ಅಡ್ವಾಣಿಯೇ ಪ್ರಧಾನಿ : ಶಿವಲಿಂಗ ಸ್ವಾಮೀಜಿ ಭವಿಷ್ಯ
ಸಮೀಕ್ಷೆ ಮಾತ್ರವಲ್ಲ ಅನೇಕ ಜ್ಯೋತಿಷಿಗಳು ಕೂಡ ಬಿಜೆಪಿಯೇತರ ಅಭ್ಯರ್ಥಿಯೇ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಬೆಂಗಳೂರು ಮೂಲದ ಜ್ಯೋತಿಷಿ ಶಿವಲಿಂಗ ಸ್ವಾಮೀಜಿ ಅವರ ಲೆಕ್ಕಾಚಾರವೇ ಬೇರೆಯಾಗಿದೆ. ತಮ್ಮ ಅಂತರ್ ದೃಷ್ಟಿ ಮತ್ತು ಅಂದಾಜಿನ ಪ್ರಕಾರ ಎನ್ ಡಿಎ ಮುಖಂಡ ಲಾಲ್ ಕೃಷ್ಣ ಅಡ್ವಾಣಿಯವರು ಭಾರತದ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಅಡ್ವಾಣಿಯವರಿಗೆ ಶನಿದಶೆ ಕಾಡುತ್ತಿದ್ದರೂ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಅವರು ಪ್ರಧಾನಿಯಾಗುವ ಸಾಧ್ಯತೆ ನಿಚ್ಚಳವಾಗಿವೆ ಎಂದು ಶಿವಲಿಂಗ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಆದರೆ, ಮುಂದೆ ಅವರು ಆಡಳಿತಾತ್ಮಕ ಸಮಸ್ಯೆಗಳನ್ನು ಎದುರಿಸಲಿದ್ದಾರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಅಡ್ವಾಣಿಯವರ ಕುಂಡಲಿಯ ಆಳವಾದ ಅಧ್ಯಯನ ನಡೆಸಿರುವ ಶಿವಲಿಂಗ ಸ್ವಾಮೀಜಿ, ಗುರು 11ನೇ ಮನೆಯಲ್ಲಿದ್ದು, ರಾಹು ಮತ್ತು ಕೇತುಗಳು 3 ಮತ್ತು 9ನೇ ಮನೆಯಲ್ಲಿವೆ ಮತ್ತು ಸಿಂಹ ರಾಶಿಯಲ್ಲಿ ಶನಿ ಹಾದುಹೋಗಲಿದೆ. ಗ್ರಹಗಳ ಸ್ಥಿತಿ ನೋಡಿದರೆ ಸದ್ಯದ ಪರಿಸ್ಥಿತಿಯಲ್ಲಿ ಅಡ್ವಾಣಿಯವರು ರಾಜನ ಸ್ಥಾನದಲ್ಲಿ ಕುಳಿತಿದ್ದಾರೆ ಎಂದು ಸ್ವಾಮೀಜಿ ಲೆಕ್ಕಾಚಾರ ಹಾಕಿದ್ದಾರೆ. ಆದರೆ, ನಿರೀಕ್ಷಿತ ಫಲ ದೊರಕಬೇಕೆಂದರೆ ಅಡ್ವಾಣಿಯವರು ಹೆಚ್ಚಿನ ಪ್ರಯತ್ನ ಮಾಡಬೇಕಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.