ದಾವಣಗೆರೆಯಲ್ಲಿ ಸಿಎಂಗೆ ಘೇರಾವ್ : ಶೆಟ್ಟರ್ ಗರಂ
ದಾವಣಗೆರೆ, ಹುಬ್ಬಳ್ಳಿ, ಜೂ. 16 : ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿಕಾಸ ಸಂಕಲ್ಪ ಜಾತ್ರೆಯನ್ನು ಸರಕಾರ ಕೈಗೊಂಡಿದೆ. ಮಂಗಳವಾರ ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ಘೇರಾವ್, ಧಿಕ್ಕಾರ ಘೋಷಣೆಗಳನ್ನು ಎದುರಿಸಬೇಕಾಯಿತು. ಇದರಿಂದ ಸಿಎಂ ಕೆಲ ಕಾಲ ಕಸಿವಿಸಿಗೆ ಒಳಗಾಗಬೇಕಾಯಿತು.
ಮಂಗಳವಾರ ಬೆಳಗ್ಗೆ ವಿಕಾಸ ಸಂಕಲ್ಪ ಕಾರ್ಯಕ್ರಮ ಭಾಗವಹಿಸಲು ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳಿಗೆ ಸರಕಾರಿ ವಸತಿ ಗೃಹದಲ್ಲಿ ವಿಶ್ರಾಂತಿಗೆಂದು ತಂಗಿದ್ದರು. ಆಗ, ರೈತ ಸಂಘಟನೆಯ ಮುಖಂಡರು ಹಾಗೂ ನೂರಾರು ರೈತರು ಜಿಲ್ಲೆಯಲ್ಲಿ ಕಾರ್ಯಸ್ಥಗಿತಗೊಂಡಿರುವ ಭದ್ರಾ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕು ಎಂಬ ಬೇಡಿಕೆಯನ್ನು ಸಿಎಂ ಮುಂದಿಟ್ಟರು. ಈ ಸಂದರ್ಭದಲ್ಲಿ ರೈತರು ಸಿಎಂ ವಿರುದ್ಧ ಪ್ರತಿಭಟನೆ ನಡೆಸಿದರು. ನಂತರ ರೈತರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಕ್ಕರೆ ಕಾರ್ಖಾನೆಗಳನ್ನು ಸರಕಾರ ಆರಂಭಿಸಬೇಕು ಎನ್ನುವುದು ಆಗದ ಮಾತು. ಆದರೆ, ಖಾಸಗಿ ಕಂಪನಿಗಳು ಯಾರಾದರೂ ಮುಂದೆ ಬಂದಲ್ಲಿ ಅವರಿಗೆ ಸಂಪೂರ್ಣ ಸಹಾಯ ನೀಡಲಾಗುವುದು. ಶೀಘ್ರದಲ್ಲಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.
ನಂತರ ಕಾರ್ಯಕ್ರಮ ಮುಗಿದ ನಂತರ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಸಿಎಂ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಇನ್ನೊಂದಡೆ ಸಾದರ ಲಿಂಗಾಯತ ಜನರು ಸಿಎಂಗೆ ಅವರಿಗೆ ಘೇರಾವ್ ಹಾಕಿದರು. ಇತ್ತೀಚೆಗೆ ಸಾದರ ಲಿಂಗಾಯಿತ ಜನಾಂಗವನ್ನು ಪ್ರವರ್ಗ 'ಬಿ' ಗೆ ಸೇರಿಸಿ ಸರಕಾರ ಸುತ್ತೋಲೆ ಹೊರಡಿಸಿತ್ತು. ಅದನ್ನು ಸರಕಾರದ ಗಮನಕ್ಕೆ ತಾರದೇ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಯೊಬ್ಬರು ಹೊರಡಿಸಿದ್ದ ಸುತ್ತೋಲೆಯನ್ನು ಸರಕಾರ ವಾಪಸ್ಸು ಪಡೆದುಕೊಂಡಿತ್ತು. ಸರಕಾರದ ಕ್ರಮವನ್ನು ಖಂಡಿಸಿ ಸಾದು ಲಿಂಗಾಯಿತ ಸಮುದಾಯದವರು ಯಡಿಯೂರಪ್ಪ ಅವರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.
ಕೃಷ್ಣಯ್ಯ ಶೆಟ್ಟಿ ರಾಜೀನಾಮೆ?;ಶೆಟ್ಟರ್ ಗರಂ
ಸದ್ಯ ತಿರುಪತಿ ಪ್ರವಾಸದಲ್ಲಿರುವ ವಸತಿ ಸಚಿವ ಕೃಷ್ಣಯ್ಯ ಶೆಟ್ಟಿ ಆವರು ಅಲ್ಲಿಂದ ಬೆಂಗಳೂರಿಗೆ ಬಂದ ನಂತರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ. ಅರುಣ್ ಜೈಟ್ಲಿ ಬಂದು ಹೋದ ನಂತರ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಶಮನವಾಯಿತು ಎನ್ನುವಷ್ಟರಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿರುವ ವಿಕಾಸ ಸಂಕಲ್ಪ ಸಮಾವೇಶಕ್ಕೆ ಸ್ಪೀಕರ್ ಜಗದೀಶ್ ಶೆಟ್ಟರ್ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನ ಬಹಿರಂಗಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ಜಗದೀಶ್ ಶೆಟ್ಟರ್, ಸ್ಪೀಕರ್ ಸ್ಥಾನಕ್ಕೆ ನೀಡಬೇಕಾದ ಗೌರವವನ್ನು ಸರಕಾರ ನೀಡಿಲ್ಲ. ಸಮಾವೇಶಕ್ಕೆ ಆಗಮಿಸುವಂತೆ ಜಿಲ್ಲಾಧಿಕಾರಿಗಳು ನನಗೆ ತಿಳಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶೆಟ್ಟರ್ ಮುನಿಸು ಶಮನಗೊಳಿಸಲು ಅನಂತಕುಮಾರ್ ಹಾಗೂ ಸಚಿವ ಶ್ರೀರಾಮುಲು ಧಾವಿಸಿದ್ದು, ಸಮಾವೇಶಕ್ಕೆ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಶೆಟ್ಟರ್ ಕೂಡಾ ಸಚಿವ ಸ್ಥಾನದ ಅಕಾಂಕ್ಷಿಯಾಗಿದ್ದಾರೆ. ಸೋಮಣ್ಣಗೆ ಮಾತ್ರ ಸಚಿವ ಸ್ಥಾನ ನೀಡಲು ಸಿಎಂ ಮನಸ್ಸು ಮಾಡಿದ್ದು, ಶೆಟ್ಟರ್ ಕೋಪಕ್ಕೆ ಕಾರಣ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications