ಕಳ್ಳಭಟ್ಟಿ ದುರಂತದ ಹಿಂದೆ ಉಗ್ರರ ಕೈವಾಡ?

ಹಿಂದೆಂದೂ ನಡೆದಿರದಂಥ ಭೀಕರ ಕಳ್ಳಭಟ್ಟಿ ದುರಂತದಲ್ಲಿ ಭೂಗತದೊರೆಗಳ ಕೈವಾಡವಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಸೋಮವಾರದಿಂದ ಕಳ್ಳಭಟ್ಟಿ ಸೇವಿಸಿದ ಜನ ಸಾಯಲು ಪ್ರಾರಂಭಿಸಿದ್ದಾರೆ. ಶುಕ್ರವಾರ ರಾತ್ರಿಯವರೆಗೆ ಸತ್ತವರ ಸಂಖ್ಯೆ 136ಕ್ಕೇರಿದೆ. 1989ರಲ್ಲಿ ಗುಜರಾತ್ ನಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ 132 ಜನ ಸಾವಿಗೀಡಾಗಿದ್ದರು.
ಒಂದೇ ಬಗೆಯ ಕಳ್ಳಭಟ್ಟಿಯನ್ನು ಅಹ್ಮದಾಬಾದ್ ನಲ್ಲಿರುವ ಕಗ್ಡಾಪೀಠ್, ಒಧವ್ ಮತ್ತು ಅಮರೈವಾಡಿ ಪ್ರದೇಶದಲ್ಲಿ ವಿತರಿಸಲಾಗಿತ್ತೆಂದು ತಿಳಿದುಬಂದಿದೆ. ಕಳ್ಳಭಟ್ಟಿ ಸೇವಿಸುತ್ತಿದ್ದಂತೆ ಜನ ಸಾಯಲು ಪ್ರಾರಂಭಿಸಿದ್ದಾರೆ. ಮದ್ಯ ಸೇವಿಸಿರುವ ಸಾಕಷ್ಟು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಳ್ಳಭಟ್ಟಿ ಅಹ್ಮದಾಬಾದ್ ನಲ್ಲಿ ಇನ್ನೂ ವಿತರಣೆಯಾಗುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಭೂಗತಲೋಕದ ಕೈವಾಡವಿರುವುದು ಬಹಿರಂಗವಾಗುತ್ತಿದ್ದಂತೆ ಜನ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಆದರೆ, ಈಗಾಗಲೆ ಅನಾಹುತ ಜರುಗಿಹೋಗಿದೆ. ಇದನ್ನು ಅರಿಯದ ಸ್ಲಂನಲ್ಲಿರುವ ಜನ ಕಳ್ಳಭಟ್ಟಿಯನ್ನು ಕೊಳ್ಳುತ್ತಲೇ ಇದ್ದಾರೆ. ಗುರುವಾರ 1200 ಅಕ್ರಮ ಮದ್ಯ ಮಾರಾಟ ಅಂಗಡಿಗಳನ್ನು ಗುಜರಾತ್ ಸರಕಾರ ಮುಚ್ಚಿದೆ ಮತ್ತು 800ಕ್ಕೂ ಹೆಚ್ಚು ಮಾರಾಟಗಾರರನ್ನು ಬಂಧಿಸಿದೆ.
ವಿವಾದ ಸುರಿದುಕೊಂಡ ಮಲ್ಯ : ಮದ್ಯ ಮಾರಾಟವನ್ನು ನಿಷೇಧಿಸಿರುವುದೇ ಗುಜರಾತ್ ನಲ್ಲಿ ಕಳ್ಳಭಟ್ಟಿ ದುರಂತಕ್ಕೆ ಕಾರಣ ಎಂದು ಮದ್ಯದ ದೊರೆ ಯುನೈಟೆಡ್ ಬ್ರಿವರೀಸ್ ನ ಮಾಲಿಕ ವಿಜಯ್ ಮಲ್ಯ ಹೇಳಿ ವಿವಾದವನ್ನು ಮೈಮೇಲೆ ಸುರಿದುಕೊಂಡಿದ್ದಾರೆ.
ಮದ್ಯ ಮಾರಾಟವನ್ನು ನಿಷೇಧಿಸಿರುವುದು ಹಾಸ್ಯಾಸ್ಪದ. ಇದರಿಂದಾಗಿಯೇ ಜನ ಅಕ್ರಮ, ಅನಾರೋಗ್ಯಕರ, ಪ್ರಾಣಕಂಟಕ ಕಳ್ಳಭಟ್ಟಿಯನ್ನು ಸೇವಿಸಲು ಪ್ರಾರಂಭಿಸಿದ್ದಾರೆ ಎಂದು ಮಲ್ಯ ಗುಜರಾತ್ ದುರಂತವನ್ನು ವ್ಯಾಖ್ಯಾನಿಸಿದ್ದಾರೆ. ಮದ್ಯ ನಿಷೇಧವನ್ನು ಹಿಂಪಡೆಯಬೇಕೆಂದು ಮಲ್ಯ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕೇಳಿಕೊಂಡಿದ್ದಾರೆ.
ಮಲ್ಯ ಮಾತಿನಿಂದ ಸಿಡಿದೆದ್ದಿರುವ ಬಿಜೆಪಿ, ಗುಜರಾತ್ ನಲ್ಲಿ ಮಲ್ಯ ಅವರ ಬ್ರಾಂಡಿನ ಮದ್ಯ ಮಾರಾಟವಾಗದ ಕಾರಣ ವಿನಾಕಾರಣ ಆರೋಪಿಸುತ್ತಿದ್ದಾರೆ ಎಂದು ಕಿಡಿಕಾರಿದೆ.
ಮಹಾತ್ಮ ಗಾಂಧಿಯ ಕರ್ಮಭೂಮಿಯಾಗಿದ್ದ ಗುಜರಾತ್ ರಾಜ್ಯವೊಂದರಲ್ಲಿ ಮಾತ್ರ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.
(ಏಜೆನ್ಸೀಸ್)












Click it and Unblock the Notifications