ಡೆಪ್ಯೂಟಿ ಸಿಎಂ ಹುದ್ದೆ ಕೇಳಿಲ್ಲ, ಕರುಣಾಕರರೆಡ್ಡಿ
ನವದೆಹಲಿ, ಮೇ. 4 : ಬಳ್ಳಾರಿಯ ರೆಡ್ಡಿ ಸಹೋದರರು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮುನಿಸಿಕೊಂಡಿದ್ದಾರೆ ಎಂಬ ಆರೋಪವನ್ನು ಕಂದಾಯ ಸಚಿವ ಕರುಣಾಕರರೆಡ್ಡಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಡಿಸಿಎಂ ಹುದ್ದೆ ಸೇರಿದಂತೆ ನಾವು ಯಾವುದೇ ಹುದ್ದೆ ಕೇಳಿಲ್ಲ ಎಂದು ಅವರು ಹೇಳಿದರು.
ನವದೆಹಲಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆದಿದ್ದ ರಾಜ್ಯದ ಸಂಸದರ ಸಭೆ ನಂತರ ಕರುಣಾಕರರೆಡ್ಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ನಾನಾಗಲೀ, ಸಹೋದರ ಜನಾರ್ದರೆಡ್ಡಿಯಾಗಲೀ ಯಾವ ಬೇಡಿಕೆಯನ್ನೂ ಸಿಎಂ ಬಳಿ ಇಟ್ಟಿಲ್ಲ. ಸಿಎಂ ಇಲ್ಲೇ ಇದ್ದಾರೆ ಬೇಕಿದ್ದರೆ ಕೇಳಿ ಎಂದು ಸುದ್ದಿಗಾರರಿಗೆ ಹೇಳಿದರು. ಉಪಮುಖ್ಯಮಂತ್ರಿ ಸ್ಥಾನವನ್ನು ನಾವ್ಯಾಕೆ ಕೇಳಬೇಕು. ಇಷ್ಟಕ್ಕೂ ನಮಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವ ಇರಾದೆಯೇ ಇರಲಿಲ್ಲ. ಪಕ್ಷದ ಒತ್ತಾಯಕ್ಕೆ ಮಣಿದು ಸ್ಪರ್ಧಿಸಿ ಗೆದ್ದಿರುವೆ. ನಂತರ ಕಂದಾಯ ಸಚಿವ ಸ್ಥಾನವನ್ನು ನೀಡಿದರು. ಸಚಿವ ಸ್ಥಾನವನ್ನೂ ನಾನು ಕೇಳಿರಲಿಲ್ಲ. ಅವರು ವಹಿಸಿದ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸಿದ್ದೇನೆ. ಉಪಮುಖ್ಯಮಂತ್ರಿ ಸ್ಥಾನ ನಮಗೆ ಅವಶ್ಯಕತೆ ಇಲ್ಲ ಎಂದು ಕರುಣಾಕರರೆಡ್ಡಿ ಸ್ಪಷ್ಟಪಡಿಸಿದರು.
ಬಳ್ಳಾರಿಯಲ್ಲಿ ರೆಡ್ಡಿ ಸಹೋದರರು ಗುಪ್ತ ಸಭೆ ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ. ನಾವು ಸಭೆ ನಡೆಸುತ್ತಿಲ್ಲ. ಸರಕಾರದೊಂದಿಗೆ ಇದ್ದೇವೆ. ನಾನೀಗ ದೆಹಲಿಯಲ್ಲಿ ಇದ್ದೇನೆ. ಯಾವುದೋ ಸಮಾರಂಭಕ್ಕೆ ಮುಖ್ಯಮಂತ್ರಿಗಳು ಆಹ್ವಾನಿಸಿಲ್ಲ ಎಂಬ ಕಾರಣಕ್ಕೆ ಜನಾರ್ದನರೆಡ್ಡಿ, ಸೋಮಶೇಖರರೆಡ್ಡಿ ಅಸಮಾಧಾನಗೊಂಡಿದ್ದಾರೆ ಎಂದು ಕರರುಣಾಕರರೆಡ್ಡಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)