ಪ್ರವಾಸಿಗರೆ, ಗ್ರೀನ್ ಪೊಲೀಸರಿದ್ದಾರೆ ಹೆದರದಿರಿ

ವಿಧಾನಸೌಧದ ಮುಂಭಾಗದಲ್ಲಿ ಗ್ರೀನ್ ಪೊಲೀಸ್ ಗೆ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿ ಮಾತನಾಡುತ್ತಾ, ರಾಜ್ಯ ಸರ್ಕಾರದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಹಣಕಾಸು ಬಿಡುಗಡೆ ಮಾಡಲಿದೆ. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದೆ. ಈ ಬಗ್ಗೆ ಗಮನ ಹರಿಸಿರಲಿಲ್ಲ. ಪ್ರವಾಸಿ ತಾಣಗಳ ಬಗ್ಗೆ ಪ್ರಚಾರದ ಜೊತೆಗೆ ಪ್ರವಾಸಿಗರ ರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ಗೃಹ ಸಚಿವ ವಿಎಸ್ ಆಚಾರ್ಯ ಮಾತನಾಡಿ ಗ್ರೀನ್ ಪೊಲೀಸ್ ಪಡೆಯಲ್ಲಿ ವಿಶೇಷ ತರಬೇತಿ ಪಡೆದ ಮಾಜಿಸೈನಿಕರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳಿರುತ್ತಾರೆ. ಕರಾವಳಿ, ಮಲೆನಾಡು ಸೇರಿದಂತೆ ಕೋಟೆ,ಐತಿಹಾಸಿಕಸ್ಮಾರಕಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಗ್ರೀನ್ ಪೊಲೀಸರು ಪ್ರವಾಸಿಗರಿಗೆ ಮಾಹಿತಿ, ಸುರಕ್ಷತೆ ಒದಗಿಸಲು ಸಿದ್ಧರಾಗಿದ್ದಾರೆ ಎಂದರು.
ರಾಜ್ಯದ 30 ಸ್ಥಳಗಳಲ್ಲಿ ಪ್ರವಾಸಿಗರಿಗೆ 24 ಗಂಟೆಗಳ ಕಾಲ ಭದ್ರತೆಯನ್ನು ಒದಗಿಸಲಾಗುವುದು .ಇದಕ್ಕೆ 145 ಗ್ರೀನ್ ಪೊಲೀಸರನ್ನು ನೇಮಕ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಬಜೆಟ್ ಅನ್ನು 25ಕೋಟಿಯಿಂದ 240 ಕೋಟಿಗೆ ಹೆಚ್ಚಿಸಲಾಗಿದೆ. ಪ್ರವಾಸಿಸ್ನೇಹಿ ಗ್ರೀನ್ ಪೊಲೀಸರಿಗೆ ಮಾಹಿತಿ, ಸುರಕ್ಷತೆಯ ಅಧಿಕಾರ ಮಾತ್ರ ಇರುತ್ತದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪ್ರತ್ಯೇಕ ಸಮವಸ್ತ್ರಧಾರಿಗಳಾದ ಗ್ರೀನ್ ಪೊಲೀಸ್ ಪಡೆಯ ಜೊತೆಗೆ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಗೃಹರಕ್ಷಕದಳದ ಡಿಜಿಪಿ ಐಪಿ ಜೀಜಾಹರಿಸಿಂಗ್ ಉಪಸ್ಥಿತರಿದ್ದರು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications