ವಿದ್ಯುತ್ ದರ ಏರಿಕೆ ಅನಿವಾರ್ಯ: ಯಡಿಯೂರಪ್ಪ
ಬೆಂಗಳೂರು, ಜೂ.29: ವಿದ್ಯುತ್ ದರ ಏರಿಕೆ ಅನಿವಾರ್ಯವಾಗಿದ್ದು, ಈ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸಚಿವ ಈಶ್ವರಪ್ಪ ಹಾಡಿದ ರಾಗಕ್ಕೆ ದನಿಗೂಡಿಸಿದ್ದಾರೆ. ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ನಿಗಮಗಳು ನಷ್ಟ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯ ಎಂಬ ಸೂಚನೆ ನೀಡಿದರು.
ನಗರದ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಲು ಬಂದಿದ್ದ ಸಿಎಂ ಅವರು ಈ ವಿಷಯವನ್ನು ಹೇಳಿದರು. ಕಳೆದ ವರ್ಷ ಸುಮಾರು 3 ಸಾವಿರ ಕೋಟಿ ರು ವೆಚ್ಚದಲ್ಲಿ ವಿದ್ಯುತ್ ಖರೀದಿ ಮಾಡಲಾಗಿತ್ತು. ಆದರೆ, ಈ ಬಾರಿ ಸಾಧ್ಯವಿಲ್ಲ. ಎಸ್ಕಾಂ ಸಂಸ್ಥೆ ಅಧಿಕಾರಿಗಳು ವಿದ್ಯುತ್ ದರ ಏರಿಕೆಗೆ ಅನುಮತಿ ನೀಡುವ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ( ಕೆಇಆರ್ ಸಿ) ಕ್ಕೆ ಸಲ್ಲಿಸಲು ಸಿದ್ಧತೆ ನಡೆದಿದೆ. ಈ ನಿಟ್ಟಿನಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಆರಂಭವಾಗಿದೆ ಎಂದರು.
ವಿದ್ಯುತ್ ಕೊರತೆ ಉಂಟಾಗಿದ್ದು, ಮುಂಬರುವ ಕೆಲ ದಿನಗಳಲ್ಲಿ ಮಳೆ ಬೀಳುವ ಸಂಭವವಿದೆ. ಮಳೆ ಬಂದು ಜಲಾಶಯ ತುಂಬಿದರೆ ವಿದ್ಯುತ್ ಅಭಾವ ಉಂಟಾಗುವುದಿಲ್ಲ ಎಂದು ತಿಳಿಸಿದರು. ಈಗಾಗಲೇ ರಾಜ್ಯದ ಎಲ್ಲಾ ಜಲಾಶಯಗಳು ನೀರಿನ ಕೊರತೆಯನ್ನು ಎದುರಿಸುತ್ತಿದೆ ಹಾಗೂ ಮುಂಗಾರು ವೈಫಲ್ಯದ ಬಗ್ಗೆ ಹವಾಮಾನ ಇಲಾಖೆಯ ವರದಿ ಸೂಚನೆ ನೀಡಿರುವುದರಿಂದ ವಿದ್ಯುತ್ ದರ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.
(ದಟ್ಸ್ ಕನ್ನಡವಾರ್ತೆ)