ತಮಿಳು ಕಳಗಂ ನಾಯಕನ ಕುಚೋದ್ಯ ಹೇಳಿಕೆ
ಕರ್ನಾಟಕದಲ್ಲಿ ವಾಸವಾಗಿರುವ ತಮಿಳರು ಎಲ್ಲಿಂದಲೋ ಬಂದವರಲ್ಲ ಅವರು ಕರ್ನಾಟಕದ ಪೂರ್ವಿಕರು. ಕರ್ನಾಟಕದ ಕೀರ್ತಿ ಹೆಚ್ಚಿಸಿದ ಕನ್ನಂಬಾಡಿ ಕಟ್ಟೆ, ವಿಧಾನಸೌಧ ನಿರ್ಮಿಸಿದ್ದು ತಮಿಳು ಕೈಗಳು. ಕೋಲಾರ ಚಿನ್ನದ ಗಣಿ, ಕೈಗಾರಿಕೆ ಕ್ಷೇತ್ರದಲ್ಲಿ ರಾಜ್ಯದ ಏಳಿಗೆಗೆ ಕಾರಣರಾದವರು ತಮಿಳರು ಎನ್ನುವುದು ಕೆ ಸಿ ತೆನ್ನಿವನ್ನನ್ ಹೇಳಿಕೆ ನೀಡಿದ್ದಾರೆ.
ಇಷ್ಟೊಂದು ಮಹತ್ವದ ಕೊಡುಗೆ ನೀಡಿರುವ ಕರ್ನಾಟಕ ರಾಜ್ಯದಲ್ಲಿ ಶೇ30 ರಷ್ಟು ಜನಸಂಖ್ಯೆ ಇರುವ ತಮಿಳರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಕಾಣಲಾಗುತ್ತಿದೆ, ವಿಧಾನಸಭೆ ಮತ್ತು ಬಿಬಿಎಂಪಿ ಗಳಲ್ಲಿ ನಮ್ಮ ಪ್ರತಿನಿಧಿಗಳಿಲ್ಲದಿರುವುದರಿಂದ ನಮ್ಮ ದನಿಗೆ ಬಲವಿಲ್ಲವಾಗಿದೆ. ನಮ್ಮ ಬಲ ಪ್ರದರ್ಶನ ತೋರಿಸಲು ಉತ್ತಮ ಅವಕಾಶವಿದೆ. ಬೆಂಗಳೂರು ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ತಮಿಳರು ಗೆಲ್ಲುವ ಅವಕಾಶವಿದೆ ಎಂದು ಅಪಾಯಕಾರಿ ಹೇಳಿಕೆ ನೀಡಿದ್ದಾರೆ.
ತೆನ್ನಿವನ್ನನ್ ನನ್ನು ಬಂಧಿಸಿ : ಗೆಳೆಯರ ಬಳಗ
ಇದಕ್ಕೆ ಪ್ರತಿಕ್ರಿಯಿಸಿರುವ ಕನ್ನಡ ಗೆಳೆಯರ ಬಳಗ, ಅಣೆಕಟ್ಟು ಮತ್ತು ಕಟ್ಟಡ ನಿರ್ಮಾಣದಲ್ಲಿ ಕೂಲಿಗಳಾಗಿ ಬಂದ ತಮಿಳರು ಕರ್ನಾಟಕದ ಪೂರ್ವಿಕರು ಎಂದು ಸಾಧಿಸುವುದನ್ನು ನಿಲ್ಲಿಸಬೇಕು. ವಲಸಿಗರು ರಾಜ್ಯದಲ್ಲಿ ಸೃಸ್ಟಿಸುತ್ತಿರುವ ಆವಾಂತರಗಳ ಪರಿಣಾಮಗಳನ್ನು ಕಂಡುಹಿಡಿಯಬೇಕು ಮತ್ತು ಇಂತಹ ಹೇಳಿಕೆ ನೀಡಿರುವ ತೆನ್ನಿವನ್ನನ್ ಅವರನ್ನು ಈ ಕೂಡಲೇ ಬಂಧಿಸಬೇಕೆಂದು ಬಳಗ ಒತ್ತಾಯಿಸಿದೆ.
(ದಟ್ಸ್ ಕನ್ನಡ ವಾರ್ತೆ)