ಗುಲ್ಬರ್ಗಾದಲ್ಲಿ ಖರ್ಗೆಗೆ ಭಾರಿ ಸನ್ಮಾನ
ಗುಲಬರ್ಗಾ, ಜೂ. 27 : ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ನಾಗರಿಕರು ಹಾಗೂ ಉದ್ಯಮಿಗಳಿಂದ ತೆರಿಗೆ ರೂಪದಲ್ಲಿ ಹಣ ಸಂಗ್ರಹಿಸುವ ಪಾಲಿಕೆಗೆ ನಗರವನ್ನು ಅಭಿವೃದ್ಧಿ ಪಡಿಸುವ ಹಾಗೂ ಸುಂದರವಾಗಿಸುವ ಜವಾಬ್ದಾರಿಯೂ ಇದೆ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಗುಲಬರ್ಗಾ ಮಹಾನಗರ ಪಾಲಿಕೆಯು ಆಯೋಜಿಸಿದ್ದ ಸಮಾರಂಭದಲ್ಲಿ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಪರಸ್ಪರ ಸಹಕಾರದಿಂದ ಅಭಿವೃದ್ಧಿ ಸಾಧಿಸಬಹುದು. ರಾಜ್ಯ ಸರ್ಕಾರವು ಕೇಳಿದ ನೆರವನ್ನು ಕೊಡಲು ಕೇಂದ್ರ ಸಿದ್ಧವಿದೆ. ಗುಲಬರ್ಗಾದಲ್ಲಿ ಇಎಸ್ಐ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಆರಂಭಿಸಲು 200 ಕೋಟಿ ರೂ. ಕೊಡಲು ಸಿದ್ಧವಿದ್ದೇವೆ. ಇದಕ್ಕಾಗಿ ಬೇಕಾಗುವ 30 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಒದಗಿಸಬೇಕು ಎಂದು ಅವರು ಹೇಳಿದರು.
ತಾವು ಮಂತ್ರಿಯಾಗಿ ಕೆಲವೇ ದಿನಗಳಲ್ಲಿ ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು, ಗುಲಬರ್ಗಾ ಬೀದರ್ ರೈಲು ಮಾರ್ಗ ನಿರ್ಮಾಣಕ್ಕೆ ಹೆಚ್ಚಿನ ನೆರವು ನೀಡಬೇಕೆಂದು ಮನವಿ ಮಾಡಿದ್ದೇನೆ. ಬರುವ ರೈಲ್ವೇ ಬಜೆಟ್ನಲ್ಲಿ ನಮಗೆ ನೆರವು ಖಂಡಿತ ಸಿಗುತ್ತದೆ ಎಂದು ಅವರು ಭರವಸೆ ನೀಡಿದರು.
ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬೀದರ್ ಕ್ಷೇತ್ರದ ಲೋಕಸಭಾ ಸದಸ್ಯ ಎನ್. ಧರ್ಮಸಿಂಗ್, ಡಾ, ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರಿ ಸಮಿತಿ ಅಧ್ಯಕ್ಷ ಶಶೀಲ್ ಜಿ.ನಮೋಶಿ, ಶಾಸಕ ಖಮರುಲ್ ಇಸ್ಲಾಂ, ರಾಜ್ಯಸಭಾ ಸದಸ್ಯ ಕೆ.ಬಿ.ಶಾಣಪ್ಪ, ಮತ್ತಿತರರನ್ನು ಸನ್ಮಾನಿಸಲಾಯಿತು.
(ದಟ್ಸ್ ಕನ್ನಡ ವಾರ್ತೆ)