ಉದ್ಯೋಗ ಖಾತರಿ ಯೋಜನೆಯ ಸಹಾಯವಾಣಿ
ಬೆಂಗಳೂರು, ಆ. 7 : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮದಡಿ ಯೋಜನೆಯ ಮಾಹಿತಿಯನ್ನು ಒದಗಿಸಲು ಕರಮುಕ್ತ ಸಹಾಯವಾಣಿ ಸೇವೆ ಆರಂಭಿಸಿದೆ.
ಕೂಲಿಕಾರರ ಕುಂದುಕೊರತೆಗಳನ್ನು, ಇತರೆ ಅನುಷ್ಠಾನಾಧಿಕಾರಿಗಳ ಸಮಸ್ಯೆಗಳನ್ನು ಯೋಜನೆಯಲ್ಲಿ ತೊಡಗಿರುವ ಪಾಲುದಾರರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ಪರಿಹರಿಸಲು, ಅಧಿನಿಯಮದ ಅನ್ವಯ ಯೋಜನೆಯನ್ನು ಮತ್ತು ಅಧಿನಿಯಮವನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಲು ಪೂರಕವಾಗಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನಾ ನಿರ್ದೇಶನಾಲಯವು ರಾಜ್ಯಮಟ್ಟದಲ್ಲಿ ಕರಮುಕ್ತ ಸಹಾಯವಾಣಿಯನ್ನು (1800 425 8666) ಸ್ಥಾಪಿಸಲಾಗಿದೆ.
ಸಹಾಯವಾಣಿಯ ಮುಖಾಂತರ ಒದಗಿಸಲಾಗುವ ಸೇವೆಗಳು
ಯೋಜನೆಯ ಅನುಷ್ಠಾನದ ಕುರಿತು ಸಲ್ಲಿಸಲಾಗುವ ಕುಂದುಕೊರತೆಗಳು ಮತ್ತು ದೂರುಗಳನ್ನು ದಾಖಲಿಸುವುದು. ಕುಂದು ಕೊರೆತೆಗಳ ಮತ್ತು ದೂರಿನ ವಿವರಗಳನ್ನು ಹಾಗೂ ಅದನ್ನು ನೀಡಿದ ವ್ಯಕ್ತಿಯ ವಿವರಗಳನ್ನು ದಾಖಲಿಸುವುದು. ದೂರಿನ ಬಗ್ಗೆ ದೂರಿನ ಸಂಖ್ಯೆಯನ್ನು ಒದಗಿಸಿ ಅದನ್ನು ಬಳಕೆದಾರರಿಗೆ ಒದಗಿಸುವುದು. ಕುಂದು ಕೊರತೆಗಳು ಮತ್ತು ದೂರಿನ ಬಗ್ಗೆ ಸೂಕ್ತವಾದ ಪರಿಹಾರ ಕ್ರಮ ಕೈಗೊಳ್ಳಲು ಹಾಗೂ ದೂರುದಾರರಿಗೆ ಪ್ರತ್ಯುತ್ತರ ನೀಡುವಂತೆ ನಿರ್ದೇಶನಾಲಯ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ಗಳಿಗೆ ಮಾಹಿತಿ ರವಾನಿಸುವುದು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ ಬಳಕೆದಾರರು ಅಪೇಕ್ಷಿಸುವ ಸಂಬಂಧಪಟ್ಟ ಮಾಹಿತಿಯನ್ನು ಈ ಸೇವೆಯಡಿ ಒದಗಿಸಲಾಗುತ್ತದೆ.
(ದಟ್ಸ್ ಕನ್ನಡ ವಾರ್ತೆ)