Get Updates
Get notified of breaking news, exclusive insights, and must-see stories!

ಅಡ್ವಾಣಿ ಬೆನ್ನು ಬಿದ್ದ ಸೋತ ಮುಖಗಳು

Naveen Chawla
ಮತಯಂತ್ರಗಳಲ್ಲಿ ಮೋಸ ಮಾಡಲು ಸಾಧ್ಯ. ಇದರಿಂದ ಮತ್ತೆ ಬ್ಯಾಲೆಟ್ ಪೇಪರ್ ಮೂಲಕವೇ ಮುಂದಿನ ಚುನಾವಣೆಗಳನ್ನು ನಡೆಸಬೇಕು ಎಂದು ಮೊಟ್ಟಮೊದಲ ಬಾರಿಗೆ ಧ್ವನಿ ಎತ್ತಿದ ರಾಜಕಾರಣಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು. ಇನ್ನೇನು ಪ್ರಧಾನಿ ಆಗೇಬಿಟ್ಟೆ ಎಂಬ ಹುಮ್ಮಸ್ಸಿನಲ್ಲಿದ್ದ ಅಡ್ವಾಣಿ ಅವರಿಗೆ ದೇಶದ ಮತದಾರರ ಕೈಹಿಡಿಯಲಿಲ್ಲ. ಅವರ ಕನಸು ಕನಸಾಗಿಯೇ ಉಳಿಯಿತು. ಹತಾಶೆಗೊಂಡಿರುವ ಅವರು ಏನೇನೂ ಮಾತನಾಡುತ್ತಿದ್ದಾರೆ ಎಂದು ಅನೇಕರು ಅಂದುಕೊಂಡಿದ್ದರು. ಅಡ್ವಾಣಿ ಅವರಂಥ ಮೇರು ರಾಜಕೀಯ ನಾಯಕ ಇಂತಹ ಕೆಳಮಟ್ಟದ ರಾಜಕೀಯಕ್ಕೆ ಇಳಿಯಬಾರದು ಬಿಡಿ. ಭಾರತವನ್ನು ಮತ್ತೆ ಶಿಲಾಯುಗಕ್ಕೆ ತಳ್ಳುತ್ತಿದ್ದಾರೆ ಅಂದುಕೊಂಡವರೂ ಸಾಕಷ್ಟು ಜನ.

*ಮೃತ್ಯುಂಜಯ ಕಲ್ಮಠ

ಆದರೆ ದಿನ ಕಳೆದಂತೆ ಅಡ್ವಾಣಿ ಅವರು ಎತ್ತಿರುವ ಪ್ರಶ್ನೆ ನಿಜವಾಗತೊಡಗಿದೆ. ದೆಹಲಿ ಸರಕಾರದ ಮುಖ್ಯಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಓಮೇಶ್ ಸೈಗಾಲ್ ಅವರು ಸದ್ಯ ಚಾಲ್ತಿಯಲ್ಲಿರುವ ಮತಯಂತ್ರಗಳ ಮೂಲಕ ಮೋಸ ಮಾಡಬಹುದು. ನಿರ್ದಿಷ್ಟ ವ್ಯಕ್ತಿಗೆ ಎಲ್ಲ ಮತಗಳು ಸೇರ್ಪಡೆಗೊಳಿಸುವ ಸಾಫ್ಟವೇರ್ ನ್ನು ಅಳವಡಿಸಲು ಸಾಧ್ಯ ಎಂದು ಕೇಂದ್ರ ಮುಖ್ಯ ಚುನಾವಣೆ ಅಧಿಕಾರಿ ನವೀನ ಚಾವ್ಲಾ ಅವರ ಮುಂದೆ ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ.
ಇದರಿಂದ ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ಮೋಸ ಮಾಡಬಹುದು ಎಂದಾಯಿತು. ಹಾಗಾದರೆ, ಕಳೆದ ಚುನಾವಣೆಯಲ್ಲಿ ಇಂತಹ ನಕಲಿ ಸಾಫ್ಟವೇರ್ ಬಳಸಲಾಗಿತ್ತೆ ? ಕಾಂಗ್ರೆಸ್ ಪಕ್ಷ ನಿರೀಕ್ಷೆಗೂ ಮೀರಿ ದಿಗ್ವಿಜಯ ಸಾಧಿಸಿತಲ್ಲ. ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಜಯಭೇರಿ ಬಾರಿಸಿತೇ ? ಆಂಧ್ರಪ್ರದೇಶ, ರಾಜಸ್ಥಾನ, ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಮುಂದೆ ಉಳಿದ ಪಕ್ಷಗಳು ಧೂಳಿಪಟವಾದವಲ್ಲ. ಇದಕ್ಕೇನು ಕಾರಣ ಇರಬಹುದು ? ಎನ್ನುವ ಪ್ರಶ್ನೆಗಳು ಏಳುವುದು ಸಹಜ.

ಮತಯಂತ್ರಗಳಲ್ಲಿ ಮೋಸ ಮಾಡಬಹುದು ಎನ್ನುವ ಅಂಶಕ್ಕೂ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿರುವುದಕ್ಕೂ ಸಂಬಂಧವಿಲ್ಲ. ನನ್ನ ಕಳಕಳಿ ಏನೆಂದರೆ ಮತಯಂತ್ರಗಳ ಮೂಲಕ ಮೋಸ ಮಾಡಬಹುದು ಎಂದಾದರೆ, ಮುಂದಿನ ಚುನಾವಣೆ ಅದರ ಬಳಕೆ ಬೇಡ. ಈಗಾಗಲೇ ಅಭಿವೃದ್ಧಿ ಹೊಂದಿದ ಕೆಲ ದೇಶಗಳಲ್ಲಿ ಮತಯಂತ್ರಗಳ ಮೂಲಕ ಚುನಾವಣೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಅಡ್ವಾಣಿ ಹೇಳಿದ್ದಾರೆ. ಅಡ್ವಾಣಿ ಮಾತಿಗೆ ಸಹಮತ ವ್ಯಕ್ತಪಡಿಸಿದವರು ಎಡಪಕ್ಷದ ಮುಖಂಡ ಸೀತಾರಾಂ ಯೆಚೂರಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ರಾಂ ವಿಲಾಸ್ ಪಾಸ್ವಾನ್ ಅವರು ಮತಯಂತ್ರ ನಿಷೇಧಿಸಬೇಕು ಎಂದು ಕೇಂದ್ರವನ್ನು ಆಗ್ರಹಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ, ಯುಪಿಎ ಸರಕಾರದ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಕೂಡಾ ಮತಯಂತ್ರ ಬಳಕೆಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಈ ಪ್ರಕರಣಕ್ಕೆ ಇನ್ನಷ್ಟು ಮಹತ್ವ ಬಂದಿದೆ.

ಭಾರತ್ ಎಲೆಕ್ಟ್ರಾನಿಕ್ ಲಿ.ಮತ್ತು ಎಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ ಎಂಬ ಸಂಸ್ಥೆಗಳು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು 1998ರಲ್ಲೇ ಸಿದ್ದಪಡಿಸಿದ್ದವು. ಆದರೆ, ಪತ್ರಿಕೆಯೊಂದರ ವರದಿಯ ಆಧಾರದ ಮೇಲೆ ಮಾಜಿ ಪ್ರಧಾನಿ ವಿ ಪಿ ಸಿಂಗ್ ಮತಯಂತ್ರಗಳ ವಿರುದ್ಧ ಗಟ್ಟಿಯಾಗಿ ಮಾತನಾಡಿದ್ದರಿಂದ ಇವುಗಳ ಜಾರಿ ನೆನೆಗುದಿಗೆ ಬಿದ್ದಿತು. ಬಿಇಎಲ್ ಮತ್ತು ಇಸಿಐಎಲ್ ಸಂಸ್ಥೆಗಳು ಗೌಡಾನ್ ನಲ್ಲಿ ನೂತನ ತಂತ್ರಜ್ಞಾನದ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಧೂಳು ತಿನ್ನತೊಡಗಿದವು.

ಆದರೆ, ತಂತ್ರಜ್ಞರು ಸುಮ್ಮನೇ ಕೂರಲಿಲ್ಲ. ವಿನೂತನ ತಂತ್ರಜ್ಞಾನ ಹೊಂದಿದೆ ಮತಯಂತ್ರಗಳಿಂದ ಮೋಸ ಮಾಡಲು ಸಾಧ್ಯವಿಲ್ಲ ಎಂದು ಚುನಾವಣೆ ಆಯೋಗಕ್ಕೆ ಮನದಟ್ಟು ಮಾಡಿಕೊಟ್ಟರು. 2004ರಲ್ಲಿ ದೇಶಾದ್ಯಂತ ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ಚುನಾವಣೆಗಳು ನಡೆದವು. ಈವರೆಗೊ ಎಲ್ಲಿಯೂ ಇದರ ಬಗ್ಗೆ ದೂರು ಬಂದಿರಲಿಲ್ಲ. ಆದರೆ ನಿವೃತ್ತ ಐಎಎಸ್ ಅಧಿಕಾರಿ ಸೈಗಾಲ್ ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ಮೋಸ ಮಾಡಬಹುದು ಎಂದು ಪ್ರಾಯೋಗಿಕವಾಗಿ ತೋರಿಸಿಕೊಟ್ಟ ಹಿನ್ನೆಲೆಯಲ್ಲಿ ನೂರೆಂಟು ಪ್ರಶ್ನೆಗಳು ಉದ್ಭವಿಸಿವೆ.

ಮತಯಂತ್ರಗಳಿಗೆ ಸಾಫ್ಟ್ ವೇರ್ ಜೋಡಣೆ ಹಾಗೂ ಅದನ್ನು ಸೀಲ್ ಮಾಡುವ ಕೆಲಸ ಸರಕಾರಿ ಸಂಸ್ಥೆಗಳಾದ ಬಿಇಎಲ್ ಮತ್ತು ಇಐಸಿಎಲ್ ಸ್ವಂತವಾಗಿ ಮಾಡದೇ ಅದನ್ನು ಗುತ್ತಿಗೆ ನೀಡಲಾಗಿತ್ತು ಎಂದು ಸೈಗಾಲ್ ವಿವರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 10 ಸಾವಿರ ಅಂತರದಿಂದ ಫಲಿತಾಂಶ ಪ್ರಕಟವಾಗಿರುವ ಕಡೆಗಳೆಲ್ಲ ತನಿಖೆ ನಡೆಸಬೇಕು ಎಂದಿದ್ದಾರೆ. ಸೈಗಾಲ್ ಅವರ ನೀಡಿರುವ ಸಲಹೆ ಗಂಭೀರವಾಗಿದ್ದರೂ, ಪ್ರಕಟಗೊಂಡಿರುವ ಫಲಿತಾಂಶಗಳ ತನಿಖೆ ತುಸು ಕಷ್ಟವೇ. ಈಗ ಬಂದಿರುವ ಫಲಿತಾಂಶಗಳ ತನಿಖೆ ಕೈಬಿಟ್ಟು ಮುಂದೆ ಆಗುವ ಅನಾಹುತವನ್ನು ಕೊನೆಗೊಳಿಸುವ ಯತ್ನ ಮಾಡಬೇಕಿದೆ. ಮೊದಲು ಸರಕಾರಿ ಕಂಪನಿಗಳು ಗುತ್ತಿಗೆ ನೀಡಿದ್ದ ಗುತ್ತಿಗೆದಾರರ ಬಳಿ ಇರುವ ದಾಖಲೆಗಳನ್ನು ಆಯೋಗ ವಶಪಡಿಸಿಕೊಳ್ಳಬೇಕಾಗುತ್ತದೆ. ಆನಂತರ ಬೇಕಿದ್ದರೆ ತನಿಖೆ ಮಾಡುವುದು ಸೂಕ್ತ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+