ಗಣಿ ಧಣಿಗಳು ಸುಮ್ಮನಾಗಿರುವುದು ಏತಕ್ಕೆ?
ಬೆಂಗಳೂರು, ಜೂ. 17 : ಇತ್ತೀಚೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ತೊಡತಟ್ಟಿ ರಣಕಹಳೆ ಉದಿದ್ದ ಬಳ್ಳಾರಿ ಗಣಿಧಣಿಗಳು ಏಕದಂ ತಣ್ಣಗಾಗಿದ್ದು ಏತಕ್ಕೆ ? ಇಂತಹ ಅನೇಕ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ, ಮೂಲಗಳ ಪ್ರಕಾರ, ರೆಡ್ಡಿಗಳನ್ನು ಹೊರಹಾಕಿ ಜೆಡಿಎಸ್ ಜೊತೆಗೆ ಕೈಜೋಡಿಸಬೇಕು ಎನ್ನುವ ಚಿಂತನೆ ಮುಖ್ಯಮಂತ್ರಿಗಳಲ್ಲಿ ಮೂಡಿದ್ದರಿಂದ ಅನ್ನುತ್ತೆ ಅವರ ಸಿಎಂ ಆಪ್ತವಲಯ. ಏನೇ ಇರಲಿ ದಾವಣಗೆರೆಯಲ್ಲಿ ನಡೆದ ವಿಕಾಸ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶಿಸಿದ್ದು, ಎಲ್ಲ ಪ್ರಶ್ನೆಗಳು ಹಾಗೆ ಉಳಿದಿವೆ.
ಸದ್ಯಕ್ಕೆ ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಸಿಗುವುದು ಕಷ್ಟ. ಆದರೆ ಮುಖ್ಯಮಂತ್ರಿಗಳ ಆಪ್ತರು ರೆಡ್ಡಿ ಪಾಳಯಕ್ಕೆ ತಲುಪಿಸಿದ ಗಾಳಿಸುದ್ದಿಯೇ ಗಣಿಧಣಿಗಳು ಸುಮ್ಮನಿರುವುದಕ್ಕೆ ಕಾರಣ ಎನ್ನುತ್ತದೆ ಸಿಎಂ ಆಪ್ತವಲಯ. ಪಕ್ಷದ ರಾಜ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅರುಣ್ ಜೇಟ್ಲೆ ಬೆಂಗಳೂರಿಗೆ ಬಂದರೂ ಅವರನ್ನು ಭೇಟಿ ಮಾಡುವ ಸೌಜನ್ಯತೆಗೂ ಬಳ್ಳಾರಿ ತ್ರಿವಳಿ ಸಚಿವರುಗಳು ಹೋಗಿರಲಿಲ್ಲ. ತಮ್ಮ ಬೇಡಿಕೆ ಇಡೇರಬೇಕು ಇಲ್ಲವಾದರೆ ಸುಷ್ಮಾ ಸ್ವರಾಜ್ ಹೇಳಿದರೆ ಮಾತ್ರ ಬೇಡಿಕೆಗಳಿಂದ ಹಿಂದಕ್ಕೆ ಸರಿಯುತ್ತೇವೆ ಎಂದು ಪಟ್ಟು ಹಿಡಿದಿದ್ದ ಇವರುಗಳ ಬೇಡಿಕೆಗಳನ್ನು ಮುಖ್ಯಮಂತ್ರಿ ಸಾರಾಸಗಾಟವಾಗಿ ತಳ್ಳಿ ಹಾಕಿದ್ದರು.
ಇವರುಗಳಿಗೆ ತಕ್ಕ ಪಾಠ ಕಲಿಸಬೇಕೆಂದು ನಿರ್ಧರಿಸಿದ ಮುಖ್ಯಮಂತ್ರಿಗಳು ಒಂದು ಪಕ್ಷ ರೆಡ್ಡಿ ಪಾಳಯದವರು ಪಕ್ಷದಿಂದ ಹೊರಕ್ಕೆ ಬಂದರೆ 'ಬಿಜೆಪಿ ಯಾವುದೇ ಪಕ್ಷದ ಜೊತೆ ಮೈತ್ರಿಗೆ ಸಿದ್ದ. ಜನತಾದಳದ ಜೊತೆ ತೆರೆಮೆರೆಯಲ್ಲಿ ಮೈತ್ರಿ ಸರಕಾರ ರಚಿಸಲು ದೇವೇಗೌಡರ ಜೊತೆ ಮಾತುಕತೆ ನಡೆಯುತ್ತಿದೆ ಎನ್ನುವ' ಗಾಳಿಸುದ್ದಿ ( ನಿಜ ಇದ್ದರೂ ಇರಬಹುದು) ಹಬ್ಬಿಸಿದ್ದು ಗಣಿಧಣಿಗಳು ಸುಮ್ಮನಿರುವುದಕ್ಕೆ ಪ್ರಮುಖ ಕಾರಣ ಎನ್ನುತ್ತದೆ ಸಿಎಂ ಆಪ್ತವಲಯ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications