ತಿರುವಳ್ಳುವರ್ ಪ್ರತಿಮೆ ಆನಾವರಣಕ್ಕೆ ಜನಸಾಗರ

ಕಾರ್ಯಕ್ರಮ ಕುವೆಂಪು ಅವರ ಜಯಭಾರತ ಜನನಿಯ ತನುಜಾತೆ ಹಾಡಿನೊಂದಿಗೆ ಆರಂಭವಾಯಿತು. ಸಿ. ಅಶ್ವತ್ಥ ಮತ್ತು ತಂಡ ಗೀತೆಯನ್ನು ಹಾಡಿತು. ಎಲ್ಲ ಗಣ್ಯರು ಹಾಡಿಗೆ ಎದ್ದು ನಿಲ್ಲುವ ಮೂಲಕ ಗೌರವ ಸೂಚಿಸಿದರು.
ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶೋಭಾ ಕರಂದ್ಲಾಜೆ, ವೆಂಕಯ್ಯ ನಾಯ್ಡು, ಸಿದ್ದರಾಮಯ್ಯ, ರೋಶನ್ ಬೇಗ್, ಆರ್. ಅಶೋಕ್, ಪಿಸಿ ಮೋಹನ್, ಅನಂತಕುಮಾರ್ ಮೊದಲಾದವರು ಸ್ಥಳಕ್ಕೆ ಆಗಮಿಸಿದ್ದಾರೆ. ಸಾಹಿತಿಗಳಾದ ಎಂ ಚಿದಾನಂದ ಮೂರ್ತಿ, ಜಿಎಸ್ ಶಿವರುದ್ರಪ್ಪ, ಸಿದ್ದಲಿಂಗಯ್ಯ ಮೊದಲಾದವರು ಸರಿಯಾದ ಸಮಯಕ್ಕೆ ಆಗಮಿಸಿದರು. ಸಮಾರಂಭಕ್ಕೆ ಎರಡೂ ರಾಜ್ಯಗಳ ಗಣ್ಯರು, ಸಾಹಿತಿಗಳು, ರಾಜಕಾರಣಿಗಳು ಆಗಮಿಸಿದ್ದಾರೆ.
ನೀಲಕಂಠನ್ ವೃತ್ತದ ಸ್ಟೇಡಿಯಂನಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ವೇದಿಕೆಯ ಹಿಂಬದಿಯಲ್ಲಿ ಕನ್ನಡ ಮತ್ತು ತಮಿಳಿನಲ್ಲಿ ಆಹ್ವಾನ ಪತ್ರಿಕೆಯನ್ನು ಮುದ್ರಿಸಲಾಗಿದೆ. ಜನರಿಗಾಗಿ ಬೃಹತ್ ಶಾಮಿಯಾನದಡಿ ಸುಮಾರು 40 ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. ಎರಡೂ ರಾಜ್ಯಗಳ ಜನಸಾಗರವೇ ಅಲ್ಲಿ ನೆರೆದಿದೆ.
ಕರವೇ ಕಾರ್ಯಕರ್ತರ ಬಂಧನ : ವಾಟಾಳ್ ನಾಗರಾಜ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಬಂದ್ ಗೆ ಕರೆ ನೀಡಿತ್ತಾದರೂ ಪ್ರತಿಕ್ರಿಯೆ ತುಂಬ ನೀರಸವಾಗಿದೆ. ನಗರದ ಎಲ್ಲೆಡೆ ಜನಜೀವನ ಸಾಮಾನ್ಯ ಸ್ಥಿತಿಯಲ್ಲಿ ಸಾಗುತ್ತಿದೆ. ಈ ನಡುವೆ, ಮಲ್ಲೇಶ್ವರಂನ ಮೈದಾನದಲ್ಲಿ ಸೇರಿದ್ದ 50 ಕರವೇ ಕಾರ್ಯಕರ್ತರನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಸರ್ಕಾರ ಮತ್ತು ಪ್ರತಿಮೆ ಅನಾವರಣದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications