ನಂಜುಂಡಪ್ಪ ಸಮಿತಿಗೆ 2578 ಕೋಟಿ ರೂ. ಬಿಡುಗಡೆ
ಗುಲ್ಬರ್ಗಾ,ಜೂ. 16 : ಕರ್ನಾಟಕ ರಾಜ್ಯದ 114 ಹಿಂದುಳಿದ ತಾಲೂಕಗಳಲ್ಲಿ ವಿವಿಧ ಅಭವೃದ್ದಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಡಾ ನಂಜುಂಡಪ್ಪ ವರದಿ ಸಮಿತಿಯ ಮೂಲಕ ಪ್ರಸಕ್ತ ವರ್ಷ ರಾಜ್ಯ ಸರ್ಕಾರ 19 ಇಲಾಖೆಗಳಿಗೆ 2578 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಡಾ ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ ಶಶಿಲ ಜಿ.ನಮೋಶಿ ಅವರು ಹೇಳಿದರು.
ಅವರು ಸೋಮವಾರ ಗುಲಬರ್ಗಾದಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯ ಸಹ ಭಾಗಿತ್ವದ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಘಟಕದಿಂದ "ಹೈದ್ರಾಬಾದ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ಆಚಾರ, ವಿಚಾರ, ಪ್ರಚಾರ " ಕುರಿತು ಆಯೋಜಿಸಿದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ 19 ಇಲಾಖೆಗಳಿಗೆ ವಾರ್ಷಿಕವಾಗಿ ನಿಗದಿ ಪಡಿಸಿದ ಅನುದಾನ ಹೊರಪಡಿಸಿ ಈ ಹಣ ನೀಡಲಾಗಿದೆ ಎಂದರು.
ಹೈದ್ರಾಬಾದ ಕರ್ನಾಟಕ ಪ್ರದೇಶವು ಹಲವಾರು ಪ್ರವಾಸಿ ತಾಣಗಳನ್ನು ಹೊಂದಿದ್ದು, ಈ ತಾಣಗಳಲ್ಲಿ ಸಮರ್ಪಕ ರಸ್ತೆ,ಕುಡಿಯುವ ನೀರು ,ವಸತಿ ಮುಂತಾದ ಮೂಲ ಸೌಕರ್ಯ ಅಭಿವೃದ್ದಿ ಮತ್ತು ಆಕರ್ಷಕವಾಗಿ ಕಾಣುವ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಕೈಕೊಳ್ಳಲು ಬೇಡಿಕೆ ಆಧಾರಿತ ಕ್ರಿಯಾ ಯೊಜನೆ ರೂಪಿಸಿ ಡಾ ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಗೆ ಸಲ್ಲಿಸಿದರೆ ಈ ಭಾಗದ ಪ್ರವಾಸೋದ್ಯಮ ಅಭಿವೃದ್ದಿಗೂ ಹೆಚ್ಚಿನ ಹಣ ಒದಗಿಸಲು ಪ್ರಯತ್ನಿಸಲಾಗುವುದು. ಈ ನಿಟ್ಟಿನಲ್ಲಿ ಪ್ರಸ್ತುತ ಕಾರ್ಯಗಾರ ಚಿಂತನ- ಮಂಥನ ನಡೆಸಿ ಯೋಜನೆ ರೂಪಿಸಬೇಕೆಂದು ಸಲಹೆ ನೀಡಿದರು.
ಜೈಪೂರಿನ ಭಾರತೀಯ ಅಂತರ ರಾಷ್ಟ್ರೀಯ ಸಮಾಜ ವಿಜ್ಞಾನ ಸಂಸ್ಥೆ ಮತ್ತು ಪ್ರವಾಸೋದ್ಯಮ ನಿರ್ದೇಶಕ ಪ್ರೊ ಈಶ್ವರ ಮೋದಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಪ್ರವಾಸೋದ್ಯಮವು ಪ್ರಪಂಚದ ದೊಡ್ಡ ಉದ್ಯಮವಾಗಿದ್ದು, ಈ ಉದ್ಯಮದಲ್ಲಿ ಅವಕಾಶಗಳು ಹೆಚ್ಚಾಗಬೇಕು . ಭಾರತದಲ್ಲಿ ಪ್ರವಾಸೋದ್ಯಮವು ಹೆಚ್ಚು ಮಹತ್ವ ಪಡೆದಿದೆ ಎಂದರು.
(ದಟ್ಸ್ ಕನ್ನಡ ವಾರ್ತೆ)