ಯುಪಿಎಗೆ ಬೆಂಬಲ : ಕುಮಾರಣ್ಣ ಕೇಂದ್ರ ಮಂತ್ರಿ ?

ಆಕಸ್ಮಾತಾಗಿ ಯುಪಿಎ ಅಧಿಕಾರಕ್ಕೆ ಬಂದಲ್ಲಿ ಸರಕಾರದಲ್ಲಿ ಸಚಿವ ಸ್ಥಾನ ಹೊಡೆದುಕೊಳ್ಳಬೇಕು ಎನ್ನುವುದು ಗೌಡರ ತಂತ್ರಗಾರಿಕೆ. ಇದರೊಂದಿಗೆ ರಾಜ್ಯಕಾಂಗ್ರೆಸ್ ನಾಯಕರ ಮೇಲೆ ತಮ್ಮ ಹಿಡಿತದಲ್ಲಿಟ್ಟಕೊಳ್ಳುವುದು. ಜೊತೆಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಪ್ರತಿಸ್ಪರ್ಧಿಯಾಗಿ ನಿಲ್ಲುವುದು ಕೂಡಾ ಅವರ ದೂರಾಲೋಚನೆ. ಒಟ್ಟಿನಲ್ಲಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳಿಗೆ ಮುಗಿಸುವ ಕೆಲಸ ಇದಾಗಿದೆ.
ದಾಬಾಸ್ ಪೇಟೆಯಲ್ಲಿ ತೃತೀಯ ರಂಗದ ಸಮಾವೇಶ ಏರ್ಪಡಿಸಿದ ಗೌಡರು, ಅಂದು ವೀರಾವೇಶದಿಂದ ಮಾತನಾಡಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ಸೇತರ ಸರಕಾರ ರಚಿಸಲು ತೃತೀಯ ರಂಗವನ್ನು ರಚಿಸಲಾಗಿದೆ. ಈ ಎರಡು ಒಕ್ಕೂಟಗಳ ನೇತೃತ್ವದ ಸರಕಾರದ ದುರಾಡಳಿತದಿಂದ ದೇಶದ ಜನತೆ ಬೇಸತ್ತು ಹೋಗಿದ್ದಾರೆ ಆದ್ದರಿಂದ ಮೂರನೇ ಒಕ್ಕೂಟದ ಕಡೆಗೆ ಮತದಾರ ದೃಷ್ಟಿ ಹಾಯಿಸಿದ್ದಾರೆ ಎಂದು ಭಾಷಣ ಬಿಗಿದಿದ್ದರು.
ಆದರೆ, ನಾಲ್ಕನೇ ಹಂತದ ಮತದಾನ ಕೊನೆಗೊಳ್ಳುತ್ತಿದ್ದಂತೆಯೇ ದಿಲ್ಲಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಯಿತು. ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಕಾಂಗ್ರೆಸ್ ಓಲೈಸತೊಡಗಿತು. ಇತ್ತ ತೃತೀಯ ರಂಗದಲ್ಲಿದ್ದ ತೆಲಂಗಾಣ ರಾಷ್ಟ್ರೀಯ ಸಮಿತಿ, ತೆಲುಗು ದೇಶಂ ಪಕ್ಷಗಳು ಎನ್ ಡಿಎ ದತ್ತ ಮುಖ ಮಾಡತೊಡಗಿದವು. ಹಳೆ ಗಂಡನ ಪಾದವೇ ಗತಿ ಎಂಬಂತೆ ಎಡಪಕ್ಷಗಳು ದಿನಕ್ಕೊಂದು ಹೇಳಿಕೆ ನೀಡತೊಡಗಿದವು. ಎಡಪಕ್ಷಗಳ ಮುಖಂಡ ಪ್ರಕಾಶ್ ಕಾರಟ್ ಅವರಂತೂ ಪಲಿತಾಂಶದ ನಂತರ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಹೇಳುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು.
ತೃತೀಯರಂಗ ಎಲ್ಲ ಪಕ್ಷಗಳು ಒಂದೊಂದು ಪಕ್ಷದೊಂದಿಗೆ ಗುರುತಿಸಿಕೊಳ್ಳತೊಡಗುತ್ತಿದ್ದಂತೆಯೇ ಗೌಡರ 50 ವರ್ಷಗಳ ರಾಜಕೀಯ ಅನುಭವ ಕೆಲಸ ಮಾಡತೊಡಗಿತು. ಸುಮ್ಮನಿದ್ದರೇ ಏನೂ ಗಿಟ್ಟಲ್ಲ. ಏನಾದರೂ ಉಪಾಯ ಮಾಡಲೆಬೇಕು ಎಂದು ತಮ್ಮ ಪುತ್ರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರನ್ನು ಸೋನಿಯಾಗಾಂಧಿ ಕಳಿಸಿ ಯುಪಿಎ ಸರಕಾರಕ್ಕೆ ನಮ್ಮ ಬೆಂಬಲವಿದೆ ಎಂಬುದನ್ನು ಖಾತ್ರಿಪಡಿಸಿದ್ದಾರೆ. ಈ ಮೂಲಕ ದಿಲ್ಲಿಯಲ್ಲಿ ತನ್ನ ಸ್ಥಾನವನ್ನು ಗಟ್ಟಿಮಾಡಿಕೊಂಡ ಗೌಡರು, ಮುಂಬರುವ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಕುಮಾರಸ್ವಾಮಿ ಮಂತ್ರಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಮಂಗಳವಾರ ರಾತ್ರಿ 8 ಗಂಟೆಯ ಹೊತ್ತಿಗೆ ಕುಮಾರಸ್ವಾಮಿ ಸೋನಿಯಾ ಗಾಂಧಿ ಭೇಟಿ ತೆರಳಿದ್ದಾರೆ. ಕಳ್ಳನ ಮನಸ್ಸು ಹುಳ್ಳುಳ್ಳಗೆ ಎನ್ನುವಂತೆ ತಮ್ಮ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಕುಮಾರಸ್ವಾಮಿ, ಮಾಧ್ಯಮದವರಿಂದ ತಪ್ಪಿಸಿಕೊಳ್ಳಲು ಮುಖ ಮುಚ್ಚಿಕೊಂಡಿದ್ದಾರೆ. ರಹಸ್ಯವಾಗಿ ಭೇಟಿ ಮಾಡಬೇಕು ಎಂದುಕೊಂಡಿದ್ದ ಗೌಡರ ತಂತ್ರವನ್ನು ಮಾಧ್ಯಮದ ಮಿತ್ರರು ವಿಫಲಗೊಳಿಸಿದ್ದಾರೆ. ಎನ್ ಡಿಟಿವಿ ಮುಖ್ಯ ವರದಿಗಾರ್ತಿ ಬರ್ಕಾ ದತ್ತಾ ಅವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇದೊಂದು ಸೌಹಾರ್ದ ಭೇಟಿ. ದಿಲ್ಲಿ ಸರಕಾರದ ಬಗ್ಗೆ ಮಾತುಕತೆ ನಡೆಸಿಲ್ಲ. ಕರ್ನಾಟಕದ ಸಮಸ್ಯೆಯ ಬಗ್ಗೆ ಮಾತನಾಡಿದ್ದೇನೆ. ನಾವು ಇನ್ನೂ ತೃತೀಯರಂಗದಲ್ಲಿಯೇ ಇದ್ದೇವೆ ಹೀಗೆ ಏನೇನೋ ಹೇಳಿದರು.
ರಾಜ್ಯದ ಸಮಸ್ಯೆಗಳನ್ನು ಚರ್ಚೆ ಮಾಡಲು ಇದು ಈ ಸೂಕ್ತ ಸಮಯವಾ ? ಕೊನೆಯ ಹಂತದ ಚುನಾವಣೆ ನಡೆಯುತ್ತಿದೆ. ಎಲ್ಲರ ಮನಸ್ಸು ಫಲಿತಾಂಶದತ್ತ ಇದೆ. ಈ ಸಮಯದಲ್ಲಿ ಕರ್ನಾಟಕದ ಸಮಸ್ಯೆಗಳನ್ನು ಚರ್ಚಿಸಲು ಸೋನಿಯಾ ಮನಸ್ಸು ಮಾಡಲು ಸಾಧ್ಯವಾ ? ಸದ್ಯ ರಾಜ್ಯದಲ್ಲಿ ಅಂಥ ಗಂಭೀರ ಸಮಸ್ಯೆ ಉಂಟಾಗಿರುವುದಾದರೂ ಏನೂ ? ಸರಿ ನಿಮ್ಮ ಹಾಗೇ ಹೇಳಿಕೆಯಂತೆ ಬರುವುದಾದರೆ, ಸೋನಿಯಾ ಗಾಂಧಿ ಭೇಟಿಗೆ ತೆರಳಿದ್ದು ತಪ್ಪಿಲ್ಲ.
ಆದರೆ, ಮಾದ್ಯಮದವರ ಕಣ್ಣು ತಪ್ಪಿಸಲು ಮುಖ ಮುಚ್ಚಿಕೊಂಡು ಕಳ್ಳನ ಹಾಗೆ ಹೋಗುವ ಅವಶ್ಯಕತೆ ಇತ್ತೇ ? ನಂತರ ನೀವು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ತಡವರಿಸಿದ್ದು ಏಕೆ ? ರಾಜ್ಯದ ಸಮಸ್ಯೆಯನ್ನು ಚರ್ಚಿಸಲು ಇದು ಸಕಾಲವಾ ? ನಿಮಗೆ ರಾಜ್ಯದ ಬಗ್ಗೆ ಅಂಥ ಪ್ರಾಮಾಣಿಕ ಕಳಕಳಿ ಇದ್ದಿದ್ದರೆ, ರಾಜ್ಯದಲ್ಲಿ ಈ ಹಿಂದೆ ಅನೇಕ ಸಮಸ್ಯೆಗಳು ಉಂಟಾಗಿದ್ದವು, ರಸಗೊಬ್ಬರ ಸಮಸ್ಯೆ, ಮಂಗಳೂರು ಪಬ್ ದಾಳಿ, ಚರ್ಚೆ ಮೇಲಿನ ದಾಳಿ ಸೇರಿ ಅನೇಕ ಸಮಸ್ಯೆಗಳು ತೆಲೆದೋರಿದ್ದವು. ಅಂದು ಸೋನಿಯಾ ಭೇಟಿ ಮಾಡಬೇಕು ಅಂತ ನಿಮಗೆ ಅನ್ನಿಸಲಿಲ್ಲವೇ ? ಸುಳ್ಳು ಬಹಳ ದಿನ ನಡೆಯುವುದಿಲ್ಲ ಎನ್ನುವುದು ತಮಗೂ ಕೂಡಾ ಗೊತ್ತಿರುವ ಸಂಗತಿಯಲ್ಲವೇ. ಹಾಗಿದ್ದರೂ ಕೂಡಾ ಸುಳ್ಳ ಸರಮಾಲೆಯೇಕೆ. ಧೈರ್ಯದಿಂದ ಹೇಳಿ, ಯುಪಿಎ ಸರಕಾರಕ್ಕೆ ಜೆಡಿಎಸ್ ಬೆಂಬಲ ನೀಡಲಿದೆ ಅಂತ.












Click it and Unblock the Notifications