ಪ್ರವರ್ಗ 2ಎಗೆ ಸಾದರ ಲಿಂಗಾಯಿತ : ಸುತ್ತೋಲೆ ವಾಪಸ್ಸು
ಬೆಂಗಳೂರು, ಜೂ. 11 : ಪ್ರವರ್ಗ 3ಬಿಯಲ್ಲಿದ್ದ ಸಾದರ ಲಿಂಗಾಯತ ಸಮುದಾಯವನ್ನು ಪ್ರವರ್ಗ 2ಬಿಯಲ್ಲಿ ಸೇರಿಸಿ ಸಮಾಜ ಕಲ್ಯಾಣ ಇಲಾಖೆ ಹೊರಡಿಸಿದ್ದ ಆದೇಶವನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಸರಕಾರ ವಾಪಸ್ಸು ಪಡೆದಿದೆ. ಹಿಂದುಳಿದ ಆಯೋಗದಿಂದ ತೀವ್ರ ವಿರೋಧಿ ಬಂದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ.
ಇತ್ತೀಚೆಗೆ ಸರಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಧ್ವಜ ಹಾರಿಸಬಾರದು ಎಂಬ ಸುತ್ತೋಲೆ ಹೊರಡಿಸಿ ವಿವಾದಕ್ಕೆ ನಾಂದಿ ಹಾಡಿದ್ದ ರಾಜ್ಯ ಸರಕಾರ, ಇದರ ಬೆನ್ನಲ್ಲೇ ಮತ್ತೊಂದು ವಿವಾದಿತ ಸುತ್ತೋಲೆ ಹೊರಡಿಸಿತ್ತು. ಪ್ರವರ್ಗ 3ಬಿಯಲ್ಲಿದ್ದ ಸಾದರ ಲಿಂಗಾಯತ ಸಮುದಾಯವನ್ನು ಪ್ರವರ್ಗ 2ಬಿಯಲ್ಲಿ ಸೇರಿಸಿ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿರುವುದು ವಿವಾದಕ್ಕೆ ನಾಂದಿ ಹಾಡಿತ್ತು.
ಹಿಂದುಳಿದ ಆಯೋಗ ಸರಕಾರದ ಆದೇಶವನ್ನು ತೀವ್ರವಾಗಿ ವಿರೋಧಿಸಿತ್ತು. ಅಲ್ಲದೇ ಜೂನ್ 16 ರಂದು ಹಿಂದುಳಿದ ಆಯೋಗದ ಸಭೆ ಕರೆದಿತ್ತು. ಅಂದು ಸರಕಾರದ ಸುತ್ತೋಲೆಯ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದುಳಿದ ಆಯೋಗದ ಅಧ್ಯಕ್ಷ ಸಿ ಎಸ್ ದ್ವಾರಕಾನಾಥ್ ಸ್ಪಷ್ಟಪಡಿಸಿದ್ದರು.
ಸರಕಾರ ಯಾವುದೇ ಸುತ್ತೋಲೆ ಹೊರಡಿಸಬೇಕೆಂದರೆ ಮೊದಲು ಅದರ ಸಾಧಕ ಬಾಧಕಗಳ ಬಗ್ಗೆ ಸಂಪೂರ್ಣ ಅವಲೋಕನ ಮಾಡಬೇಕಾಗುತ್ತದೆ. ಆದರೆ, ಸರಕಾರ ಇದಾವುದನ್ನು ಮಾಡದೇ ಏಕಾಏಕಿಯಾಗಿ ಸುತ್ತೋಲೆಯನ್ನು ಹೊರಡಿಸಿದೆ. ಕುಲಕಸಬುಗಳನ್ನು ನಂಬಿ ಜೀವನ ನಡೆಸುತ್ತಿರುವ ಹಾಗೂ ಅತ್ಯಂತ ನಿರ್ಗತಿಕ 102 ಜಾತಿಗಳು ಪ್ರವರ್ಗ 2ಬಿಯಲ್ಲಿವೆ. ಇದೀಗ ಸಾದರ ಲಿಂಗಾಯತದಂತಹ ಮುಂದುವರೆದ ಜನಾಂಗವನ್ನು ಪ್ರವರ್ಗಕ್ಕೆ ಸೇರಿಸಿ 102 ಜಾತಿಗಳಿಗೆ ಅನ್ಯಾಯ ಮಾಡಲು ಸರಕಾರ ಹೊರಟಿದೆ. ಇದು ಅತ್ಯಂತ ಖಂಡನೀಯ ಕೆಲಸವಾಗಿದೆ ಎಂಜು ದ್ವಾರಕಾನಾಥ್ ಆಕ್ರೋಶ ವ್ಯಕ್ತಪಡಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications