ಬರದ ಛಾಯೆ : ಎಮರ್ಜೆನ್ಸಿ ಸಭೆ ಕರೆದ ಕೇಂದ್ರ

Draught, center calls for emergency meeting
ನವದೆಹಲಿ, ಜೂ. 24 : ದೇಶದಾದ್ಯಂತ ಬರದ ಭೀಕರ ಛಾಯೆ ಮೂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಿದ್ಯುತ್, ಕೃಷಿ ಕಾರ್ಯದರ್ಶಿ, ನೀರಾವರಿ ಸಚಿವ ಮತ್ತು ಹವಾಮಾನ ಇಲಾಖೆಯ ತುರ್ತು ಸಭೆಯನ್ನು ಶ್ರಮ ಶಕ್ತಿ ಭವನದಲ್ಲಿ ಬುಧವಾರ ಕರೆದಿತ್ತು.

ದೇಶದ ಬಹುತೇಕ ರಾಜ್ಯಗಳಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಸರಾಸರಿಗಿಂತ ಭಾರೀ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಸಾಲದೆಂಬಂತೆ ದಕ್ಷಿಣ ಮತ್ತು ಈಶಾನ್ಯದ ರಾಜ್ಯಗಳು ವಿದ್ಯುತ್ ಕೊರತೆಯನ್ನು ಎದುರಿಸುತ್ತಿವೆ. ಅನೇಕ ಅಣೆಕಟ್ಟೆಗಳು ಕೂಡ ಖಾಲಿಯಾಗಿದ್ದು ಅನೇಕ ರಾಜ್ಯಗಳಲ್ಲಿ ಕುಡಿಯುವ ನೀರಿನ ಕೊರತೆ ಕಾಣಿಸಲಿದೆ.

ಸರಾಸರಿ ಮಳೆಯ ಶೇ. 50ರಷ್ಟು ಕಡಿಮೆ ಮಳೆಯಾಗುವ ಸಾಧ್ಯತೆಯಿರುವುದರಿಂದ ಉಂಟಾಗುವ ವಿಪತ್ತು ನಿರ್ವಹಣೆಗಾಗಿ ಕಾರ್ಯಯೋಜನೆ ಸಿದ್ಧಪಡಿಸುತ್ತಿದೆ. ಮಳೆಯ ಕೊರತೆಗೆ ಎಲ್ ನಿನೋ ಪರಿಣಾಮವೇ ಕಾರಣ ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ವರ್ಷ ಎಲ್ ನಿನೋ ಪರಿಣಾಮ ಸಂಭವಿಸುವ ಸಾಧ್ಯತೆ ಶೇ.50ಕ್ಕಿಂತ ಜಾಸ್ತಿಯಾಗಿದೆ. ಇದರ ಪರಿಣಾಮದಿಂದಲೇ ಮಳೆಗಾಲ ತಡವಾಗಿ ಆರಂಭವಾಗಿದೆ.

ಉತ್ತರದ ರಾಜ್ಯಗಳಲ್ಲಿ ಮಳೆಗಾಲ ಇನ್ನೂ ತಡವಾದರೆ ಕೃಷಿಯ ಮೇಲೆ ವಿಪರೀತ ಪರಿಣಾಮವಾಗುವ ಸಾಧ್ಯತೆಯಿದೆ. ಶೇ.50ರಷ್ಟು ಖಾರಿಫ್ ಬೆಳೆ ಮಳೆಗಾಲವನ್ನೇ ಅವಲಂಬಿಸಿರುವುದರಿಂದ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಆಹಾರ ಕೊರತೆ ಕಾಣಲಿದೆ.

ದೇವರ ಮೇಲೆ ಭಾರ ಹಾಕಿದ ಯಡಿಯೂರಪ್ಪ : ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿಯೂ ಮಳೆಯ ಪ್ರಮಾಣ ಕಡಿಮೆಯಾದ್ದರಿಂದ 77 ಲಕ್ಷ ಎಕರೆ ಸಾಗುವಳಿ ಜಮೀನಿನಲ್ಲಿ ಕೇವಲ ಶೇ.20ರಷ್ಟು ಮಾತ್ರ ಬಿತ್ತನೆಯಾಗಿದೆ. ಈ ಬೆಳೆ ಮುಂಗಾರು ಮಳೆಗಾಲವನ್ನೇ ಅವಲಂಬಿಸುರುವುದರಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ.

ರಾಜ್ಯದ ಅಣೆಕಟ್ಟೆಗಳು ಕೂಡ ಭರ್ತಿಯಾಗದೆ ಚಿಂತಾಜನಕ ಸ್ಥಿತಿಗೆ ಕನ್ನಡಿ ಹಿಡಿದಿವೆ. ಕನ್ನಂಬಾಡಿ ಕಟ್ಟೆ ಖಾಲಿ ಖಾಲಿಯಾಗಿರುವುದರಿಂದ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳು ಕುಡಿಯುವ ನೀರಿನ ಕೊರತೆ ಎದುರಿಸುವ ಸಂಭವ ಜಾಸ್ತಿ. ಕಳೆದ ಆರು ವರ್ಷಗಳಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟೆ ಈ ಪರಿಯ ನೀರಿನ ಕೊರತೆ ಎದುರಿಸಿರಲಿಲ್ಲ. ನೀರಿನ ಪ್ರಮಾಣ ಇನ್ನೂ ಕಡಿಮೆಯಾದರೆ ಜಲಾಶಯದಿಂದ ನೀರನ್ನೂ ಬಿಡಲಾಗುವುದಿಲ್ಲ ಎಂದು ಕೆಆರ್ಎಸ್ ಇಂಜಿನಿಯರುಗಳು ಎಚ್ಚರಿಸಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ, ಬೆಂಗಳೂರಿಗರು ಕಬಿನಿ ಜಲಾಶಯದಲ್ಲಿ ಬಾಯಿ ಬಿಡಬೇಕಾಗುತ್ತದೆ.

ರಾಜ್ಯದಲ್ಲಿ ವರುಣ ದೇವ ಮುನಿಸಿಕೊಂಡು ಕುಳಿತಿದ್ದರೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೇವರ ಮೇಲೆಯೇ ಭಾರ ಹಾಕಿ ಕುಳಿತಿದ್ದಾರೆ. ತಾವು (ತಮ್ಮ ಪಕ್ಷ) ಯಾವುದೇ ಕೆಟ್ಟ ಕೆಲಸ ಮಾಡಿರದಿದ್ದರಿಂದ ದೇವರು ಕೂಡ ಕೈಬಿಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ರೈತರಿಗೆ ಬೀಜ ಮತ್ತು ಗೊಬ್ಬರದ ಪೂರೈಕೆಗೆ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ. ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಗತ್ಯ ಹಣವನ್ನು ಡೆಪಾಸಿಟ್ ಮಾಡಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಮಳೆಯೇ ಬಾರದಿದ್ದರೆ ಬೀಜ ಮತ್ತು ಗೊಬ್ಬರ ತೆಗೆದುಕೊಂಡು ರೈತರು ಮೈಮೇಲೆ ಸುರಿದುಕೊಳ್ಳಬೇಕು, ಸಾಲ ಪಡೆದು ಮರುತಿರುಗಿಸಲಾಗದೆ ನೇಣಿಗೆ ಶರಣಾಗಬೇಕಷ್ಟೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+