ಉಪಚುನಾವಣೆ : ನಾಳೆ ಅಭ್ಯರ್ಥಿಗಳ ಹಣೆಬರಹ
ಆಪರೇಶನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಗೊಂಡು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಸಿಪಿ ಯೋಗೀಶ್ವರ್ ಉಪಚುನಾವಣೆಯಲ್ಲಿ ಬಿಜೆಪಿ ಹುರಿಯಾಳು. ಕಳೆದ ಎರಡು ಅವಧಿಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಯೋಗೀಶ್ವರ್, ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ದ ಭಾರಿ ಹಿನ್ನೆಡೆ ಮೂಲಕ ಸೋತಿದ್ದರು. ಅಲ್ಲದೇ ಈ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಸ್ತಿತ್ವ ಇಲ್ಲದಿರುವುದು ಸೋಲಿಗೆ ಪ್ರಮುಖ ಕಾರಣವಾಗಿತ್ತು.
ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಯೋಗೀಶ್ವರ್ ಅವರಿಗೆ ರಾಜಕೀಯ ಅಳಿವು ಉಳಿವಿನ ಪ್ರಶ್ನೆ. ಇಲ್ಲಿ ಗೆದ್ದರೆ ಸರಕಾರದಲ್ಲಿ ಸ್ಥಾನ ಸಿಕ್ಕುವ ಸಾಧ್ಯತೆ ಇದೆ. ಆಕಸ್ಮಾತ್ ಆಗಿ ಸೋತರೆ ಯೋಗೀಶ್ವರ್ ಅವರಿಗೆ ಕಾಲವೇ ಉತ್ತರಿಸಲಿದೆ. ಉಳಿದಂತೆ ಗೋವಿಂದರಾಜ ನಗರ ವೈಯಕ್ತಿಕವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮರ್ಯಾದೆ ಪ್ರಶ್ನೆಯಾಗಿದ್ದು, ಎದುರಾಳಿ ಪ್ರಿಯಾಕೃಷ್ಣ ಪರ ಕಾಂಗ್ರೆಸ್ ನಾಯಕರ ದಂಡು ಗಲ್ಲಿ ಗಲ್ಲಿ ತಿರುಗಿ ಪ್ರಚಾರ ನಡೆಸಿದೆ. ಶತಾಯಗತಾಯ ಸೋಮಣ್ಣ ಅವರನ್ನು ಸೋಲಿಸಲೇಬೇಕು ಎಂಬ ಕಾಂಗ್ರೆಸ್ಸಿಗರ ಗುರಿ ಈಡೇರಿತು ಎನ್ನುವುದು ಸದ್ಯದ ಪ್ರಶ್ನೆ. ಸೋಮಣ್ಣ ಒಳ್ಳೆಯ ಕೆಲಸಗಾರ, ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಗೆಲುವು ಖಚಿತ ಎನ್ನುವುದು ದಟ್ಟವಾಗಿ ಹಬ್ಬಿರುವ ಸುದ್ದಿ.
ಕಾಂಗ್ರೆಸ್ಸಿಗರಿಗೆ ಚಿತ್ತಾಪುರ ಕ್ಷೇತ್ರವನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ನಾಯಕ ಎನಿಸಿರುವ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಕಡಿಮೆ ಅಂತರದಲ್ಲಿ ಸೋತಿದ್ದ ವಾಲ್ಮೀಕಿ ನಾಯಕ ಇದೀಗ ಅವರ ಮಗ ಪ್ರಿಯಾಂಕಾ ಖರ್ಗೆ ವಿರುದ್ದ ಕದನಕ್ಕೆ ಇಳಿದಿದ್ದಾರೆ. ಬಿಜೆಪಿ, ಕಾಂಗ್ರೆಸ್ಸಿಗರ ದಂಡೇ ಅಲ್ಲಿ ಬೀಡು ಬಿಟ್ಟು ಪ್ರಚಾರ ನಡೆಸಿದೆ. ಕಳೆದ ಎಂಟು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯ. ಈ ಸಲದ ಐದು ಕ್ಷೇತ್ರಗಳಲ್ಲಿ ಕನಿಷ್ಟ ಮೂರನ್ನಾದರೂ ಕಾಂಗ್ರೆಸ್ ಗೆಲ್ಲಲೇಬೇಕು. ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ಮೈಸೂರು ಕ್ಷೇತ್ರಗಳನ್ನು ಗೆಲ್ಲಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಸಿದ್ದರಾಮಯ್ಯ ಇದೀಗ ಪ್ರತಿಪಕ್ಷದ ನಾಯಕ ಬೇರೆ. ಅವರಿಂದಲಾದರೂ ಕಾಂಗ್ರೆಸ್ ಗೆಲುವು ಕಾಣುತ್ತಾ ಎನ್ನುವುದನ್ನು ಕಾದುನೋಡಬೇಕು. ಕಾಂಗ್ರೆಸ್ ಮತ್ತೆ ನೆಲಕಚ್ಚಿದರೆ, ದೇಶಪಾಂಡೆ, ಡಿಕೆಶಿ ಸ್ಥಾನಕ್ಕೆ ಕುತ್ತು ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.
ಉಳಿದಂತೆ ರಾಮನಗರ ಜೆಡಿಎಸ್ ಹಾಗೂ ಕೊಳ್ಳೆಗಾಲದಲ್ಲಿ ಕಾಂಗ್ರೆಸ್ ಪಕ್ಷಗಳು ಗೆಲುವು ಸಾಧಿಸುವ ಸಾಧ್ಯತೆಗಳೆ ಹೆಚ್ಚು. ಕಾರಣ ಅಲ್ಲಿ ಬಿಜೆಪಿ ಅಷ್ಟಾಗಿ ತನ್ನ ನೆಲೆ ಕಂಡುಕೊಂಡಿಲ್ಲ. ಈ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ರಾಮನಗರದಲ್ಲಿ ಗಳಗಳಾಂತ ಅತ್ತಿದ್ದು ಕೂಡಾ ರಾಮನಗರದ ಜೆಡಿಎಸ್ ಅಭ್ಯರ್ಥಿಗೆ ವರವಾಗಬಹುದು.
ಬಿಗಿ ಭದ್ರತೆ
ಮಂಗಳವಾರ ನಡೆಸಲಿರುವ ಐದು ಕ್ಷೇತ್ರಗಳ ಮತದಾನ ಶಾಂತಿಯುತವಾಗಿ ನಡೆಯಲು ಬಿಗಿ ಬಂದೋಬಸ್ತ್ ಕೈಗೊಂಡಿರುವ ರಾಜ್ಯ ಗೃಹ ಇಲಾಖೆ, ತಮಿಳುನಾಡಿನ ಐದು ವಿಶೇಷ ಸಶಸ್ತ್ರ ಪೊಲೀಸ್ ಪಡೆಯನ್ನು ಕರೆಸಿಕೊಂಡಿದೆ. ಸ್ಥಳೀಯ ಗೋವಿಂಗರಾಜನಗರಕ್ಕೆ ಎರಡು ಕಂಪನಿ, ಚನ್ನಪಟ್ಟಣ, ರಾಮನಗರ, ಕೊಳ್ಳೇಗಾಲ ಕ್ಷೇತ್ರಗಳಿಗೆ ತಲಾ ಒಂದು ಕಂಪನಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಚಿತ್ತಾಪುರ ಕ್ಷೇತ್ರ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳಿಗೆ ಕೆಎಸ್ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಒಟ್ಟು 1100 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 4,654 ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ.
ಸೂಕ್ಷ್ಮ, ಅತಿಸೂಕ್ಷ್ಮ ಸೇರಿದಂತೆ ಐದು ಕ್ಷೇತ್ರಗಳ ಮತಗಟ್ಟೆಗಳಿಗೆ ಸರ್ಪಗಾವಲು ಹಾಕಲು ಈಗಾಗಲೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗೋವಿಂದರಾಜನಗರ, ರಾಮನಗರ, ಮತ್ತು ಚನ್ನಪಟ್ಟಣ ಭಾರಿ ಜಿದ್ದಾಜಿದ್ದಿನ ಕ್ಷೇತ್ರಗಳಾಗಿದ್ದು, ಅಹಿತಕರ ಘಟನೆ ತಡೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಎ ಆರ್ ಇನ್ಫಂಟ್ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)