ಅಡ್ವಾಣಿಯವರೇ ಹಿಂದುತ್ವ ಕೈಬಿಡಿ

ಭಾರತೀಯ ಜನತಾ ಪಕ್ಷಕ್ಕೆ ಏನಾಗಿದೆ. ಒಂದು ಲೋಕಸಭೆ ಚುನಾವಣೆಯಲ್ಲಿ ಸೋಲುಂಡರೆ ಪಕ್ಷದ ಆಯುಷ್ಯ ಕೊನೆಗೊಳ್ಳುತ್ತಾ ? ಆ ಪಕ್ಷದಲ್ಲಿರುವ ನಾಯಕರಿಗೆ ಇನ್ನ್ಯಾವತ್ತೂ ಈ ದೇಶದ ಅಧಿಕಾರದ ಗದ್ದುಗೆಯ ಮೇಲೆ ಕೂರುವ ಅವಕಾಶ ಸಿಗುವುದಿಲ್ವಾ ? ಉಕ್ಕಿನ ಮನುಷ್ಯ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಬರೀ 82 ವರ್ಷ, ಇನ್ನೈದು ವರ್ಷ ಅವರ ವಯಸ್ಸು ಗಟ್ಟಿಯಾಗಿರುವುದಿಲ್ವಾ ? ಅವರನ್ನು ಪ್ರಧಾನಿ ಆಗಿಸಲು ಶ್ರಮಿಸೋದು ಬೇಡವಾ ? ಆಗಿರುವ ತಪ್ಪನ್ನು ತಿದ್ದಿಕೊಳ್ಳುವುದು ಬೇಡವಾ ? ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಪ್ರತ್ಯಾರೋಪಕ್ಕೆ ಇಳಿದರೆ ಸಮಸ್ಯೆ ಬಗೆಹರಿಯುತ್ತಾ ? ಚುನಾವಣೆ ತಂತ್ರಗಾರಿಕೆ ಹೆಣೆದವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದರೆ ಉದ್ಭವಿಸಿರುವ ಎಲ್ಲ ಸಮಸ್ಯೆಗಳು ಸರಿಹೋಗುತ್ತವೆಯಾ ? ಏಕೋ ಅತೀ ಶಿಸ್ತಿನ ಪಕ್ಷ ? ಎಂದು ಗುರುತಿಸಿಕೊಂಡಿದ್ದ ಬಿಜೆಪಿ ಎಂದು ರಾಷ್ಟ್ರೀಯತೆ ಸಾರುವ ಪಕ್ಷದ ಸ್ಥಿತಿ ಚಿತ್ರಾನ್ನವಾಗಿ ಪಾತಾಳ ತಲುಪಿದ್ದು ಅಯ್ಯೋ ಅನಿಸುತ್ತದೆ ಅಲ್ಲವೇ.
ಕಾಂಗ್ರೆಸ್ ಪಕ್ಷದ ಕೆಲ ಪ್ರಮುಖ ತೀರ್ಮಾನಗಳು, ಆದೇಶಗಳನ್ನು ನಿಮಗೆ ನೆನಪಿಸುವೆ. ಅಮರನಾಥ್ ದೇವಾಲಯಕ್ಕೆ ಭೂಮಿ ನೀಡಿದ್ದಕ್ಕಾಗಿ ಕಾಶ್ಮೀರ ಹೊತ್ತಿ ಉರಿಯಿತು. ಆಗ ಜಮ್ಮು ಕಾಶ್ಮೀರ ಮುಖ್ಯಮಂತ್ರಿಯಾಗಿದ್ದ ಗುಲಾಮ್ ನಬಿ ಅಜಾದ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಮಂತ್ರಿಯಾಗಿದ್ದ ಶಿವರಾಜ್ ಪಾಟೀಲ್, ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ವಿಲಾಸ್ ರಾವ್ ದೇಶಮುಖ್, ಸಿಖ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಜಗದೀಶ್ ಟೈಟ್ಲರ್ ಹೈಕಮಾಂಡ್ ಆದೇಶದ ಮೇಲೆ ವಾಪಸ್ಸು ಪಡೆದುಕೊಂಡರು. ಅದು ಆ ಪಕ್ಷದ ನಾಯಕರಿಗೆ ಅನಿವಾರ್ಯವಿತ್ತು.
ಅದಿರಲಿ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮುಂದಿನ ಪ್ರಧಾನಿ ಎಂದು ಎರಡನೇ ಅವಧಿಗೆ ಮನಮೋಹನ್ ಸಿಂಗ್ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದಾಗ ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಬಲ ನಾಯಕ ಪ್ರಣಬ್ ಮುಖರ್ಜಿ ಕೂಡಾ ನಾಯಕರ ನಿರ್ಧಾರಕ್ಕೆ ತಲೆಬಾಗಿದರು. ಲಾಲು ಜೊತೆಗೆ ಮುನಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ರಾಹುಲ್ ಗಾಂಧಿ ಓಲೈಸಲು ನಿಂತರು. ಇಡೀ ಕಾಂಗ್ರೆಸ್ ಅವರ ಹಿಂದೆ ನಿಂತಿತು. ಆಗ ತುಸು ಅಸಮಾಧಾನ ವ್ಯಕ್ತಪಡಿಸಿದ ನಮ್ಮವರೇ ಆದ ವೀರಪ್ಪ ಮೊಯ್ಲಿ ಅವರನ್ನು ಪಕ್ಷದ ವಕ್ತಾರ ಸ್ಥಾನದಿಂದ ಏಕಾಏಕಿ ಕಿತ್ತು ಹಾಕಿದರು. ಈ ಎಲ್ಲ ತೀರ್ಮಾನಗಳು ಪಕ್ಷ ಅಧ್ಯಕ್ಷೆ ಸೋನಿಯಾ ಗಾಂಧಿ ತೆಗೆದುಕೊಂಡರು. ಅಷ್ಟೇ ಏಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಅತ್ಯಂತ ತಳಮಟ್ಟಕ್ಕೆ ಇಳಿದಿದೆ. ಆದರೂ ಕೂಡಾ ಒಬ್ಬರಿಗೊಬ್ಬರು ಕೆಸರೆರಚಾಟ ಇಲ್ಲ. ಇಷ್ಟಾದರೂ ಆ ಪಕ್ಷದ ನಾಯಕರು ಕಮಕ್ ಕಿಮಕ್ ಅನ್ನಲ್ಲ ಬಿಡಿ. ಅಲ್ಲೇನಿದ್ದರೂ ದಿಲ್ಲಿಯ 10, ಜನಪಥ್ ರಸ್ತೆಯಿಂದ ಬರುವ ಆದೇಶವೇ ಅಂತಿಮ.
ಹಾಗಾದರೇ ಬಿಜೆಪಿಗೆ ಏನಾಗಿದೆ. ಕಾಂಗ್ರೆಸ್ ಗೆ ಕೂಡಾ ಸೋಲಿದೆ, ಗೆಲುವಿದೆ. ಎರಡನ್ನು ಸಮಾನಾಗಿ ಹಂಚಿಕೊಳ್ಳುತ್ತಾರೆ. ಹಾಗಾದರೆ ಬಿಜೆಪಿ ನಾಯಕ ಏಕೆ ಹೀಗಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋತ ನಂತರ ಪಕ್ಷದ ಸರ್ವೋಚ್ಚ ನಾಯಕ ಲಾಲ್ ಕೃಷ್ಣ ಅಡ್ವಾಣಿ ತಿಂಗಳ ಮೇಲಾದರೂ ಅವರು ಉಗುಳು ನುಂಗುತ್ತಲೇ ಇದ್ದಾರೆ. ದೇಶದ ಜನತೆ ಕೈಹಿಡಿಯಲಿಲ್ಲ ಎಂಬ ನೋವು ಇರಬಹುದು. ಮುಖಭಂಗ ಅನುಭವಿಸಿರುವ ಸಂಕಟ ಇರಬಹುದು, 50 ವರ್ಷ ರಾಜಕೀಯ ಮಾಡಿದರೂ ಪ್ರಧಾನಿ ಆಗುವ ಅವಕಾಶ ಲಭಿಸಲಿಲ್ವಾ ಎಂಬ ಕೊರಗಿರಬಹುದು. ಇದು ಒಂದು ಕಡೆಯಾದರೆ, ಬಿಜೆಪಿಯ ಇತರೆ ನಾಯಕರಾದ ಯಶವಂತ್ ಸಿನ್ಹಾ, ಜಸ್ವಂತ್ ಸಿಂಗ್, ಅರುಣ್ ಜೈಟ್ಲಿ, ರಾಜನಾಥ್ ಸಿಂಗ್, ಅರುಣ್ ಶೌರಿ, ಸುಧೀಂದ್ರ ಕುಲಕರ್ಣಿ ಅವರ ವರ್ತನೆ ನೋಡಿದ್ರೆ, ಇದ್ದುದ್ದರಲ್ಲಿ ಕಾಂಗ್ರೆಸ್ ಪಕ್ಷವೇ ವಾಸಿ ಅನಿಸಲ್ವಾ. ಶಿಸ್ತಿನ ಪಕ್ಷವೆಂದು ಖ್ಯಾತಿ ಹೊಂದಿದ್ದ ಬಿಜೆಪಿಯಲ್ಲಿ ಎಲ್ಲಿದೆ ಶಿಸ್ತು. ಹಿರಿಯ ನಾಯಕ ಅಡ್ವಾಣಿ ಬಾಯ್ಮಿಚ್ಚಿಕೊಂಡಿದ್ದಾರೆ. ಉಳಿದ ಎಲ್ಲ ನಾಯಕರು ಬಾಯಿ ಬೊಂಬಾಯಿ. ಪಕ್ಷದ ಇಮೇಜನ್ನು ಲೆಕ್ಕಿಸದೇ ಸಾರ್ವಜನಿಕವಾಗಿ ಆರೋಪ ಪ್ರತ್ಯಾರೋಪಕ್ಕೆ ಇಳಿದಿದ್ದಾರೆ. ನಿಮ್ಮನ್ನು ಬೆಂಬಲಿಸುವ ಕಾರ್ಯಕರ್ತರಿಗೆ ಯಾವ ಸಂದೇಶ ರವಾನಿಸಿದಂತಾಗುತ್ತದೆ. ಜನರು ನಿಮ್ಮ ಬಗ್ಗೆ ಏನು ಅಂದುಕೊಂಡಾರೂ ಎಂಬ ಭಯವೂ ನಿಮಗಿಲ್ಲವೇ ?
ದೇಶದ ಮತದಾರ ತಂಬಾ ಪ್ರಬುದ್ಧವಾಗಿದ್ದಾನೆ. ಪ್ರತಿ ನಾಯಕರ ಜನ್ಮ ಜಾಲಾಡುವಷ್ಟು ತಿಳುವಳಿಕೆ ಹೊಂದಿದ್ದಾನೆ. ಅದೇ ಕಾರಣಕ್ಕೆ ಎಲ್ ಕೆ ಅಡ್ವಾಣಿ ಅವರು ಪ್ರಧಾನಿ ಆಗಲಿಕ್ಕೆ ಸಾಧ್ಯವಾಗಲಿಲ್ಲ. ಹಿಂದುತ್ವದ ಆಟ ನಡೆಯಲಿಲ್ಲ. ನಡೆಯಲು ಸಾಧ್ಯವೂ ಇಲ್ಲ. ದುರ್ಬಲ ಪ್ರಧಾನಿ, ವಿದೇಶಿ ಮೂಲ, ವರುಣ್ ಗಾಂಧಿ ಹುಚ್ಚಾಟ, ಅಡ್ವಾಣಿ ಜೊತೆಗೆ ನರೇಂದ್ರ ಮೋದಿಯನ್ನು ಪ್ರಧಾನಿ ಎಂದು ಬಿಂಬಿಸಿದ್ದು ಪಕ್ಷದ ಸೋಲಿಗೆ ಪ್ರಮುಖ ಕಾಣಿಕೆ ಸಲ್ಲಿಸಿದವು. ಇದೀಗ ನವದೆಹಲಿಯಲ್ಲಿ ಎರಡು ದಿನದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಶುರುವಾಗಿದೆ. ಮೊದಲನೇ ದಿನದಲ್ಲಿ ಯಶವಂತ್ ಸಿನ್ಹಾ, ಅರುಣ್ ಜೈಟ್ಲಿ ಅನುಪಸ್ಥಿತಿ ಪಕ್ಷದಲ್ಲಿ ಯಾವುದೇ ಸರಿಯಿಲ್ಲ ಅನ್ನುವುದು ದೃಡಪಟ್ಟಿದೆ. ಸೋಲಿನ ಹೊಣೆಗಾರಿಕೆ ಹೊರುವುದಾದರೆ ನಾನೇ ಹೊರುವೆ ಎಂದು ಹೇಳುವ ಮೂಲಕ ಪಕ್ಷದಲ್ಲಿ ಬಿರುಗಾಳಿಯನ್ನು ತಣ್ಣಗಾಗಿಸಲು ರಾಜನಾಥ್ ಸಿಂಗ್ ಪ್ರಯತ್ನಿಸುತ್ತಿದ್ದಾರೆ. ಆದರೆ, ಇಷ್ಟು ಬೇಗ ಭಿನ್ನಮತ ಶಮನವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಇನ್ನೂ ಕಾಂಗ್ರೆಸ್ ಎರಡನೇ ಹಂತದ ನಾಯಕರನ್ನು ತಯಾರು ಮಾಡುತ್ತಿದೆ. ಸ್ವತ ರಾಹುಲ್ ಗಾಂಧಿ ಅವರು ನೇತೃತ್ವ ವಹಿಸಿದರೆ, ಜ್ಯೋತಿರಾಧಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್, ಸಚಿನ್ ಪೈಲೆಟ್, ಸಂದೀಪ್ ದೀಕ್ಷಿತ, ಕೃಷ್ಣ ಭೈರೇಗೌಡ ಅವರಂತಹ ನಾಯಕರು ನಿಧಾನವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ಸದ್ಯ ನಾಲ್ಕೈದು ನಾಯಕರನ್ನು ಬಿಟ್ಟರೆ ಎರಡನೇ ಹಂತದ ನಾಯಕರು ಕಾಣುತ್ತಿಲ್ಲ. ಲಾಲ್ ಕೃಷ್ಣ ಅಡ್ವಾಣಿ ನಂತರ ಸಮರ್ಥವಾಗಿ ಪಕ್ಷ ನಡೆಸುವ ನಾಯಕರು ಈಗ ಬಿಜೆಪಿ ಇಲ್ಲ ಎನ್ನಬಹುದು. ಹಾಗಾದರೆ, 120 ವರ್ಷ ಇತಿಹಾಸ ಇರುವ ನೂರಾರು ಮುಖಂಡರನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಎದಿರೇಟು ತಿರುಗೇಟು ನೀಡುವವರು ಯಾರು ? ಬಿಜೆಪಿ ಹಿಂದುತ್ವವನ್ನು ಕೈಬಿಡಬೇಕು. ಎರಡನೇ ಹಂತದ ಯುವನಾಯಕರನ್ನು ಬೆಳೆಸುವ ಕೆಲಸ ಆಗಬೇಕು. ಅಲ್ಪಸಂಖ್ಯಾತ ನಾಯಕನನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿಸಿದರೆ, ಕಾಂಗ್ರೆಸ್ ಪಕ್ಷಕ್ಕೆ ತುಸು ಏಟು ನೀಡಬಹುದು. ಇಲ್ಲದಿದ್ದರೆ............... ?
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications