ಬೆಂಗಳೂರು ಅಭಿವೃದ್ಧಿಗೆ 3400 ಕೋ ರು ಯೋಜನೆ
ಬೆಂಗಳೂರು, ಮೇ. 26 : ಬೆಂಗಳೂರು ನಗರಕ್ಕೆ 500 ದಶಲಕ್ಷ ಲೀಟರ್ ಸರಬರಾಜು ಮಾಡುವ ಕಾವೇರಿ 4 ನೇ ಹಂತ, 2ನೇ ಘಟ್ಟ ಯೋಜನೆಗೆ ಮುಖ್ಯಮಂತ್ರಿ ಯಡಿಯೂರಪ್ಪ, 2700 ಎಂ.ಎಂ. ವ್ಯಾಸದ ನೀರಿನ ಕೊಳವೆ ತಯಾರಿಗೆ ಬಳಸುವ ಮೆದು ಉಕ್ಕಿನ ತಟ್ಟೆಗಳನ್ನು ಭಾರತ ಉಕ್ಕು ಪ್ರಾಧಿಕಾರದಿಂದ ಸರಬರಾಜು ಪಡೆಯುವ ಒಪ್ಪಂದ ವಿನಿಮಯದ ಮೂಲಕ ಚಾಲನೆ ನೀಡಿದರು.
6000 ಲೀಟರ್ ಸಾಮರ್ಥ್ಯದ ಟ್ಯಾಂಕರ್ ಸಾಮರ್ಥ್ಯದ 30 ಒಳಚರಂಡಿ ಶುಚಿಗೊಳಿಸುವ ಜೆಟ್ಟಿಂಗ್ ವಾಹನಗಳನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ ಹಾಗೂ ನರ್ಮ್ ಆರ್ಥಿಕ ನೆರವಿನೊಂದಿಗೆ ಜಾರಿಗೊಳ್ಳುತ್ತಿರುವ 3400 ಕೋಟಿ ವೆಚ್ಚದ ಈ ಯೋಜನೆಯಡಿ ನಗರಕ್ಕೆ 500 ದಶಲಕ್ಷ ಲೀಟರ್ ಗಳಷ್ಟು ಬೃಹತ್ ನೀರು ಸರಬರಾಜು ಹಾಗೂ ತ್ಯಾಜ್ಯ ನೀರು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಸಂದರ್ಭವಾಗಿ, ಬರುವ 31ರಂದು ಮುಂದೆ ಸರ್ಕಾರ ಏನು ಮಾಡಬೇಕು, ಯಾವ ದಿಕ್ಕಿನಲ್ಲಿ ನಡೆಯಬೇಕು ಎಂಬ ಬಗ್ಗೆ ಸಾರ್ವಜನಿಕರ ಸಲಹೆ ಪಡೆಯಲು "ವಿಕಾಸ ಸಂಕಲ್ಪ" ವಸ್ತು ಪ್ರದರ್ಶನ ಮತ್ತು ಸಮಾರಂಭವನ್ನು ಏರ್ಪಡಿಸಲಾಗುತ್ತಿದೆ. ನೆನೆಗುದಿಗೆ ಬಿದ್ದಿರುವ ಎಲ್ಲ ಯೋಜನೆಗಳ ಗತಿಯನ್ನು ವೇಗಗೊಳಿಸಿ ಪೂರ್ಣಗೊಳಿಸುವ ಗುರಿ ತಮ್ಮ ಮುಂದಿವೆ ಎಂದು ತಿಳಿಸಿದರು.
ನಗರದ 350 ಕೊಳಚೆ ಪ್ರದೇಶಗಳ ಆಯ್ದ ತಲಾ 50 ನಿವಾಸಿಗಳಿಗೆ ಉಚಿತ ನೀರು ಸರಬರಾಜು ಸಂಪರ್ಕ ನೀಡುವ ರೂ 1.80 ಕೋಟಿ ವೆಚ್ಚದ ಕಾರ್ಯಕ್ರಮದಡಿ 17,500 ಕೊಳಚೆ ನಿವಾಸಿಗಳಿಗೆ ಮೀಟರ್ ವಿತರಿಸಿದರು.
(ದಟ್ಸ್ ಕನ್ನಡ ವಾರ್ತೆ)