ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಫೋಟ

ಬಳ್ಳಾರಿ ರೆಡ್ಡಿ ಸಹೋದರರು ತಮ್ಮ ಅಸಮಾಧಾವನ್ನ್ನು ತೋಡಿಕೊಂಡಿದ್ದಾರೆ. ಬಿಜೆಪಿಯ ಯಾವುದೇ ಸಮಾರಂಭ ನಡೆಯಲಿ ನಮಗೆ ಎಸ್ ಎಂ ಎಸ್ ಮೂಲಕ ಸಂದೇಶ ಕಳುಹಿಸುತ್ತಿದ್ದರು. ಆದರೆ ವಿಕಾಸ ಸಂಕಲ್ಪ ಕಾರ್ಯಕ್ರಮಕ್ಕೆ ನಮಗೆ ಯಾವುದೇ ಸಂದೇಶ ಬರಲಿಲ್ಲ ಹಾಗಾಗಿ ನಾವು ವಿಕಾಸ ಸಂಕಲ್ಪ ಉತ್ಸವಕ್ಕೆ ಹೋಗಲಿಲ್ಲ ಎಂದು ರೆಡ್ಡಿ ಸಹೋದರರು ಸ್ಪಷ್ಟಪಡಿಸಿದರು.
ಯಡಿಯೂರಪ್ಪನವರು ಶಾಸಕರನ್ನು ಕಡೆಗಣಿಸುತ್ತಿದ್ದಾರೆ. ಕೆಲವೊಂದು ಸಚಿವರ ಹಿಡಿತದಲ್ಲಿ ಸರಕಾರ ನಡೆಯುತ್ತಿದೆ. ಸಿಎಂ ಕಾರ್ಯವೈಖರಿ ಬಗ್ಗೆ ನಮಗೆ ಅಸಮಾಧಾನವಿದೆ. ವರ್ಗಾವಣೆ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದು ಸರಿಯಿಲ್ಲ. ಈ ಕುರಿತು ನಮ್ಮ ನಿರ್ಧಾರವನ್ನು ಕೇಳಬೇಕಿತ್ತು. ಆದರೆ ಸಿಎಂ ಹಾಗೆ ಮಾಡಲಿಲ್ಲ ಎಂದು ಅವರು ತಿಳಿಸಿದರು. ಹಾಗೆಯೇ ಸರಕಾರದ ಪ್ರಮುಖ ನಿರ್ಧಾರಗಳಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪವು ಕೇಳಿಬಂತು.
ರಾಜ್ಯದ19 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಶ್ರೇಯಸ್ಸು ತಮಗೇ ಸಲ್ಲುತ್ತದೆ ಎಂಬಂತೆ ಮುಖ್ಯಮಂತ್ರಿಗಳು ವರ್ತಿಸುತ್ತಿದ್ದಾರೆ. ಪಕ್ಷದ ಶಾಸಕರು, ಸಚಿವರ ಪಾತ್ರವನ್ನು ಮುಖ್ಯಮಂತ್ರಿಗಳು ಮರೆತಿದ್ದಾರೆ. ಶಾಸಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದರು.
19 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಜಾತಿ, ಹಣ, ಹೆಂಡ ಕಾರಣ ಎಂದು ಬಹಿರಂಗವಾಗಿ ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಕತ್ತಿ ಝಳಪಿಸಿದ್ದಾರೆ. ಒಂದು ಕಡೆ ಈಶ್ವರಪ್ಪ ಹಾಗೂ ಮತ್ತೊಂದು ಕಡೆ ರೆಡ್ಡಿ ಸೋದರರು ಸಿಡಿದೆದ್ದಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications