ಹುಬ್ಬಳ್ಳಿ : ವಜ್ರದ ಗಣೇಶನ ವಿಶೇಷ ಆಕರ್ಷಣೆ
ಹುಬ್ಬಳ್ಳಿ, ಆ. 12 : ಗಣೇಶನ ಹಬ್ಬದ ಆಚರಣೆಗೆ ರಾಜ್ಯದಲ್ಲಿ ಉತ್ತರ ಕರ್ನಾಟಕ ಹೆಸರುವಾಸಿ. ಅದರಲ್ಲೂ ಚೋಟಾ ಮುಂಬೈ ಎಂದೇ ಖ್ಯಾತಿ ಗಳಿಸಿರುವ ಹುಬ್ಬಳ್ಳಿ ಹಾಗೂ ಕುಂದಾನಗರಿ ಬೆಳಗಾವಿ ನಗರಗಳಿಗೆ ಎಲ್ಲಿಲ್ಲದ ಪೈಪೋಟಿ. ಈ ಸಲ ಕೂಡಾ ಒಂದು ಗುಂಜಿ ಮುಂದೆ ಹೋಗಿರುವ ಹುಬ್ಬಳ್ಳಿಯ ಗಣೇಶನ ವಜ್ರದ ವಿನಾಯಕನನ್ನು ಪ್ರತಿಷ್ಠಾಪಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮುಂಬೈ ನಂತರ ವಜ್ರದ ಗಣೇಶನ ಪ್ರತಿಷ್ಠಾಪಿಸಿದ ಕೀರ್ತಿ ಹುಬ್ಬಳ್ಳಿಗೆ ಸಲ್ಲಲಿದೆ.
ಗಣೇಶನ ಹಬ್ಬ ಎಂದ ತಕ್ಷಣ ಉತ್ತರ ಕರ್ನಾಟಕದ ಮಂದಿಗೆ ನೆನಪಿಗೆ ಬರುವುದೇ ಹುಬ್ಬಳ್ಳಿ. ವಿವಿಧ ರೂಪದ ಗಣೇಶನ ಪ್ರತಿಷ್ಠಾಪನೆ ಮಾಡುವುದು. 11 ದಿನಗಳ ಕಾಲ ವಿಜೃಂಭಣೆಯಿಂದ ಹಬ್ಬ ಆಚರಿಸುವುದು. ಈ 11 ದಿನಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು. ಹೀಗೆ ವಿನಾಯಕನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆಯಾ ವರ್ಷದಲ್ಲಿ ನಡೆದಿರುವಂತ ಪ್ರಮುಖ ಸುದ್ದಿಗಳು ಗಣಪನ ರೂಪವಾಗಿ ಹೊರಹೊಮ್ಮಿರುತ್ತವೆ.
ಹುಬ್ಬಳ್ಳಿಯ ಗಣೇಶನ ಭಕ್ತರು ರಾಜ್ಯದಲ್ಲಿ ಪ್ರಥಮ ಬಾರಿ ವಿಶಿಷ್ಠ ಸಾಹಸಕ್ಕೆ ಕೈಹಾಕಿದ್ದು, ವಜ್ರದ ಗಣೇಶನ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಹೇಶ ಮುರಗೋಡ ಎಂಬ ಶಿಲ್ಪಿ ವಜ್ರದ ಗಣೇಶ ನಿರ್ಮಾಣದ ಹೊಣೆ ಹೊತ್ತಿದ್ದು, ಗಣೇಶ ಮೂರ್ತಿ ಕೊನೆಯ ಹಂತದ ಟಚ್ ನೀಡಲಾಗಿದೆ. ವಜ್ರದ ಗಣೇಶನಿಗೆ 80 ಸಾವಿರ ಅಮೆರಿಕನ್ ವಜ್ರ ಹಾಗೂ 800 ವಿವಿಧ ಬಣ್ಣದ ಕಲ್ಲುಗಳನ್ನು ಬಳಸಲಾಗಿದೆ. ಒಂದು ಫೂಟ್ ಎತ್ತರದ ವಜ್ರದ ಗಣೇಶ ಮೂರ್ತಿ ತಯಾರಿಸಲು 5 ತಿಂಗಳ ಕಾಲ ತೆಗೆದುಕೊಳ್ಳಲಾಗಿದ್ದು, ನನ್ನ ತಂದೆ ಹಾಗೂ ಸಹೋದರಿಯರ ಸಹಾಯದಿಂದ ನಿಗದಿತ ಸಮಯಕ್ಕೆ ಕೆಲಸ ಪೂರ್ಣಗೊಳಿಸಿರುವುದಾಗಿ ಶಿಲ್ಪಿ ಮಹೇಶ್ ಮುರುಗೋಡ ಹೇಳುತ್ತಾರೆ.
ವಜ್ರಗಳನ್ನು ಆಂಧ್ರಪ್ರದೇಶದ ಮಚಲೀಪಟ್ಟಣ ಖರೀದಿಸಲಾಗಿದೆ. ವಜ್ರದ ಗಣೇಶ ಮೂರ್ತಿ ತಯಾರಿಸಲು ಅನೇಕ ಕಡೆಗಳಲ್ಲಿ ಆಫರ್ ಬರುತ್ತಿದೆ. ನಮ್ಮ ಕುಟುಂಬ ಕಳೆದ ನಾಲ್ಕು ದಶಕಗಳಿಂದ ಇದೇ ಕಾಯಕವನ್ನು ಮಾಡುತ್ತಾ ಬಂದಿದೆ. ನಾನು ಸುಮಾರು 18 ವರ್ಷಗಳಿಂದ ಈ ಕಾಯಕದಲ್ಲಿ ನಿರತನಾಗಿದ್ದೇನೆ ಎಂದು ಮಹೇಶ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)