ಅರ್ಜಿ ವಾಪಸಿಗೆ ಸೂಕ್ತ ಕ್ರಮ : ಕರುಣಾನಿಧಿ
ಬೆಂಗಳೂರು, ಆ. 6 : ಕನ್ನಡ ಭಾಷೆಗೆ ನೀಡಿದ ಶಾಸ್ತ್ರೀಯ ಸ್ಥಾನಮಾನದ ವಿರುದ್ದ ತಮಿಳುನಾಡು ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ತಕರಾರು ಅರ್ಜಿಯನ್ನು ವಾಪಸ್ ಪಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಭರವಸೆ ನೀಡಿದ್ದಾರೆ. ಪ್ರತಿಮೆ ಅನಾವರಣಕ್ಕೆ ಆಹ್ವಾನ ನೀಡಲು ಹೋಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕರುಣಾ ಈ ಮಾತುಕೊಟ್ಟಿದ್ದಾರೆ.
ತಮಿಳುನಾಡು ವಕೀಲ ಗಾಂಧಿ ಎಂಬವರು ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಬೆಂಬಲಿಗರು. ಇದು ನಮ್ಮ ಸರಕಾರಕ್ಕೂ ಇರಿಸುಮುರುಸು ಉಂಟುಮಾಡಿದೆ. ಗಾಂಧಿ ಮನವೊಲಿಸಿ ಅರ್ಜಿ ವಾಪಾಸ್ ತೆಗೆದು ಕೊಳ್ಳಲು ಸೂಕ್ತ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಕನ್ನಡಿಗರು ಮತ್ತು ತಮಿಳರು ತಮ್ಮ ವೈಮನಸ್ಸು ಮೆರೆತು ಸಹೋದರರಂತೆ ಬಾಳಬೇಕು. ಎರಡೂ ರಾಜ್ಯಗಳ ನಡುವೆ ಎದುರಾಗಿರುವ ಸಮಸ್ಯೆಗಳನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಳೋಣ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಲವೊಂದು ಸಮಸ್ಯೆಗಳು ಕಾಮರಾಜ್ ಹಾಗೂ ನಿಜಲಿಂಗಪ್ಪ ಅವರ ಕಾಲದಿಂದಲೂ ಮುಂದುವರಿದುಕೊಂಡು ಬಂದಿದೆ. ಬಗೆಹರಿಯದ ಸಮಸ್ಯೆಗಳಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳೋಣ. ಚೆನ್ನೈ ಮತ್ತು ಬೆಂಗಳೂರಿನಲ್ಲಿ ನಡೆಯುವ ಪ್ರತಿಮೆ ಅನಾವರಣ ಕಾರ್ಯಕ್ರಮ ಸರಕಾರದ ಕಾರ್ಯಕ್ರಮವಾಗಿರುವುದರಿಂದ ಅಚ್ಚುಕಟ್ಟಾಗಿ ನೆರವೇರಿಸಬೇಕು. ಯಾವ ಭಾಷಿಗರ ಭಾವನೆಗೂ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿಕೆ ನೀಡಿದ್ದಾರೆ. ಮಾತುಕತೆ ವೇಳೆ ಸಚಿವರಾದ ಆರ್ ಅಶೋಕ್, ಕಟ್ಟಾ ಸುಬ್ರಮಣ್ಯ ನಾಯ್ಡು, ಬಸವರಾಜ್ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ದಯಾನಿಧಿ ಮಾರನ್ ಹಾಜರಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications