ಕೋಪಗೊಂಡ ಎಚ್ಡಿಕೆ : ಕೈಯೊಂದಿಗೆ ಮೈತ್ರಿಯಿಲ್ಲ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕಾಂಗ್ರೆಸ್ ಜತೆಗೆ ಮುಂದಿನ ದಿನಗಳಲ್ಲಿ ಒಳಒಪ್ಪಂದ ಮಾಡಿಕೊಳ್ಳುವ ಮಾತೇ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಬಹಿರಂಗವಾಗಿಯೇ ಬೆಂಬಲ ನೀಡಿದ್ದೇವು ಎಂದರು. ಮುಂಬರುವ ಬಿಬಿಎಂಪಿ ಹಾಗೂ ಐದು ವಿಧಾನಸಭೆಗಳ ಮರುಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಇಲ್ಲ ಎಂಬುದನ್ನು ಈ ಮೂಲಕ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲು ಸೋನಿಯಾ ಗಾಂಧಿ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಹಾಗೂ ಮರುಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದಿರಲು ದೇವೇಗೌಡರು ಲೆಕ್ಕಾಚಾರ ಹಾಕಿರಬಹುದು. ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ಸಿನಿಂದ ಒತ್ತಡ ಬಂದರೆ, ಕುಮಾರಸ್ವಾಮಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಕೊಟ್ಟರೆ ಮಾತ್ರ ಮೈತ್ರಿಗೆ ಸಿದ್ದ ಎಂದು ಪಟ್ಟು ಹಿಡಿಯುವ ತಂತ್ರವೂ ಇದಾಗಿರಬಹುದು.
ಕೆಲವರು ನಮ್ಮ ಕುಟುಂಬ ಅಧಿಕಾರಕ್ಕಾಗಿ ಹಾತೊರೆಯುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ದೇವೇಗೌಡರು ಯಾವತ್ತೂ ಅಧಿಕಾರಕ್ಕಾಗಿ ಪ್ರಯತ್ನ ಮಾಡಲಿಲ್ಲ. ನಾನು ಕೇಂದ್ರದಲ್ಲಿ ಮಂತ್ರಿಯಾಗಲಿಲ್ಲ ಅಂದರೆ ವೈಯಕ್ತಿಕವಾಗಿ ನನಗೇನು ನಷ್ಟವಿಲ್ಲ. ಆದರೆ, ರಾಜ್ಯದ ಬದ್ಧತೆ ಇರುವ ಕುಟುಂಬವೊಂದಕ್ಕೆ ಅವಕಾಶ ತಪ್ಪಿಸಲು ಕೆಲವರು ಪ್ರಯತ್ನ ಮಾಡಿದ್ದರಿಂದ ರಾಜ್ಯದ ಅಭಿವೃದ್ಧಿ ಹಾಳು ಮಾಡಿ ಬೆಣೆ ಸಿಕ್ಕಿಸಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು. ಮೈಸೂರಿನ ಸಂಸದರು ನನ್ನ ಬಗ್ಗೆ ಆರೋಪ ಮಾಡಿದ್ದಾರೆ. ನಾನು ಮಂತ್ರಿ ಪದವಿಗೆ ಹಾತೊರೆಯುತ್ತಿದ್ದೇನೆ ಎಂದಿದ್ದಾರೆ. ಆದರೆ, ನಾನು ಮಂತ್ರಿ ಪಟ್ಟಕ್ಕೆ ಅಪೇಕ್ಷೆ ಪಟ್ಟವನಲ್ಲ ಎಂದು ಕುಮಾರಸ್ವಾಮಿ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)