನಗಳ ಹಿಂದೆ ಸರಕಾರಿ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿರುವುದು. ಅವರು ಹೃದಯರೋಗದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಪ್ರತಿಪಕ್ಷಗಳು ಅದನ್ನು ಅಸ್ತ್ರವಾಗಿ ಪ್ರಯೋಗಿಸಿದ್ದು, ಇವರ ಸೋಲಿಗೆ ಕಾರಣವಾಯಿತೇ ? ಗೋವಿಂದರಾಜ ನಗರ ಕ್ಷೇತ್ರದಲ್ಲಿ ಅಸಂಖ್ಯಾತ ಸರಕಾರಿ ನೌಕರರ ಮತಗಳಿವೆ. ಅವರೆಲ್ಲರೂ ಕಾಂಗ್ರೆಸ್ ಪಕ್ಷದ ಕಡೆಗೆ ಮುಖ ಮಾಡಿರುವ ಸಾಧ್ಯತೆಯೂ ಇದೆ. ಏನೇ ಆಗಲಿ, ಸೋಲಿಗೆ ನೈತಿಕ ಹೊಣೆಹೊತ್ತು ಶಾಸಕರಲ್ಲದ ಸೋಮಣ್ಣನವರು ತಮ್ಮ ಮಂತ್ರಿ ಪದವಿಗೆ ರಾಜಿನಾಮೆ ಸಲ್ಲಿಸಬೇಕು.

ಗೋವಿಂದರಾಜ ನಗರ ಕ್ಷೇತ್ರ ಬಿಜೆಪಿಗೆ ಪ್ರತಿಷ್ಠೆಯಾಗಿದ್ದರೆ, ಚಿತ್ತಾಪುರ ಮೀಸಲು ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೆ ಮಾಡಿ ಇಲ್ಲವೇ ಮಡಿ ಕ್ಷೇತ್ರವಾಗಿತ್ತು. ಹಿರಿಯ ನಾಯಕ ಹಾಗೂ ಕೇಂದ್ರ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಮಗ ಪ್ರಿಯಾಂಕ ಖರ್ಗೆ ಅವರನ್ನೇ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿತ್ತು. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಖರ್ಗೆ ವಿರುದ್ಧ ವಾಲ್ಮೀಕಿ ನಾಯಕ ಸುಮಾರು 17 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಎರಡು ಬಾರಿ ಸೋತಿದ್ದ ನಾಯಕ ಮೇಲೆ ಕ್ಷೇತ್ರದಾದ್ಯಂತ ಅನುಕಂಪದ ಅಲೆ ಬಾರಿ ಕೆಲಸ ಮಾಡಿತು. ಬಿಜೆಪಿ ನಾಯಕರ ಕಸರತ್ತು ಕೆಲಸ ಮಾಡಿದ್ದು, ಕಮಲ ನಗೆಬೀರುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಸ್ವತಃ ಖರ್ಗೆ, ದೇಶಪಾಂಡೆ, ಉಗ್ರಪ್ಪ, ಡಿಕೆಶಿ ಸೇರಿದಂತೆ ರಾಜ್ಯ ಕಾಂಗ್ರೆಸ್ಸಿಗರಿಗೆ ಈ ಸೋಲನ್ನು ಅರಗಿಸಿಕೊಳ್ಳುವುದು ಕಷ್ಟದ ಕೆಲಸವೇ ಸರಿ.

ಸಂಸದರಾಗಿ ಆಯ್ಕೆಯಾಗಿ ಆರ್ ಧ್ರುವನಾರಾಯಣ ಅವರಿಂದ ಖಾಲಿಯಾಗಿದ್ದ ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿರುವುದು ಭಾರಿ ಮುಖಭಂಗವೇ ಸರಿ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶ್ರೀನಿವಾಸ್ ಪ್ರಸಾದ್ ಅವರ ಪ್ರಚಾರದ ನಡುವೆಯೂ ಅಲ್ಲಿನ ಮತದಾರ ಈ ಬಾರಿಗೆ ಅವಕಾಶ ಮಾಡಿಕೊಡಲಿಲ್ಲ. ಆಪತ್ಕಾಲದಲ್ಲಿ ಕೇಂದ್ರ ಸರಕಾರದ ಬೆನ್ನಿಗೆ ನಿಂತಿದ್ದ ಚಾಮರಾಜನಗರದ ಮಾಜಿ ಸಂಸದ ಎಂ ಶಿವಣ್ಣ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೆ ಮೋಸ ಮಾಡಿರುವುದು ಅಲ್ಲಿನ ಮತದಾರರಿಗೆ ಘಾಸಿಗೊಳಿಸುವಂತೆ ಮಾಡಿತು. ಜೊತೆಗೆ ಸಿದ್ದರಾಮಯ್ಯ ಮತ್ತು ಶ್ರೀನಿವಾಸಪ್ರಸಾದ ಅವರ ಪಕ್ಷಪಾತ ನೀತಿಗಳು ಅಲ್ಲಿನ ಮತದಾರ ಬಿಜೆಪಿ ಕಡೆಗೆ ನೋಡುವಂತೆ ಮಾಡಿತು. ಕೊಳ್ಳೇಗಾಲವನ್ನು ಕಾಂಗ್ರೆಸ್ ಕಳೆದುಕೊಂಡಿದ್ದು, ಗೆಲುವಿನ ಕನಸು ಸಿದ್ದ (ಛಿದ್ರ)ರಾಮಯ್ಯ ಅವರನ್ನು ಪ್ರಶ್ನಿಸುವಂತಾಗಿದೆ. ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದ ದ್ರುನನಾರಾಯಣ ಕೊಳ್ಳೇಗಾಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಚನ್ನಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ ಎಂದೆಣಿಸಲಾಗಿತ್ತು. ಗೌಡರ ಮತಗಳೇ ಇಲ್ಲಿ ನಿರ್ಣಾಯಕ. ಮೂರು ಪ್ರಮುಖ ಪಕ್ಷಗಳು ಗೌಡ ಜನಾಂಗದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದವು. ಆಪರೇಶನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಗೊಂಡಿದ್ದ ಸಿಪಿ ಯೋಗೀಶ್ವರ್ ಈ ಚುನಾವಣೆಯಲ್ಲೂ ಗೆಲುವು ಕಾಣಲು ಸಾಧ್ಯವಾಗಲಿಲ್ಲ. ಕಾರಣ ಸ್ಪಷ್ಟ, ದೇವೇಗೌಡರ ಪ್ರಾಬಲ್ಯ ಮೈಸೂರು ಕರ್ನಾಟಕಕ ಪ್ರಾಂತ್ಯದಲ್ಲಿ ಇನ್ನೂ ಇದೆ ಎನ್ನಲು ಈ ಗೆಲುವು ಸಾಕ್ಷಿಯಾಗಿದೆ. ಉಳಿದಂತೆ ರಾಮನಗರದಲ್ಲಿ ನಿರೀಕ್ಷೆಯಂತೆ ಜೆಡಿಎಸ್ ಜಯಭೇರಿ ಬಾರಿಸಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಗಳಗಳನೆ ಅಳುವ ಮೂಲಕ ಮಾಡಿದ್ದ ವಿನೂತನ ರಾಜಕೀಯ ವರ್ಕೌಟ್ ಆಗಿದೆ. ಆದರೆ, ಕಾಪ್ಸ್ ಎಂಬ ಸಂಸ್ಥೆ ಚುನಾವಣೋತ್ತರ ನಡೆಸಿದ ಸಮೀಕ್ಷೆಯ ಲೆಕ್ಕಾಚಾರ ಸಂಪೂರ್ಣ ಬುಡಮೇಲಾಗಿದೆ.

ಗೆಲುವು ಸಾಧಿಸಿದ ಅಭ್ಯರ್ಥಿಗಳ ಹೆಸರು

ಗೋವಿಂದರಾಜನಗರ - ಪ್ರಿಯಾಕೃಷ್ಣ (ಕಾಂಗ್ರೆಸ್)(ಗೆಲುವಿನ ಅಂತರ :5239 ಮತಗಳು)
ಚಿತ್ತಾಪುರ - ವಾಲ್ಮೀಕಿ ನಾಯಕ (ಬಿಜೆಪಿ)(ಗೆಲುವಿನಅಂತರ : 1606 ಮತಗಳು )
ಕೊಳ್ಳೇಗಾಲ - ನಂಜುಂಡಸ್ವಾಮಿ (ಬಿಜೆಪಿ)(ಗೆಲುವಿನ ಅಂತರ : 8267 ಮತಗಳು )
ರಾಮನಗರ - ಕೆ ರಾಜು (ಜೆಡಿಎಸ್)(ಗೆಲುವಿನ ಅಂತರ : 22019 ಮತಗಳು)
ಚನ್ನಪಟ್ಟಣ - ಎಂ ಸಿ ಅಶ್ವಥ್ (ಜೆಡಿಎಸ್)(ಗೆಲುವಿನ ಅಂತರ : 2282 ಮತಗಳು )

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+