ಕೃಷ್ಣ ಕಚೇರಿಯ ಬೀಗ ಒಡೆದ ಡಿ ಬಿ ಚಂದ್ರೇಗೌಡ
ಬೆಂಗಳೂರು, ಜೂ. 18 : ಇತ್ತೀಚೆಗಷ್ಟೇ ಪೂಜೆ ನೆರವೇರಿಸಿ ಸಂದರ್ಶಕರ ಅನುಕೂಲಕ್ಕಾಗಿ ಪೀಠೋಪಕರಣಗಳನ್ನು ಹಾಕಿಸಿ ಕಚೇರಿ ಪ್ರವೇಶಿಸಿದ್ದ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರ ಸಂಸದರ ಕಛೇರಿಯನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಡಿ ಬಿ ಚಂದ್ರೇಗೌಡ ಬೀಗ ಒಡೆದು ಅಕ್ರಮವಾಗಿ ಸ್ವಾಧೀನ ಪಡೆಸಿಕೊಂಡ ಘಟನೆ ಬುಧವಾರ ನಡೆದಿದೆ.
ನಗರದ ಹೃದಯ ಭಾಗದಲ್ಲಿರುವ ಆಲಿ ಆಸ್ಗರ್ ರಸ್ತೆಯಲ್ಲಿರುವ ಸಂಸದರ ಕಛೇರಿಯನ್ನು ಎಸ್ ಎಂ ಕೃಷ್ಣ ಅವರಿಗೆ ಮಂಜೂರು ಮಾಡಲಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್ ಟಿ ಸಾಂಗ್ಲಿಯಾನ ಪರಾಭವಗೊಂಡ ನಂತರ ಕೃಷ್ಣ ಅವರಿಗೆ ಬೆಂಗಳೂರು ಜಿಲ್ಲಾಧಿಕಾರಿ ಈ ಕಚೇರಿಯನ್ನು ಮಂಜೂರು ಮಾಡಿ ಇದಕ್ಕೆ ಸಂಬಂಧಪಟ್ಟ ಕಾಗದಪತ್ರವನ್ನು ಕೃಷ್ಣ ಅವರಿಗೆ ನೀಡಿದ್ದರು.
ಕೃಷ್ಣ ಅವರ ಆಪ್ತ ಕಾರ್ಯದರ್ಶಿ ಪೊಲೀಸರಿಗೆ ಅಕ್ರಮ ಪ್ರವೇಶದ ಬಗ್ಗೆ ದೂರು ನೀಡಿದ್ದಾರೆ. ಈ ಕಚೇರಿಯಲ್ಲಿ ಕೃಷ್ಣ ಅವರು ಸಾರ್ವಜನಿಕರ ಕುಂದುಕೊರತೆ ಆಲಿಸುತ್ತಿದ್ದರು. ಸಿಬ್ಬಂದಿಗಳ ಅಹವಾಲನ್ನು ಸ್ವೀಕರಿಸುತ್ತಿದ್ದರು. ಚಂದ್ರೇಗೌಡ ಅವರು ಇದ್ದಕ್ಕಿದ್ದಂತೆ ಕಚೇರಿ ಪ್ರವೇಶಿಸಿ ಬೀಗ ಒಡೆದು ಒಳಗೆ ಪ್ರವೇಶಿಸಿದ್ದಾರೆ. ಇದರಿಂದ ನಮಗೆ ಒಳಗೆ ಪ್ರವೇಶಿಸಲು ಆಗುತ್ತಿಲ್ಲ. ಕೃಷ್ಣ ಅವರಿಗೆ ಸಂಬಂದಪಟ್ಟ ಹಲವಾರು ದಾಖಲೆ ಪತ್ರಗಳಿವೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಕೃಷ್ಣ ಈಗ ಸಚಿವರಾಗಿರುವುದರಿಂದ ಅವರಿಗೆ ಕಚೇರಿ ಅನಗತ್ಯ. ಈ ಕಚೇರಿಯನ್ನು ಮುಖ್ಯಮಂತ್ರಿಯವರಿಂದ ತಾವು ಮಂಜೂರು ಮಾಡಿಕೊಳ್ಳುವುದಾಗಿ ಚಂದ್ರೇಗೌಡ ಸಮಜಾಯಿಷಿ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)