ಗೃಹ ಮಂಡಳಿ ಭಾರಿ ಅವ್ಯವಹಾರ : ಜೆಡಿಎಸ್

ಚಿಕ್ಕಬಳ್ಳಾಪುರ ಮತ್ತು ಶೀಡ್ಲಘಟ್ಟ ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ಗೃಹ ಮಂಡಳಿ ಖರೀದಿಸಿರುವ 958 ಎಕರೆ ಜಮೀನು ಖರೀದಿಯಲ್ಲಿ ಸುಮಾರು 300 ಕೋಟಿ ರುಪಾಯಿಗಳ ಅವ್ಯವಹಾರವಾಗಿದೆ ಎಂದು ಜೆಡಿಎಸ್ ಆರೋಪಿಸಿ ನಿಲುವಳಿಗೆ ಸೂಚನೆ ಮಂಡಿಸಲು ಮುಂದಾದಾಗ ಸದನದಲ್ಲಿ ಭಾರಿ ಗದ್ದಲ ಉಂಟಾಯಿತು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ರೇವಣ್ಣ ನಿಲುವಳಿ ಸೂಚನೆಯ ಸಭಾಧ್ಯಕ್ಷರ ಗಮನ ಸೆಳೆಯಲು ಪ್ರಾಥಮಿಕ ಪ್ರಸ್ತಾವನೆ ಮಂಡಿಸುವ ಸಂದರ್ಭದಲ್ಲಿ ಜೆಡಿಎಸ್ ನ ಬಾಲಕೃಷ್ಣ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಬಳಸಿದ ಶಬ್ಧದಿಂದ ಸದನ ಸಂತೆಯಾಗಿ ಮಾರ್ಪಟ್ಟಿತು.
ಆ ಶಬ್ಧದಿಂದ ಕೆರಳಿದ ಸಿಎಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಿಸಿ ಪಾಟೀಲ್, ಸಿದ್ದು ಸವದಿ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಧರಣಿ ನಡೆಸಿದರು. ಮುಖ್ಯ ಸಚೇತಕ ಜೀವರಾಜ್ ಆಡಳಿತ ಪಕ್ಷದ ಸದಸ್ಯರ ಧರಣಿಯನ್ನು ತಡೆಯುವ ಯತ್ನ ಮಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಬಿಜೆಪಿ ಸದಸ್ಯರ ನಡುವೆ ವಾಗ್ವಾದ, ಮಾತಿನ ಚಕಮಕಿ ತಾರಕಕ್ಕೇರಿತು. ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ಜಗದೀಶ್ ಶೆಟ್ಟರ್, ಮುಖ್ಯಮಂತ್ರಿ ಉದ್ದೇಶಿಸಿ ಬಾಲಕೃಷ್ಣ ಬಳಸಿದ ಶಬ್ದವನ್ನು ಕಡತದಿಂದ ತೆಗೆದುಹಾಕಲು ಸೂಚಿಸಿದರು.
ವಿಷಯ ಪ್ರಸ್ತಾಪಿಸಿದ ರೇವಣ್ಣ, ವಸತಿ ಖಾತೆ ಮಾಜಿ ಸಚಿವರ ಸಹೋದರ ಎನ್ ಎಸ್ ಶ್ರೀನಿವಾಸಶೆಟ್ಟಿ ರೈತದಿಂದ 5-6 ಲಕ್ಷ ರುಪಾಯಿಗೆ ಜಮೀನು ಖರೀದಿಸಿ 50 ಲಕ್ಷ ರುಪಾಯಿಗಳಿಗೆ ಮಾರಾಟ ಮಾಡಿ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಶೀಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿ ವೆಂಕಟಾಪುರ, ಸುಗಟವಾರು, ಹೊಸಪೇಟೆ ಮತ್ತು ಬಸವನಹಳ್ಳಿ ಗ್ರಾಮಗಳ ವಿವಿಧ ಸರ್ವೆ ನಂಬರ್ 2 ರಿಂದ 390 ರವರೆಗೆ ಗೃಹ ಮಂಡಳಿ 958 ಎಕರೆ ಜಮೀನು ಖರೀದಿಸಿದೆ ಎಂದು ಕಿಡಿಕಾರಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications