ಮೈಸೂರು ಕೆಲ ಭಾಗಗಳಲ್ಲಿ ನಿಷೇಧಾಜ್ಞೆ ಜಾರಿ
ಮೈಸೂರು, ಜು. 03 : ಮೈಸೂರು ನಗರದಲ್ಲಿ ಗಲಭೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ತಕ್ಷಣವೇ ಮೈಸೂರು ನಗರ ಪೋಲೀಸ್ ಕಮೀಷನರೇಟ್ ವ್ಯಾಪ್ತಿಯ ಉದಯಗಿರಿ ಪೋಲೀಸ್ ಠಾಣೆ, ನರಸಿಂಹರಾಜ ಪೋಲೀಸ್ ಠಾಣೆ, ಲಷ್ಕರ್ ಪೋಲೀಸ್ ಠಾಣೆ ಮತ್ತು ಮಂಡಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 12 ಗಂಟೆಯವರೆಗೆ ಕಲಂ 144 ಸಿಆರ್ಪಿಸಿ ರೀತ್ಯ ನಗರದ ಕೆಲ ಭಾಗಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಮೈಸೂರು ಪೋಲೀಸ್ ಆಯುಕ್ತ ಸುನೀಲ್ ಅಗರವಾಲ್ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಜಾರಿಯ ಅವಧಿಯಲ್ಲಿ ಮೈಸೂರು ನಗರದ ಉದಯಗಿರಿ ಪೋಲೀಸ್ ಠಾಣೆ, ನರಸಿಂಹರಾಜ ಪೋಲೀಸ್ ಠಾಣೆ, ಲಷ್ಕರ್ ಪೋಲೀಸ್ ಠಾಣೆ ಮತ್ತು ಮಂಡಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟಾಗಿ 5 ಜನರು ಗುಂಪು ಗೂಡುವುದನ್ನು ನಿಷೇಧಿಸಿದೆ. ಯಾವುದೇ ವ್ಯಕ್ತಿ ತನ್ನೊಂದಿಗೆ ಸ್ಪೋಟಕ ವಸ್ತು ಮತ್ತು ಯಾವುದೇ ರೀತಿಯ ಮಾರಕಾಸ್ತ್ರಗಳನ್ನು ಒಯ್ಯಬಾರದು. ಯಾವುದೇ ಸಭೆ ಸಮಾರಂಭಗಳನ್ನು ನಡೆಸಬಾರದು ಮತ್ತು ಮೆರವಣಿಗೆ ನಡೆಸಬಾರದು. ಈ ಆದೇಶ ಮದುವೆ ಸಮಾರಂಭ ಮತ್ತು ಶವ ಸಂಸ್ಕಾರಗಳಿಗೆ ಅನ್ವಯಿಸುವುದಿಲ್ಲ. ಶಾಲಾ ಕಾಲೇಜುಗಳ ಪರೀಕ್ಷೆಗೆ ತೆರಳುವವರಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ನಿಷೇಧಾಜ್ಞೆ ಆದೇಶದಲ್ಲಿ ತಿಳಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)