ತಮಿಳುನಾಡಿಗೆ ಕಾವೇರಿ ನೀರು : ಓಕೆ ಅಂದ ಸಿಎಂ
ಮೈಸೂರು, ಜು. 24 : ರಾಜ್ಯದಲ್ಲಿ ಸಾಕಷ್ಟು ಮಳೆ ಆಗಿರುವುದರಿಂದ ಜೀವನಾಡಿ ಕಾವೇರಿ ನದಿ ತುಂಬಿ ಹರಿಯತೊಡಗಿದೆ. ಇದರಿಂದ ಹೆಚ್ಚಿನ ನೀರನ್ನು ತಮಿಳುನಾಡಿಗೆ ಬಿಡುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಕೆಆರ್ಎಸ್ ಗೆ ಬಾಗಿನ ಅರ್ಪಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ಮುಂಗಾರುಮಳೆ ಸ್ವಲ್ಪ ಕೋಪಿಸಿಕೊಂಡಂತೆ ಕಂಡರೂ ನಂತರದ ದಿನಗಳಲ್ಲಿ ಉತ್ತಮ ಮಳೆ ಬಿದ್ದಿದೆ. ಇದರಿಂದ ರಾಜ್ಯ ಅಷ್ಟೂ ಜಲಾಶಯಗಳು ತುಂಬಿ ಹರಿಯತೊಡಗಿವೆ ಎಂದರು. ಅವರು ತಮಿಳುನಾಡಿನವರಾಗಲಿ ಅಥವಾ ಕರ್ನಾಟಕದವಾಗಲಿ, ಒಟ್ಟಿನಲ್ಲಿ ರೈತರಿಗೆ ಮೋಸವಾಗಬಾರದು. ರಾಜ್ಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆ ಬಿದ್ದಿರಿಂದ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಬಿಡಲು ಯಾವುದೇ ತೊಂದರೆ ಇಲ್ಲ ಎಂದು ಯಡಿಯೂರಪ್ಪ ಹೇಳಿದರು.
ಶ್ರಾವಣ ಮಾಸದ ಮೊದಲ ಶುಕ್ರವಾರ ತಾವು ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ್ದು, ಕಳೆದ ಬಾರಿ ಆಗಸ್ಟ್ ತಿಂಗಳಲ್ಲಿ ಬಾಗಿನ ಆರ್ಪಿಸಲಾಗಿತ್ತು. ಈ ಬಾರಿ ಅದಕ್ಕೂ ಮುಂಚೆ ಬಾಗಿನ ಅರ್ಪಿಸಿರುವುದು ತಮಗೆ ಅತೀವ ಸಂತಸ ತಂದಿದೆ, ಕೇವಲ 20 ದಿನಗಳ ಅಂತರದಲ್ಲಿ ಕಾವೇರಿ ಮೈದುಂಬಿದ್ದಾಳೆ. ವರುಣ ಕೃಪೆ ತೋರಿದ್ದು, ರಾಜ್ಯದ ಎಲ್ಲ ಜಲಾಶಯಗಳು ತುಂಬಿ ತುಳುಕತೊಡಗಿವೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಎರಡು ಬಾರಿ ಬಾಗಿನ ಅರ್ಪಿಸಿರುವುದು ತಮ್ಮ ಸೌಭಾಗ್ಯ ಎಂದರು.
ಇದೀಗ ಕೆಆರ್ಎಸ್ ಗೆ 75 ವರ್ಷ ತುಂಬಿದೆ. ಈ ಭಾಗದ ಶಾಸಕರು, ಸಚಿವರೊಂದಿಗೆ ಸಮಾಲೋಚಿಸಿ ಶೀಘ್ರದಲ್ಲೇ ಈ ಪ್ರದೇಶದಲ್ಲಿ ಬೆಳಗಿನಿಂದ ಸಂಜೆಯವರೆಗೂ ಅದ್ಧೂರಿ ಸಮಾರಂಭವನ್ನು ಏರ್ಪಡಿಸಿ ಭವ್ಯವಾಗಿ ವಜ್ರ ಮಹೋತ್ಸವ ಆಚರಿಸಲಾಗುವುದು. ಈ ಮೂಲಕ ಕನ್ನಂಬಾಡಿ ಆಣೆಕಟ್ಟು ಕಟ್ಟಿಸಿದವರನ್ನು ನೆನಪು ಮಾಡಿಕೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
ರಾಜ್ಯದಲ್ಲಿರುವ ಎಲ್ಲ ಜಲಾಶಯಗಳು ಭರ್ತಿಯಾಗಿ ವಿದ್ಯುತ್ ಅಭಾವ ನೀಗಿದೆ. ರೈತರ ಕಣ್ಣಲ್ಲಿ ಹೊಳಪು ಮೂಡಿದೆ. ಬಿತ್ತನೆ ಕಾರ್ಯಗಳು ಚುರುಕಾಗಿವೆ. ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಸುವಂತೆ ಈಗಾಗಲೇ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದ್ದು, ಎಲ್ಲ ರೈತರಿಗೂ ಸಮರ್ಪಕವಾಗಿ ರಸಗೊಬ್ಬರವನ್ನು ವಿತರಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications