1 ಲಕ್ಷ ಪರ್ಯಾಯ ಇಂಧನದ ಮರ ಬೆಳೆಸುವ ಗುರಿ
ಗುಲ್ಬರ್ಗಾ, ಜೂ. 16 : ಕರ್ನಾಟಕ ರಾಜ್ಯದಲ್ಲಿ ಬರುವ ನಾಲ್ಕು ವರ್ಷಗಳಲ್ಲಿ ಪರ್ಯಾಯ ಇಂಧನ ಮೂಲದ ಒಂದು ಲಕ್ಷ ಗಿಡಮರಗಳನ್ನು ಬೆಳೆಸುವ ಗುರಿ ಹೊಂದಿದ್ದು, ಪ್ರಸಕ್ತ ವರ್ಷದ ಮಳೆಗಾಲದಲ್ಲಿ 6000 ಗಿಡಗಳನ್ನು ಬೆಳೆಯಲು ಯೋಜಿಸಲಾಗಿದೆ ಎಂದು ಕರ್ನಾಟಕ ಜೈವಿಕ ಇಂಧನ ಕಾರ್ಯಪಡೆಯ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಅವರು ಹೇಳಿದರು.
ಅವರು ಸೋಮವಾರ ಗುಲ್ಬರ್ಗಾದಲ್ಲಿ, ಗುಲಬರ್ಗಾ ಅರಣ್ಯ ವೃತ್ತ ಹಾಗೂ ಜೈವಿಕ ಇಂಧನ ಕಾರ್ಯಪಡೆಯ ಸಹಯೋಗದಲ್ಲಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು ,ಕಾರ್ಯದರ್ಶಿಗಳು ಹಾಗೂ ಅರಣ್ಯಾಧಿಕಾರಿಗಳಿಗಾಗಿ ಆಯೋಜಿಸಿದ ಒಂದು ದಿನದ ಜೈವಿಕ ಇಂಧನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಿದ ಜೈವಿಕ ಇಂಧನ ಕಾರ್ಯಕ್ರಮ ದೇಶದ ಇತರ ರಾಜ್ಯಗಳಿಗಿಂತ ಭಿನ್ನವಾಗಿದ್ದು, ಇಡೀ ದೇಶಕ್ಕೆ ಮಾದರಿಯಾಗಿದೆ. ರಾಜ್ಯದಲ್ಲಿ ಇಂಧನ ಸಂಪನ್ಮೂಲ ಜಾತಿಯ ಹೊಂಗೆ ಮತ್ತಿತರ ಗಿಡಮರಗಳನ್ನು ಬೆಳೆಸುತ್ತಿರುವುದು ಹಾಗೂ ರೈತರನ್ನು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ವಿಶೇಷವಾಗಿದೆ. ಈ ಕಾರ್ಯಕ್ರಮದ ಅನುಷ್ಠಾಕ್ಕಾಗಿ ರಾಜ್ಯದಲ್ಲಿ 50 ಲಕ್ಷ ಜೈವಿಕ ಇಂಧನ ಶಕ್ತಿಯ ಸಸಿಗಳನ್ನು ಸಿದ್ದಪಡಿಸಲಾಗಿದೆ.
ಕಾರ್ಯಕ್ರಮದ ಮೂಲಕ ರೈತರಿಗೆ ಶೇ. 75 ರಷ್ಟು ಹಾಗೂ ಸರ್ಕಾರಕ್ಕೆ ಶೇ.25 ರಷ್ಟು ಲಾಭಾಂಶ ಸಿಗಲಿದೆ. ಇಡೀ ಪ್ರಪಂಚದ ಮುಂದೆ ಸುಸ್ಥಿರ ಕೃಷಿಯತ್ತ ಗಮನ ಹರಿಸುವ ದೊಡ್ಡ ಸವಾಲು ಇದ್ದು,ಕೃಷಿ ಯೋಗ್ಯವಲ್ಲದ ಭೂಮಿಯಲ್ಲಿ ಜೈವಿಕ ಇಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮವು ಕೃಷಿ ಚಟುವಟಿಕೆಗೆ ಪೂರಕವಾಗಿದೆ. ದೇಶದಲ್ಲಿ ನಡೆದ ಹಸಿರು ಮತ್ತು ಕ್ಷೀರಕ್ರಾಂತಿಗಳ ಮಾದರಿಯಲ್ಲಿ ಜೈವಿಕ ಇಂಧನದ ಕ್ರಾಂತಿ ನಡೆಯಬೇಕಾಗಿದೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)