ಎಚ್1ಎನ್1 ಕುರಿತು ಭಯ ಬೇಡ : ಶ್ರೀರಾಮುಲು ಅಭಯ
ಮಲೇರಿಯಾ, ಡೆಂಗ್ಯೂ, ಚಿಕನ್ಗುನ್ಯಾ ಅಂತಹ ಬಹಳಷ್ಟು ದೊಡ್ಡ ದೊಡ್ಡ ಖಾಯಿಲೆಗಳನ್ನು ನಾವು ಎದುರಿಸಿ ನಿಯಂತ್ರಿಸಿದ್ದೇವೆ. ಆದರೆ ಎಚ್1ಎನ್1(ಹಂದಿ ಜ್ವರ) ಬಗ್ಗೆ ಯಾಕಿಷ್ಟು ಭಯ? ಎಚ್1ಎನ್1 ಗುಣಪಡಿಸಬಲ್ಲ ರೋಗವಾಗಿದ್ದು ಜನತೆ ಹೆದರುವ ಅಗತ್ಯವಿಲ್ಲ. ರಾಜ್ಯ ಸರ್ಕಾರದೊಂದಿಗೆ ಖಾಸಗಿ ಆಸ್ಪತ್ರೆಗಳೂ ಸಹ ಕೈ ಜೋಡಿಸಿ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುತ್ತಿವೆ ಎಂದು ಅವರು ತಿಳಿಸಿದರು. ನಗರದ ಏರ್ಪೋರ್ಟ್ ರಸ್ತೆಯಲ್ಲಿನ ಮಣಿಪಾಲ್ ಆಸ್ಪತ್ರೆಯಲ್ಲಿಂದು ರಾಜ್ಯ ಸರ್ಕಾರ, ಬಿಬಿಎಂಪಿ ಹಾಗೂ ಮಣಿಪಾಲ್ ಆಸ್ಪತ್ರೆ ಜಂಟಿಯಾಗಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇತರ ದೇಶಗಳಿಗೆ ಹೋಲಿಸಿದಲ್ಲಿ ನಮ್ಮ ದೇಶದಲ್ಲಿ ಎಚ್1ಎನ್1 ಕುರಿತಂತೆ ಹೆಚ್ಚಿನ ಜಾಗೃತಿ, ಹೆಚ್ಚಿನ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ. ನಮ್ಮ ದೇಶದ, ರಾಜ್ಯದ ವೈದ್ಯರುಗಳಿಗೆ ಎಂತಹ ಖಾಯಿಲೆಗಳನ್ನೂ ಗುಣಪಡಿಸುವ ಸಾಮರ್ಥ್ಯ ಇದೆ. ಆದ ಕಾರಣ ಜನರು ಈ ಎಚ್1ಎನ್1 ಕುರಿತಂತೆ ಅತಿಯಾದ ಪ್ರಚಾರ ವದಂತಿಗಳಿಂದ ಭಯಬೀಳದೆ ಶುಚಿತ್ವ ಕಾಪಾಡಿಕೊಳ್ಳುವಂತೆ ಅವರು ಆಗ್ರಹಿಸಿದರು.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಥವಾ ಜಿಲ್ಲಾ ಕೇಂದ್ರಗಳಲ್ಲಿ ವೈದ್ಯರುಗಳ ಅಥವಾ ನರ್ಸ್ಗಳ ಕೊರತೆ ಕಂಡುಬಂದಲ್ಲಿ ತಕ್ಷಣವೇ ಸಿಬ್ಬಂದಿ ಕೊರತೆ ನೀಗಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದ ಅವರು ರಾಜ್ಯದ 46,000 ಶಾಲೆಗಳಲ್ಲಿ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು.
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ಹಂದಿಜ್ವರದಿಂದ ಪೀಡಿತರಾದ ರೋಗಿಗಳನ್ನು ದಾಖಲಿಸಿಕೊಂಡು ಹಗಲಿರುಳು ಶ್ರಮಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಅಭಿನಂದನೀಯ ಎಂದರು. ಬಿಬಿಎಂಪಿ ಆಯುಕ್ತ ಭರತ್ಲಾಲ್ ಮೀನಾ ಅವರು ಮಾತನಾಡುತ್ತಾ ಎಚ್1ಎನ್1 ರೋಗಿಗಳನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಉಪಚರಿಸುತ್ತಿರುವ ರೀತಿ ನಿಜಕ್ಕೂ ಶ್ಲಾಘನೀಯ ಎಂದರು.
ಮಣಿಪಾಲ್ ವೈದ್ಯಕೀಯ ಸಲಹಾ ಮಂಡಳಿ ಅಧ್ಯಕ್ಷರಾದ ಡಾ: ಸುದರ್ಶನ್ ಬಲ್ಲಾಳ್ ಅವರು ಎಚ್1ಎನ್1 ಕುರಿತಂತೆ ಮಾಹಿತಿ ನೀಡುತ್ತಾ ಈ ರೋಗ ಗುಣಪಡಿಸಬಹುದಾಗಿದ್ದು ಜನತೆ ಗಾಬರಿಯಾಗಬಾರದು. ಸೀನುವಾಗ ಕೆಮ್ಮುವಾಗ ಕರವಸ್ತ್ರ ಬಳಸಬೇಕು ಹಾಗೂ ಕೈಗಳನ್ನು ಆಗಾಗ ತೊಳೆಯುವ ಮೂಲಕ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದರು. ಖಾಸಗಿ ಆಸ್ಪತ್ರೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ಸರ್ಕಾರದ ಕ್ರಮವನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಎಚ್1ಎನ್1 ರೋಗದಿಂದ ಪೀಡಿತರಾಗಿ ನಂತರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಮಕ್ಕಳ ಪೋಷಕರು ಈ ಸಂದರ್ಭದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್. ಪೆರುಮಾಳ್, ಇಲಾಖೆಯ ಆಯುಕ್ತ ಶ್ರೀನಿವಾಸಾಚಾರಿ, ಮಣಿಪಾಲ್ ಅಸ್ಪತ್ರೆಯ ಸಿಇಒ ಆರ್. ಬೇಸಿಲ್, ವೈದ್ಯಕೀಯ ನಿರ್ದೇಶಕ ಡಾ: ಸುದರ್ಶನ್ ಬಲ್ಲಾಳ್ ಅವರುಗಳು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)