ಸರಬ್ಜೀತ್ ಸಿಂಗ್ ಗೆ ಗಲ್ಲು ಬೇಡ : ಬರ್ನಿ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅನ್ಸಾರ್ ಬರ್ನಿ ಅವರು, ಇಂದು ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿ ಜೀವದಾನ ನೀಡಬೇಕು ಎಂದು ಅವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಸರಬ್ಜೀತ್ ಸಿಂಗ್ ಪಾಕ್ ಅಧ್ಯಕ್ಷರು ಕ್ಷಮಾದಾನ ನೀಡುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಹಿಂದು ಎಂಬ ಒಂದೇ ಕಾರಣಕ್ಕೆ ಸರಬ್ಜೀತ್ ಸಿಂಗ್ ಅವರನ್ನು ಗಲ್ಲುಗೇರಿಸಲು ಪಾಕ್ ಸರಕಾರ ಮುಂದಾಗಬಾರದು. ಅವರು ಲಾಹೋರ್ ಬಾಂಬ್ ಸ್ಫೋಟ ಕೃತ್ಯದಲ್ಲಿ ಭಾಗಿಯಾಗಿಲ್ಲ ಎನ್ನುವುದು ನನ್ನ ನಂಬಿಕೆ ಎಂದು ಬರ್ನಿ ಪ್ರತಿಪಾದಿಸಿದರು.
ಸರಬ್ಜೀತ್ ಸಿಂಗ್ ಈಗಾಗಲೇ ಪಾಕಿಸ್ತಾನದ ಜೈಲಿನಲ್ಲಿ 18 ವರ್ಷ ಸೆರೆವಾಸ ಅನುಭವಿಸಿದ್ದಾರೆ. ಈ ಅವಧಿ ಗಲ್ಲು ಶಿಕ್ಷೆಗಿಂತ ಹೆಚ್ಚಿನದಾಗಿದೆ. 18 ವರ್ಷದ ನಂತರ ನೇಣಿಗೇರಿಸುವುದು ಸಂವಿಧಾನದ ವಿರೋಧಿ ಕೆಲಸವಾಗುತ್ತದೆ. ಆದ್ದರಿಂದ ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರು ಸರಬ್ಜೀತ್ ಸಿಂಗ್ ಅವರಿಗೆ ಮಾನವೀಯತೆ ಮೇಲೆ ಜೀವದಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಲಾಹೋರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಭಾರತೀಯ ಸರಬ್ಜೀತ್ ಸಿಂಗ್ ಅವರ ಕ್ಷಮಾದಾನ ಮನವಿಯನ್ನು ಪಾಕ್ ಸುಪ್ರಿಂಕೋರ್ಟ್ ತಿರಸ್ಕರಿಸಿದ್ದು, ಸಿಂಗ್ ನೇಣಿಗೇರುವುದು ಖಚಿತವಾಗಿದೆ. ಮಾನವ ಹಕ್ಕುಗಳ ಮುಖ್ಯಸ್ಥ ಬರ್ನಿ ಎಂಬುವವರು ಸಿಂಗ್ ಜೀವ ಉಳಿಸಲು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.
(ಏಜನ್ಸೀಸ್)