9 ಸರ್ಕಾರಿ ಆಸ್ಪತ್ರೆಗಳನ್ನು ಮುಚ್ಚಲು ಆದೇಶ
ಬೆಂಗಳೂರು,ಜೂ. 19: ಒಂಬತ್ತು ಪ್ರಮುಖ ಸರ್ಕಾರಿ ಆಸ್ಪತ್ರೆಗಳನ್ನು ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್ ಪಿ ಸಿ ಬಿ ) ಆದೇಶ ನೀಡಿದೆ. ಮಾಲಿನ್ಯ ಕಾಯ್ದೆ ಉಲ್ಲಂಘನೆ ಹಾಗೂ ಸಂಸ್ಕರಣಾ ಘಟಕ ಸ್ಥಾಪನೆ ಮಾಡುವಲ್ಲಿ ಸದರಿ ಆಸ್ಪತ್ರೆಗಳು ವಿಫಲವಾಗಿದೆ. ಜುಲೈ 1 ರಿಂದ ಆದೇಶ ಜಾರಿಗೆ ಬರಲಿದ್ದು, ತಕ್ಷಣದಿಂದ ರೋಗಿಗಳನ್ನು ದಾಖಲಿಸಿಕೊಳ್ಳದಂತೆ ಸೂಚನೆ ನೀಡಲಾಗಿದೆ.
ವಿಕ್ಟೋರಿಯಾ, ವಾಣಿ ವಿಲಾಸ್, ಕಿದ್ವಾಯಿ ಸ್ಮಾರಕ ಗ್ರಂಥಿ ಅಸ್ಪತ್ರೆ, ಮಿಂಟೋ, ಬೌರಿಂಗ್ ಮತ್ತು ಲೇಡಿ ಕರ್ಜನ್, ರಾಜೀವ್ ಗಾಂಧಿ ಇನ್ಸ್ ಸ್ಟಿ ಟ್ಯೂಟ್ , ಸರ್ ಇಸ್ಮಾಯಿಲ್ ಸೇಠ್, ಸಾರ್ವಜನಿಕ ಆಸ್ಪತ್ರೆ, ಜಯನಗರ ಹಾಗೂ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಗೆ ಆದೇಶ ನೀಡಲಾಗಿದೆ. ಕೆಎಸ್ ಪಿ ಸಿ ಬಿ ನೀಡಿರುವ ಆದೇಶದಲ್ಲಿ 6 ಖಾಸಗಿ ಆಸ್ಪತ್ರೆಗಳು ಸೇರಿವೆ. ಹೆಚ್ ಎ ಎಲ್ ಆಸ್ಪತ್ರೆ, ಚಿನ್ಮಯ ಮಿಷನ್ ಆಸ್ಪತ್ರೆ, ಸೈಂಟ್ ಮಾರ್ಥಾಸ್ ಆಸ್ಪತ್ರೆ, ಅಂಬೇಡ್ಕರ್ ಆಸ್ಪತ್ರೆ, ಕಿಮ್ಸ್ ಹಾಗೂ ಇಂದಿರಾನಗರದ ಇಎಸ್ ಐ ಆಸ್ಪತ್ರೆಗಳನ್ನು ಮುಚ್ಚುವಂತೆ ಲೋಕ್ ಅದಾಲತ್ ಗೆ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ.
ಆಸ್ಪತ್ರೆಗಳಿಗೆ ಮಾಲಿನ್ಯ ಸಂಸ್ಕರಣ ಘಟಕ ಸ್ಥಾಪನೆಗೆ ಹೆಚ್ಚಿನ ಕಾಲಾವಕಾಶ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಅದಾಲತ್ ತಿರಸ್ಕರಿಸಿದೆ. 1974 ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಲ ಕಾಯ್ದೆ 33 (ಎ) ಅಡಿಯಲ್ಲಿ ಆಸ್ಪತ್ರೆಗಳಿಗೆ ಬಂದ್ ಆದೇಶ ನೀಡಲಾಗಿದೆ.ಆದೇಶದ ಪ್ರತಿ ತಲುಪಿದ 15 ದಿನದೊಳಗೆ ಬದಲೀ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಹಾಗೂ ರೋಗಿಗಳನ್ನುಸ್ಥಳಾಂತರಿಸಬೇಕು ಎಂದು ಹೇಳಲಾಗಿದೆ. ಅಲ್ಲಿಗೂ ಬಗ್ಗದಿದ್ದಲ್ಲಿ ವಿದ್ಯುತ್ ಹಾಗೂ ನೀರು ಸರಬರಾಜನ್ನು ನಿಲ್ಲಿಸುವಂತೆ ಬೆಸ್ಕಾಂ ಮತ್ತು ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿಗೆ ಸೂಚಿಸಲಾಗಿದೆ.ಸರ್ಕಾರ ಈ ಬಗ್ಗೆ ಕಠಿಣವಾಗಿ ವರ್ತಿಸಬೇಕಿದೆ ಎಂದು ಲೋಕ್ ಅದಾಲತ್ ನ ಅಧ್ಯಕ್ಷ ಕೆ ಎಲ್ ಮಂಜುನಾಥ್ ಹಾಗೂ ಹಿರಿಯ ಸದಸ್ಯ, ಪರಿಸರವಾಗಿ ಯಲ್ಲಪ್ಪ ರೆಡ್ಡಿ ಗುಡುಗಿದ್ದಾರೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications